
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪುನರಾಗಮನದ ಬಗ್ಗೆ ಮಾಜಿ ಆರಂಭಿಕ ಆಟಗಾರ ಕೆ ಶ್ರೀಕಾಂತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಐಪಿಎಲ್ ಈ ವರ್ಷ ನಡೆಯದಿದ್ದರೆ ಧೋನಿ ಪಾಲಿಗೆ ಕಷ್ಟಕರವಾಗಿರಲಿದೆ ಎಂದು ಶ್ರೀಕಾಂತ್ ಹೇಳಿಕೊಂಡಿದ್ದಾರೆ.
ಈ ವರ್ಷ ಐಪಿಎಲ್ ನಡೆದರೆ ಅದರ ಪ್ರದರ್ಶನದ ಆಧಾರದಲ್ಲಿ ಧೋನಿಗೆ ವಿಶ್ವಕಪ್ನಲ್ಲಿ ಸ್ಥಾನವನ್ನು ಪಡೆಯಲು ಅವಕಾಶವಿದೆ. ಆದರೆ ಅದು ಅಸಾಧ್ಯವಾದಲ್ಲಿ ಟೀಮ್ ಇಂಡಿಯಾದಲ್ಲಿ ಧೋನಿ ಮತ್ತೆ ಸ್ಥಾನವನ್ನು ಗಳಿಸಿದುವುದು ಸುಲಭವಲ್ಲ ಎಂದು ಕೆ.ಶ್ರೀಕಾಂತ್ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸೀಮಿತ ಓವರ್ನ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ನಲ್ಲಿ ಮಿಂಚುತ್ತಿರುವ ಕೆಎಲ್ ರಾಹುಲ್ ವಿಶ್ವಕಪ್ನಲ್ಲಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಲಿದ್ದಾರೆ ಎಂದು ತನ್ನ ಅಭಿಪ್ರಾಯವನ್ನು ಶ್ರೀಕಾಂತ್ ವ್ಯಕ್ತಪಡಿಸಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ನ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಮಾತನಾಡಿದರು.
ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಆಟವಾಡಲು ಫಿಟ್ ಆಗಿದ್ದಾರೆ ಮತ್ತು ಆವರೋರ್ವ ದಂತಕತೆ. ಆದರೆ ತಂಡದ ಸಧ್ಯದ ಆದ್ಯತೆಯನ್ನು ಗಮನಿಸಿದಾಗ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದು ಸುಲಭ ಎನಿಸುತ್ತಿಲ್ಲ ಎಂದು ಶ್ರೀಕಾಂತ್ ಹೇಳಿದ್ದಾರೆ.
ಕಳೆದ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ನಲ್ಲಿ ಆಘಾತಕಾರಿಯಾಗಿ ಸೋಲು ಕಂಡು ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದ ಬಳಿಕ ಧೋನಿ ಕ್ರಿಕೆಟ್ ಅಂಗಳದಲ್ಲಿ ಕಾಣಿಸಿಕೊಂಡಿಲ್ಲ. ಕ್ರಿಕೆಟ್ ವಿಚಾರದಲ್ಲಿ ಧೋನಿ ತನ್ನ ನಿರ್ಧಾರವನ್ನು ಧೋನಿ ಈವರೆಗೂ ಬಹಿರಂಗಪಡಿಸಿಲ್ಲ. ಹೀಗಾಗಿ ಇದು ಸಾಕಷ್ಟು ಕುತೂಹಲಕಾರಿಯಾಗಿಯೇ ಉಳಿದುಕೊಂಡಿದೆ.