
"ಎಂ ಎಸ್ ಧೋನಿ - ದ ಆನ್ಟೋಲ್ಡ್ ಸ್ಟೋರಿ" ಎಂಬ ಸಿನಿಮಾವನ್ನು ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರದ ಮೇಲೆ ಬಾಲಿವುಡ್ ಚಿತ್ರರಂಗದಲ್ಲಿ ನಿರ್ಮಿಸಲಾಗಿತ್ತು. ಈ ಚಿತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪಾತ್ರವನ್ನು ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವೀಕ್ಷಕರು ಈ ಚಿತ್ರವನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿ ದೊಡ್ಡ ಮಟ್ಟದಲ್ಲಿಯೇ ಚಿತ್ರಮಂದಿರಕ್ಕೆ ಬಂದು ವೀಕ್ಷಿಸಿದ್ದರು.
ಹೀಗಾಗಿಯೇ ಎಂಎಸ್ ಧೋನಿ ಅವರು ಹೊರಗಿನ ಜನರಿಗೆ ಕ್ರಿಕೆಟರ್ ಆಗಿ ಮಾತ್ರವಲ್ಲದೇ ಓರ್ವ ವ್ಯಕ್ತಿಯಾಗಿಯೂ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದು ತಿಳಿದುಬಂತು. ಈ ಚಿತ್ರದ ನಂತರ ಎಂಎಸ್ ಧೋನಿ ಕ್ರಿಕೆಟ್ ಜೀವನದಿಂದ ದೂರ ಸರಿದ ನಂತರ ನಟನೆಯತ್ತ ಮುಖ ಮಾಡಲಿದ್ದಾರಾ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿದ್ದವು.
ಓರ್ವ ಬಾಲಿವುಡ್ ನಟನಿಗೆ ಇರಬೇಕಾದ ಎಲ್ಲಾ ಲಕ್ಷಣಗಳು ಎಂಎಸ್ ಧೋನಿ ಅವರಲ್ಲಿದೆ. ಹೀಗಾಗಿಯೇ ಎಂಎಸ್ ಧೋನಿ ಯಾವುದಾದರೂ ಸಂದರ್ಶನಗಳಲ್ಲಿ ಭಾಗವಹಿಸಿದಾಗ ಬಾಲಿವುಡ್ ಕಡೆ ಮುಖ ಮಾಡುತ್ತೀರಾ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತದೆ.
ಇನ್ನು 2020ರ ಆಗಸ್ಟ್ 15ರಂದು ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿ ಕೇವಲ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮಾತ್ರ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಇನ್ನು ಕೆಲ ವರ್ಷಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದಲೂ ಎಂಎಸ್ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದು, ನಂತರದ ದಿನಗಳಲ್ಲಿ ಎಂ ಎಸ್ ಧೋನಿ ನಾಯಕ ನಟನಾಗಿ ಬಾಲಿವುಡ್ ಕಡೆ ಮುಖ ಮಾಡಲಿದ್ದಾರಾ ಎಂಬ ಪ್ರಶ್ನೆ ಇದೀಗ ಸಾಕಷ್ಟು ಚರ್ಚೆಗೀಡಾಗಿದೆ.
ಇತ್ತೀಚೆಗಷ್ಟೇ ಅಭಿಮಾನಿಗಳ ಜತೆ ನಡೆದ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದ ಎಂ ಎಸ್ ಧೋನಿ ಅಲ್ಲಿಯೂ ಕೂಡ ಇದೇ ರೀತಿಯ ಪ್ರಶ್ನೆಯನ್ನು ಎದುರಿಸಿದ್ದಾರೆ. ಹೀಗಾಗಿ ಈ ಪ್ರಶ್ನೆಗೆ ಧೋನಿ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದು, ತಮಗೆ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಯಾವುದೇ ರೀತಿಯ ಆಸೆ ಮತ್ತು ಉದ್ದೇಶ ಇಲ್ಲ ಎಂದಿದ್ದಾರೆ.
ಕ್ರಿಕೆಟ್ನಿಂದ ದೂರಸರಿದ ನಂತರ ನೀವು ಬಾಲಿವುಡ್ ಕಡೆ ಮುಖ ಮಾಡುತ್ತೀರಾ ಎಂಬ ಪ್ರಶ್ನೆ ಎದುರಾದಾಗ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ 'ಬಾಲಿವುಡ್ ಈಸ್ ನಾಟ್ ಮೈ ಕಪ್ ಆಫ್ ಟೀ' ಎಂದು ಉತ್ತರವನ್ನು ನೀಡುವುದರ ಮೂಲಕ ನಟನೆಯಲ್ಲಿ ತಮಗೆ ಆಸಕ್ತಿಯಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
'ಈಗಾಗಲೇ ಸಾಕಷ್ಟು ಜಾಹೀರಾತುಗಳಲ್ಲಿ ನಾನು ಅಭಿನಯಿಸುತ್ತಿದ್ದೇನೆ. ಜಾಹೀರಾತುಗಳಲ್ಲಿ ಅಭಿನಯಿಸಲು ನನಗೆ ಯಾವುದೇ ರೀತಿಯ ಮುಜುಗರವಿಲ್ಲ. ಆದರೆ ಸಿನಿಮಾಗಳಲ್ಲಿ ಅಭಿನಯಿಸುವುದು ಅಷ್ಟು ಸುಲಭವಲ್ಲ, ಅದಕ್ಕೆಂದೇ ಹಲವಾರು ನಾಯಕನಟರಿದ್ದಾರೆ. ಅವರು ನಟನೆಯನ್ನು ಮಾಡಲಿ, ನಾನು ನನ್ನ ಪಾಡಿಗೆ ಕ್ರಿಕೆಟ್ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ' ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿಕೆಯನ್ನು ನೀಡಿದ್ದಾರೆ.