ಐಪಿಎಲ್ 14ನೇ ಆವೃತ್ತಿಯಲ್ಲಿ ಕೊರೊನಾ ವೈರಸ್ ಆತಂಕವನ್ನು ಸೃಷ್ಟಿಸಿದೆ. ಕೆಕೆಆರ್ ತಂಡದ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದೀಗ ಟೂರ್ನಿಯ ಮೇಲೆ ಆತಂಕ ಮೂಡಲು ಕಾರಣವಾಗಿದೆ. ಈ ವೈರಸ್ನ ಭೀತಿಯ ಮಧ್ಯೆಯೂ ಸಣ್ಣ ನಿರಾಳತೆಯ ಸುದ್ದಿಯೊಂದು ಹೊರಬಿದ್ದಿದೆ.
ಕೆಕೆಆರ್ ತಂಡದ ಇಬ್ಬರು ಆಟಗಾರರು ಕೊರೋನಾ ಸೋಂಕಿಗೆ ತುತ್ತಾದ ನಂತರ ಉಳಿದ ಎಲ್ಲಾ ಆಟಗಾರರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಇದರಲ್ಲಿ ಉಳಿದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗಳ ವರದಿ ನೆಗೆಟಿವ್ ಬಂದಿದೆ ಎಂದು ಕ್ರಿಕ್ಇನ್ಫೋ ವರದಿ ಮಾಡಿದೆ.
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾ ವೈರಸ್ ಪ್ರಕರಣಗಳು ಕೆಲ ಫ್ರಾಂಚೈಸಿಗಳಲ್ಲಿ ಕಾಣಿಸಿಕೊಂಡು ಆತಂಕವನ್ನು ಮೂಡಿಸಿತ್ತು. ಆದರೆ ಬಯೋಬಬಲ್ಗೆ ಸೇರ್ಪಡೆಗೊಳ್ಳುವ ಮುನ್ನ ಇವು ಬೆಳಕಿಗೆ ಬಂದ ಕಾರಣ ನಿಯಂತ್ರಣ ಮಾಡಲಾಗಿತ್ತು. ಬಳಿಕ ಐಪಿಎಲ್ ಯಶಸ್ವಿಯಾಗಿ ನಡೆಯಲು ಕಾರಣವಾಯಿತು.
ಆದರೆ ಈಗ ಈ ಬಾರಿಯ ಐಪಿಎಲ್ ಆರಂಭವಾದ ನಂತರ ಬಯೋಬಬಲ್ ಒಳಗೆ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದು ಕೇವಲ ಕೆಕೆಆರ್ ಫ್ರಾಂಚೈಸಿಗೆ ಮಾತ್ರವಲ್ಲದೆ ಇಡೀ ಟೂರ್ನಿಯ ಮೇಲೆ ಪರಿಣಾಮ ಬೀರುವ ಸಂಭವವೂ ಇದೆ. ಆದರೆ ಉಳಿದ ಸದಸ್ಯರ ನೆಗೆಟಿವ್ ವರದಿ ಒಂದು ಹಂತಕ್ಕೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿರುವುದು ಸುಳ್ಳಲ್ಲ.
ಈ ಮಧ್ಯೆ ಕೊರೊನಾ ವೈರಸ್ಗೆ ತುತ್ತಾಗಿರುವ ಇಬ್ಬರು ಆಟಗಾರರಾದ ವರುಣ್ ಚಕ್ರವರ್ತಿ ಹಾಗೂ ಸಂದೀಪ್ ವಾರಿಯರ್ ಬಯೋಬಬಲ್ ತೊರೆದಿದ್ದಾರೆ ಎನ್ನಲಾಗಿದೆ. ಈ ಆಟಗಾರರ ಚೇತರಿಗೆಗೆ ಆರ್ಸಿಬಿ ಫ್ರಾಂಚೈಸಿ ಶುಭಹಾರೈಸಿದೆ.