ಬೆಂಗಳೂರು, ಆಗಸ್ಟ್ 19: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಸರಣಿಯಲ್ಲಿ ನಡೆದ ಎರಡು ಪಂದ್ಯದಲ್ಲಿಯೂ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾ ಈ ಮುನ್ನಡೆಯನ್ನು ಪಡೆಯಲು ಅತ್ಯಂತ ಅರ್ಹ ತಂಡವಾಗಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಡೇವಿಡ್ ಗೋವರ್ ಹೇಳಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 151 ರನ್ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಈ ಮುನ್ನಡೆಯನ್ನು ಪಡೆಯುವಲ್ಲಿ ವಿರಾಟ್ ಪಡೆ ಯಶಸ್ವಿಯಾಗಿದೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಡೇವಿಡ್ ಗೋವರ್ ಲಾರ್ಡ್ಸ್ ಅಂಗಳದಲ್ಲಿ ತೋರಿದ ಹೋರಾಟದ ಪ್ರದರ್ಶನಕ್ಕೆ ಮಾರುಹೋಗಿದ್ದಾರೆ. ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಂತಿಮ ದಿನದಾಟದ ಆರಂಬಕ್ಕೂ ಮುನ್ನ ಭಾರತ 181 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ಮೂಲಕ ಭಾರತ ಕೇವಲ 154 ರನ್ಗಳ ಮುನ್ನಡೆಯನ್ನಷ್ಟೇ ಪಡೆದುಕೊಂಡಿತ್ತು. ಪಂದ್ಯದಲ್ಲಿ ಮೂರು ಫಲಿತಾಂಶಗಳು ಕೂಡ ಪಡೆಯಲು ಅವಕಾಶವಿದ್ದರೂ ಇಂಗ್ಲೆಂಡ್ ತಂಡ 209 ರನ್ಗಳಿಗೆ 8 ವಿಕೆಟ್ ಪಡೆಯುವ ಮೂಲಕ ಭಾರತದ ಕೈಯಿಂದ ಪಂದ್ಯವನ್ನು ಕಸಿಯುವ ಲಕ್ಷಣವನ್ನು ತೋರಿಸಿತ್ತು.
ಟಿಟ್ವೆಂಟಿ ವಿಶ್ವಕಪ್: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ
ಆದರೆ ಅದಾದ ನಂತರ ಟೀಮ್ ಇಂಡಿಯಾದ ಬಾಲಂಗೋಚಿಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ನಲ್ಲಿ ನೀಡಿದ ಪ್ರದರ್ಶನ ಇಂಗ್ಲೆಂಡ್ ಬೌಲರ್ಗಳಿಗೆ ಆಘಾತ ನೀಡಿತ್ತು. ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಶೈಲಿಯಲ್ಲಿಯೇ ಬ್ಯಾಟ್ ಬೀಸಿದ ಈ ಜೋಡಿಯನ್ನು ಔಟ್ ಮಾಡಲು ಇಂಗ್ಲೆಂಡ್ ಬೌಲರ್ಗಳು ಸಂಪೂರ್ಣವಾಗಿ ವಿಫಲವಾದರು. ಈ ಜೋಡಿ ಮುರಿಯದ 9ನೇ ವಿಕೆಟ್ಗೆ ಬರೊಬ್ಬರಿ 89 ರನ್ಗಳ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ಆತಿಥೇಯ ತಂಡಕ್ಕೆ ಭಾರತ 272 ರನ್ಗಳ ಗುರಿಯನ್ನು ನಿಗದಿಪಡಿಸಿತ್ತು. ಅದಾದ ಬಳಿಕ ಬೌಲಿಂಗ್ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬೂಮ್ರಾ ಜೋಡಿ ಮತ್ತೆ ಆಘಾತ ನೀಡುತ್ತಾ ಸಾಗಿದರು. ಈ ಇಬ್ಬರು ಇಂಗ್ಲೆಂಡ್ ತಂಡದ 7 ವಿಕೆಟ್ ಕಬಳಿಸಿದ್ದರು. ಈ ಮೂಲಕ ಇಂಗ್ಲೆಂಡ್ ತಂಡ ಕೇವಲ 120 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಸ್ಮರಣೀಯ ಗೆಲುವನ್ನು ಲಾರ್ಡ್ಸ್ ಅಂಗಳದಲ್ಲಿ ಸಾಧಿಸಿದೆ.
