ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೋಪ್ರಾ
ಸದ್ಯ ವೀಕ್ಷಕ ವಿವರಣೆ ಮತ್ತು ವಿಶ್ಲೇಷಣೆಯಿಂದ ಖ್ಯಾತರಾಗಿರುವ ಆಕಾಸ್ ಚೋಪ್ರಾ ವೀಕ್ಷಕರ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೋರ್ವ ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಬ್ಬರು ಆಲ್ರೌಂಡರ್ಗಳನ್ನು ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದ್ದರು ಇದಕ್ಕೆ ಆಕಾಶ್ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯ ಆಯ್ಕೆ ಬಗ್ಗೆ ಚೋಪ್ರಾ ಅನುಮಾನ
ಈ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸರಣಿಗೆ ಹಾರ್ದಿಕ್ ಪಾಂಡ್ಯ ಆಯ್ಕೆಯಾಗುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನು ಕೂಡ ಆಕಾಶ್ ಚೋಪ್ರ ನೀಡಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಕಳೆದ ಹಲವು ಸಮಯಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ
ಹಾರ್ದಿಕ್ ಪಾಂಡ್ಯ ಕಳೆದ ವರ್ಷ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಬೆನ್ನುನೋವಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅದಾದ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಅವರು ಪಾಲ್ಗೊಂಡಿಲ್ಲ. ಚೇತರಿಕೆ ಕಂಡು ಮರಳುವ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆಯಾಗಿತ್ತು. ಜೊತೆಗೆ ಸುದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ಹಾರ್ದಿಕ್ ಎಷ್ಟು ಫಿಟ್ ಆಗಿದ್ದಾರೆ ಎಂಬುದು ಕೂಡ ಪ್ರಮುಖ ಸಂಗತಿಯಾಗಿದ್ದಾರೆ ಎನ್ನುವುದು ಆಕಾಶ್ ಚೋಪ್ರಾ ನೀಡಿದ ಕಾರಣವಾಗಿದೆ.
ಜಡೇಜಾ ಆಯ್ಕೆಗಿಂತ ಅಶ್ವಿನ್ ಕುಲ್ದೀಪ್ ಬೆಸ್ಟ್
ಈ ಸಂದರ್ಭದಲ್ಲಿ ಆಕಾಶ್ ಚೋಪ್ರಾ ಇನ್ನೋರ್ವ ಆಲ್ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ಆಯ್ಕೆಯಾಗುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಕುಲ್ದೀಪ್ ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ಅವಕಾಶ ನೀಡುವುದೇ ಉತ್ತಮ. ಅಶ್ವಿನ್ ಅವರನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಹೀಗಾಗಿ ಆಸ್ಟ್ರೇಲಿಯಾ ನೆಲದಲ್ಲಿ ಜಡೇಜಾ ಮತ್ತು ಪಾಂಡ್ಯ ತಂಡದಲ್ಲಿ ಆಡುವುದನ್ನು ಮರೆಯಬೇಕಷ್ಟೆ." ಎಂದು ಆಕಾಶ್ ಅಭಿಪ್ರಾಯ ಪಟ್ಟಿದ್ದಾರೆ.