IND Vs AUS T20: ಪಂದ್ಯಕ್ಕೂ ಮುನ್ನ ಜ್ವರದಿಂದ ಬಳಲುತ್ತಿದ್ದ ಸೂರ್ಯಕುಮಾರ್ ಯಾದವ್ ಡಾಕ್ಟರ್ ಹತ್ತಿರ ಹೇಳಿದ್ದೇನು?

ಹೈದರಾಬಾದ್ನಲ್ಲಿ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದ ಆರಂಭಕ್ಕೂ ಮೊದಲು ಹೊಟ್ಟೆನೋವು ಮತ್ತು ಜ್ವರದಿಂದ ಬಳಲುತ್ತಿದ್ದೆ ಎಂದು ಸೂರ್ಯಕುಮಾರ್ ಯಾದವ್ ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯ ನಿರ್ಣಾಯಕವಾಗಿದ್ದರಿಂದ, ವೈದ್ಯಕೀಯ ಸಿಬ್ಬಂದಿ ಬಳಿ ಏನಾದರೂ ಮಾಡಿ ಆದರೆ, ಆಟಕ್ಕೆ ನಾನು ಸಿದ್ಧವಾಗಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಿದ್ದಾರೆ.
ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸರಣಿಯ ಅಂತಿಮ ಟ20 ಪಂದ್ಯದಲ್ಲಿ ಅದ್ಭುತವಾದ ಇನ್ನಿಂಗ್ಸ್ ಆಡಿದರು. 36 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಸಿಕ್ಸರ್ಗಳ ನೆರವಿನಿಂದ 69 ರನ್ ಗಳಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಭಾರತ 19.5 ಓವರ್ಗಳಲ್ಲಿ 6 ವಿಕೆಟ್ಗಳೊಂದಿಗೆ 187 ರನ್ ಗಳಿಸಿ ಜಯ ಸಾಧಿಸುವ ಮೂಲಕ ಸರಣಿ ಗೆದ್ದಿತು.
ಸೂರ್ಯಕುಮಾರ್ ಯಾದವ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅಕ್ಷರ್ ಪಟೇಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಆಟಕ್ಕೂ ಮೊದಲು ತಾವು ಅನಾರೋಗ್ಯವಾಗಿದ್ದು, ನಂತರ ವೈದ್ಯಕೀಯ ಸಿಬ್ಬಂದಿ ಜೊತೆಗಿನ ಮಾತುಕತೆ ಬಗ್ಗೆ ಸೂರ್ಯಕುಮಾರ್ ಯಾದವ್ ಮಾತನಾಡಿದ್ದಾರೆ.

ಪಂದ್ಯಕ್ಕೂ ಮುನ್ನ ಅನಾರೋಗ್ಯದಿಂದ ಬಳಲುತ್ತಿದ್ದೆ
"ಹವಾಮಾನ ಬದಲಾವಣೆ ಮತ್ತು ಪ್ರಯಾಣದ ಕಾರಣ, ನನಗೆ ಸ್ವಲ್ಪ ಹೊಟ್ಟೆ ನೋವು ಇತ್ತು ಮತ್ತು ನಂತರ ನನಗೆ ಜ್ವರವೂ ಬಂದಿತು. ಆದರೆ, ನಮಗೆ ಇದು ನಿರ್ಣಾಯಕ ಪಂದ್ಯ ಎಂದು ತಿಳಿದಿತ್ತು. ಹಾಗಾಗಿ ನಾನು ವೈದ್ಯರು ಮತ್ತು ಫಿಸಿಯೋಗೆ ಹೇಳಿದೆ, ಇದು ವಿಶ್ವಕಪ್ ಫೈನಲ್ ಆಗಿದ್ದರೆ, ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ? ನಾನು ಈ ರೀತಿ ಅನಾರೋಗ್ಯದಿಂದ ಇರಲು ಸಾಧ್ಯವಿಲ್ಲ. ಏನು ಬೇಕಾದರೂ ಮಾಡು, ಯಾವುದಾದರೂ ಔಷಧಿ ಅಥವಾ ಇಂಜೆಕ್ಷನ್ ಕೊಡಿ, ಆದರೆ ನನ್ನನ್ನು ಆಟಕ್ಕೆ ಸಿದ್ಧಗೊಳಿಸಿ" ಎಂದು ಮನವಿ ಮಾಡಿದ್ದಾಗಿ ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.
"ಭಾರತದ ಜರ್ಸಿಯನ್ನು ಧರಿಸಿ, ಮೈದಾನಕ್ಕೆ ಕಾಲಿಟ್ಟಾಗ ವಿಭಿನ್ನ ಭಾವನೆ ಇರುತ್ತದೆ" ಎಂದು ಅವರು ಹೇಳಿದ್ದಾರೆ.
IND vs AUS: ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಮಣಿಸಿ ಪಾಕಿಸ್ತಾನದ ಟಿ20 ದಾಖಲೆ ಮುರಿದ ಭಾರತ