"ಟೀಮ್ ಇಂಡಿಯಾ ಗಳಿಸಿದ ಈ ಜಯ ಅಂತಿಮ ದಿನದಾಟದಲ್ಲಿ ಮಂತ್ರಮುಗ್ಧಗೊಳಿಸುವಂತಾ ಆಟ. ಅಕ್ಷರಶಃ ಸ್ಥಬ್ಧಗೊಳಿಸಿತ್ತು. ಅಂತಿಮ ಒಂದು ಗಂಟೆಯ ಆಟ ಹಾಗೂ ಬೆಳಗಿನ ಅರ್ಧ ಗಂಟೆಯ ಆಟ ನಿಜಕ್ಕೂ ಪಂದ್ಯವನ್ನು ನಿರ್ಧರಿಸಿತ್ತು. ನನ್ನ ಗೆಳೆಯ ಹಾಗೂ ನನ್ನ ಹಳೆಯ ಸಹ ಆಟಗಾರ ಮೈಕಲ್ ಅಥರ್ಟನ್ ಪದೇ ಪದೇ ಒಂದು ಮಾತು ಹೇಳುತ್ತಿರುತ್ತಾರೆ. ಟೆಸ್ಟ್ ಪಂದ್ಯಗಳಲ್ಲಿ ಒಂದು ಕೆಟ್ಟ ಸೆಶನ್ನಿಂದಾಗಿ ಇಡೀ ಫಂದ್ಯವನ್ನು ಕಳೆದುಕೊಳ್ಳಬೇಕಾಗಬಹುದು ಎಂದು. ಆದರೆ ಇಂಗ್ಲೆಂಡ್ಗೆ ಒಂದು ಕೆಟ್ಟ ಅವಧಿ ಇಂಗ್ಲೆಂಡ್ಗೆ ಅತ್ಯಂತ ದುಬಾರಿಯಾಯಿತು" ಎಂದಿದ್ದಾರೆ ಡೇವಿಡ್ ಗೋವರ್.
"ಆದರೆ ಭಾರತ ತಂಡಕ್ಕೆ ನಾನು ಹ್ಯಾಟ್ಸ್ಆಫ್ ಹೇಳುತ್ತೇನೆ. ಬೌಲರ್ಗಳು ಮುನ್ನುಗ್ಗಿದ ರೀತಿ, ವಿರಾಟ್ ಕೊಹ್ಲಿ ಪ್ರದರ್ಶಿಸಿದ ಉತ್ಸಾಹ ಪ್ರತಿಯೊಬ್ಬರಿಗೂ ಭಾರತದ ಈ ತಂಡ ಎಷ್ಟು ಬದ್ಧತೆಯಿಂದ ಕೂಡಿದೆ ಎಂಬುದನ್ನು ನಿರೂಪಿಸಿತು. ಈಗ ಅವರು 1-0 ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಅವರು ಅದಕ್ಕಾಗಿ ತುಂಬಾ ಅರ್ಹರೂ ಆಗಿದ್ದಾರೆ" ಎಂದು ಗೋವರ್ ಹೇಳೀಕೆ ನೀಡಿದ್ದಾರೆ.
ಟಿ ಟ್ವೆಂಟಿ ವಿಶ್ವಕಪ್ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರು
"ಇದೊಂದು ಶ್ರೇಷ್ಠವಾದ ಪಂದ್ಯವಾಗಿತ್ತು. ಇಂಥಾ ಆಟಗಳನ್ನೇ ನಾವು ಸಂಪ್ರದಾಯವಾದಿಗಳು ಬಯಸುವುದು. ಐದು ದಿನಗಳವರೆಗೆ ನಡೆಯುವ ಆಟವನ್ನು ನಾವು ಇಷ್ಟಪಡುತ್ತೇವೆ. ಇದರಲ್ಲಿ ರೋಚಕತೆ, ತಿರುವುಗಳು ಸಾಕಷ್ಟಿದ್ದು ಅಭಿಮಾನಿಗಳು ಯಾವ ತಂಡ ಗೆಲ್ಲಲಿದೆ ಎಮದು ಊಹಿಸುತ್ತಲೇ ತಿರುವುಗಳನ್ನು ಪಡೆದುಕೊಳ್ಳುತ್ತಾ ಐದು ದಿನಗಳ ರೋಮಾಂಚನಕಾರಿಯಾಗಿ ನಡೆದಿತ್ತು. ಇದಕ್ಕಾಗಿಯೇ ನಾವು ಟೆಸ್ಟ್ ಕ್ರಿಕೆಟ್ಅನ್ನು ಇಷ್ಟಪಡುತ್ತೇವೆ. ಅದೇ ಕಾರಣಕ್ಕಾಗಿ ಇದು ಮನೋರಂಜನೆಯನ್ನು ನೀಡುತ್ತದೆ. ಸೀಮಿತ ಓವರ್ಗಳ ಕ್ರಿಕೆಟ್ಗಿಂತ ಭಿನ್ನವಾದ ರೀತಿಯಲ್ಲಿ ನಾವು ಇತ್ತೀಚೆಗೆ ತುಂಬಾ ಪಂದ್ಯಗಳನ್ನು ನೋಡುತ್ತಿದ್ದೇವೆ" ಎಂದಿದ್ದಾರೆ ಡೇವಿಡ್ ಗೋವರ್.