ಅಸಲಿ ಕಾರಣ ಇದು
ಟೀಮ್ ಇಂಡಿಯಾ ಇನ್ನಿಂಗ್ಸ್ ವೇಳೆ 20ನೇ ಓವರ್ ಬೌಲಿಂಗ್ ಮಾಡಿದ್ದು ಐರ್ಲೆಂಡ್ ತಂಡದ ಬೌಲರ್ ಮಾರ್ಕ್ ಅಡೈರ್. ಈ ಓವರ್ನ ಮೊದಲ ಎಸೆತವನ್ನು ಹಾರ್ದಿಕ್ ಪಾಂಡ್ಯ ಬೌಂಡರಿ ಕಡೆಗೆ ಅಟ್ಟಿದ್ದರು. ಆದರೆ, ಐರ್ಲೆಂಡ್ ತಂಡದ ನಾಯಕ ಬಾಲ್ಬಿರ್ನಿ ಚೆಂಡನ್ನು ತಡೆದು ರನ್ ಉಳಿಸಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ಜೋಡಿ 2 ರನ್ ಓಡಿತ್ತಾ ಅಥವಾ ಇಲ್ಲವಾ ಎಂಬ ಸಂದೇಹ ಉಂಟಾಗಿತ್ತು ಹಾಗೂ ತಂಡದ ಮೊತ್ತಕ್ಕೆ 2 ರನ್ ಸೇರ್ಪಡೆಗೊಂಡಿತ್ತು. ಆದರೆ, ಇನ್ನಿಂಗ್ಸ್ ಮುಕ್ತಾಯವಾದ ನಂತರ ಈ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಹರ್ಷಲ್ ಪಟೇಲ್ ಯಾವುದೇ ರನ್ ಓಡಿಲ್ಲ ಎಂಬುದು ಖಾತರಿಯಾಗಿ ನೀಡಲಾಗಿದ್ದ 2 ರನ್ಗಳನ್ನು ಕಡಿತಗೊಳಿಸಲಾಯಿತು. ಹೀಗಾಗಿಯೇ ಟೀಮ್ ಇಂಡಿಯಾ ಐರ್ಲೆಂಡ್ ತಂಡಕ್ಕೆ ನೀಡಿದ್ದ 228 ರನ್ಗಳ ಗುರಿ 226ಕ್ಕೆ ಕುಸಿತವಾಯಿತು.
ರೋಚಕ ಜಯ ಕಂಡ ಇಂಡಿಯಾ
ಇನ್ನು ಟೀಮ್ ಇಂಡಿಯಾ ಇಷ್ಟು ಬೃಹತ್ ಮೊತ್ತ ಕಲೆ ಹಾಕಿದರೂ ಸಹ ಎದುರಾಳಿ ಐರ್ಲೆಂಡ್ ಚೇಸ್ ಮಾಡುವ ಸನಿಹಕ್ಕೆ ಬಂದಿತ್ತು. ಪಂದ್ಯದ ಅಂತಿಮ ಓವರ್ನಲ್ಲಿ ಐರ್ಲೆಂಡ್ ತಂಡಕ್ಕೆ ಗೆಲ್ಲಲು 17 ರನ್ಗಳ ಅವಶ್ಯಕತೆಯಿತ್ತು. ಅಂತಿಮ ಓವರ್ ಎಸೆದ ಉಮ್ರಾನ್ ಮಲಿಕ್ 2 ಬೌಂಡರಿ ಸಹಿತ 12 ರನ್ ನೀಡಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಹೀಗೆ ಅಂತಿಮ ಎಸೆತದವರೆಗೂ ಪಂದ್ಯ ರೋಚಕತೆಯಿಂದ ಕೂಡಿತ್ತು.
2 ಪ್ರಶಸ್ತಿ ಗೆದ್ದ ದೀಪಕ್ ಹೂಡಾ
ಈ ಪಂದ್ಯದಲ್ಲಿ ಅಬ್ಬರದ ಶತಕ ಸಿಡಿಸಿ ಟೀಮ್ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ದೀಪಕ್ ಹೂಡಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಗೂ ಐರ್ಲೆಂಡ್ ವಿರುದ್ಧದ ಪ್ರಥಮ ಪಂದ್ಯದಲ್ಲಿಯೂ 29 ಎಸೆತಗಳಲ್ಲಿ ಅಜೇಯ 47 ರನ್ ಬಾರಿಸಿದ್ದ ದೀಪಕ್ ಹೂಡಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು.