
ಎಬಿ ಡಿವಿಲಿಯರ್ಸ್ ನನ್ನನ್ನು ತಂಡದಿಂದ ಹೊರಗಿಟ್ಟರು!
ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಂಡಿದ್ದರ ಕುರಿತು ಮಾತನಾಡಿರುವ ಖಾಯ ಜೊಂಡೋ ಎಬಿ ಡಿವಿಲಿಯರ್ಸ್ ಅವಕಾಶ ನೀಡದೆ ತಂಡದಿಂದ ಹೊರಗಿಟ್ಟರು ಎಂದು ಆರೋಪಿಸಿದ್ದಾರೆ. ಭಾರತ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಜೆಪಿ ಡುಮಿನಿ ಗಾಯಕ್ಕೊಳಗಾದರು. ಹೀಗಾಗಿ ಜೆಪಿ ಡುಮಿನಿ ಜಾಗಕ್ಕೆ ನನ್ನನ್ನು ಆಯ್ಕೆ ಮಾಡಬೇಕಾಗಿತ್ತು, ಆದರೆ ಎಬಿಡಿ ವಿಲಿಯರ್ಸ್ ನನಗೆ ಅವಕಾಶ ನೀಡದೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನವನ್ನೇ ಪಡೆದುಕೊಳ್ಳದಿದ್ದ ಎಲ್ಗರ್ಗೆ ಅವಕಾಶ ನೀಡಿದರು ಎಂದು ಖಾಯಾ ಜೊಂಡೊ ಆರೋಪಿಸಿದ್ದಾರೆ.

ಅಂದೇ ನಾನು ಆರಾಧಿಸುತ್ತಿದ್ದ ಡಿವಿಲಿಯರ್ಸ್ ಮೇಲೆ ನನಗೆ ಗೌರವ ಹೋಯಿತು
ಎಬಿ ಡಿವಿಲಿಯರ್ಸ್ ನಡೆದುಕೊಂಡ ರೀತಿ ನೋಡಿ ಒಂದುಕ್ಷಣ ನಾನೇ ಬೇಸರಕ್ಕೊಳಗಾದೆ, ಎಬಿ ಡಿವಿಲಿಯರ್ಸ್ ನನ್ನ ಹೀರೋ ಎಂದು ಆರಾಧಿಸುತ್ತಾ ಬೆಳೆದು ಬಂದ ನಾನು ಎಬಿ ಡಿವಿಲಿಯರ್ಸ್ ಕೈಗೊಂಡ ನಿರ್ಧಾರ ನೋಡಿ ಆತನ ಮೇಲಿಟ್ಟಿದ್ದ ಗೌರವವನ್ನು ಕಳೆದುಕೊಂಡೆ ಎಂದು ಖಾಯಾ ಜೊಂಡೊ ಹೇಳಿದ್ದಾರೆ. ತನ್ನ ಬದಲು ಬೇರೆ ಆಟಗಾರನನ್ನು ಆಯ್ಕೆ ಮಾಡಿದ ಕೂಡಲೇ ಬಳಿ ಬಂದ ಎಬಿ ಡಿವಿಲಿಯರ್ಸ್ ತಾನು ಕೈಗೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಆರಂಭಿಸಿದರು. ಇದನ್ನೆಲ್ಲಾ ಕಂಡ ನನಗೆ ಆತನ ಮೇಲಿದ್ದ ಪ್ರೀತಿ ಮತ್ತು ಗೌರವ ಅಲ್ಲೇ ಕುಗ್ಗಿ ಹೋಯಿತು ಎಂದು ಖಾಯಾ ಜೊಂಡೊ ಬೇಸರ ವ್ಯಕ್ತಪಡಿಸಿದ್ದಾರೆ.

ಬೇಸರದಿಂದ ನಾನೇ ತಂಡ ಬಿಟ್ಟು ಬಂದೆ
ಎಬಿ ಡಿವಿಲಿಯರ್ಸ್ ನಡೆದುಕೊಂಡ ರೀತಿ ಕಂಡ ನನಗೆ ನಿಜಕ್ಕೂ ಬೇಸರ ಮತ್ತು ಆಘಾತವಾಯಿತು. ಎಬಿ ಡಿವಿಲಿಯರ್ಸ್ ತೆಗೆದುಕೊಂಡ ನಿರ್ಧಾರದ ಕುರಿತು ನನ್ನ ಬಳಿಯೇ ಬಂದು ಸಮರ್ಥಿಸಿಕೊಂಡಾಗ ಅವರ ಮೇಲಿನ ಗೌರವ ಹೋಯಿತು ಮತ್ತು ತಂಡಕ್ಕೆ ನನ್ನ ಅಗತ್ಯವಿಲ್ಲ ಎಂಬ ವಿಷಯ ಕೂಡ ಅರ್ಥವಾಯಿತು. ಹೀಗಾಗಿಯೇ ನಾನು ಆ ಪಂದ್ಯದ ನಂತರ ತಂಡದಿಂದ ಸ್ವತಃ ಹೊರಗುಳಿದೆ ಎಂದು ಖಾಯಾ ಜೊಂಡೊ ಹೇಳಿಕೊಂಡಿದ್ದಾರೆ.


Click it and Unblock the Notifications