ಯಶಸ್ಸಿನ ಗುಟ್ಟು ಹೇಳಿದ ಸೂರ್ಯಕುಮಾರ್ ಯಾದವ್
2021ರ ವರ್ಷ ಮಾರ್ಚ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನಂತರ, ಸೂರ್ಯಕುಮಾರ್ ಯಾದವ್ ಟಿ20 ಸ್ವರೂಪದಲ್ಲಿ ಭಾರತೀಯ ಬ್ಯಾಟಿಂಗ್ನ ಪ್ರಮುಖ ಶಕ್ತಿಯಾಗಿದ್ದಾರೆ. ತಮ್ಮ ಅದ್ಭುತ ಯಶಸ್ಸಿನ ಹಿಂದಿನ ಕಾರಣವನ್ನು ಅವರು ಬಹಿರಂಗ ಪಡಿಸಿದ್ದಾರೆ.
"ನಾನು ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತೇನೆ. ಯಾವಾಗಲೂ ನನ್ನನ್ನು ವ್ಯಕ್ತಪಡಿಸುವುದನ್ನು ನಂಬುತ್ತೇನೆ. ನನ್ನ ಯಶಸ್ಸಿನ ಪ್ರಮಾಣವು 75 ಪ್ರತಿಶತಕ್ಕಿಂತ ಹೆಚ್ಚಿದ್ದರೆ, ನನಗೆ ವಿಷಯಗಳು ಉತ್ತಮವಾಗಿ ನಡೆಯುತ್ತಿದ್ದರೆ, ಆ ಹಂತದಲ್ಲಿಯೇ ಆಟವನ್ನು ಮುಗಿಸಲು ನಾನು ಪ್ರಯತ್ನಿಸುತ್ತೇನೆ." ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ಕೊಹ್ಲಿ-ಯಾದವ್ ಶತಕದ ಜೊತೆಯಾಟ
ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆರಂಭಿಕರಾದ ಕೆಎಲ್ ರಾಹುಲ್ (1) ಮತ್ತು ರೋಹಿತ್ ಶರ್ಮಾ (17) ಬೇಗನೆ ಔಟಾದ ನಂತರ. ಜೊತೆಯಾದ ಸೂರ್ಯಕುಮಾರ್ ಮತ್ತು ವಿರಾಟ್ ಕೊಹ್ಲಿ ಮೂರನೇ ವಿಕೆಟ್ಗೆ 104 ರನ್ ಸೇರಿಸಿದರು. ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 63 ಗಳಿಸಿದರು.
ಇದುವರೆಗೂ 31 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ 37.04 ಸರಾಸರಿ ಮತ್ತು 174.71 ಸ್ಟ್ರೈಕ್ರೇಟ್ನಲ್ಲಿ 926 ರನ್ ಗಳಿಸಿದ್ದಾರೆ. ಇದುವರೆಗೂ 7 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್
ಸೂರ್ಯಕುಮಾರ್ ಯಾದವ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ಹೆಚ್ಚಿನ ಬಲ ತುಂಬಲಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲೂ ಒತ್ತಡಕ್ಕೆ ಒಳಗಾಗದೆ ತಮ್ಮ ಆಟವಾಡುವುದು ಸೂರ್ಯಕುಮಾರ್ ಅವರ ಬಲ.
ಅದರಲ್ಲೂ ಅವರ ಸ್ಟ್ರೈಕ್ರೇಟ್ 174.71 ಇರುವುದು ಎದುರಾಳಿ ಬೌಲರ್ ಗಳಲ್ಲಿ ಭಯ ಹುಟ್ಟಿಸುತ್ತದೆ. ಮೊದಲ ಬಾಲ್ನಿಂದಲೇ ಬೌಂಡರಿ ಹೊಡೆಯುವ ಸಾಮರ್ಥ್ಯ ಇರುವ ಆಟಗಾರ ಸೂರ್ಯಕುಮಾರ್ ಯಾದವ್, ಟಿ20 ವಿಶ್ವಕಪ್ನಲ್ಲಿ ಇದೇ ರೀತಿ ಉತ್ತಮ ಬ್ಯಾಟಿಂಗ್ ಮಾಡಿದರೆ ಭಾರತದ ವಿಶ್ವಕಪ್ ಗೆಲುವಿನ ಹಾದಿ ಸುಲಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications