ಭಾರತದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು
ಭಾರತ ತಂಡ ತವರಿನ ಪರಿಸ್ಥಿತಿಗಳಿಗೆ ಸಾಕಷ್ಟು ಹೊಂದಿಕೊಂಡಿದೆ. ಆಸ್ಟ್ರೇಲಿಯಾ ಸಾಧ್ಯವಾದಷ್ಟು ಬೇಗ ಭಾರತದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕು ಎಂದು ಗ್ರೇಗ್ ಚಾಪೆಲ್ ಹೇಳಿದ್ದಾರೆ.
ಭಾರತದ ಪಿಚ್ಗಳು ಸ್ಪಿನ್ಗೆ ಹೆಚ್ಚಿನ ನೆರವು ನೀಡುವುದರಿಂದ ಆಸ್ಟ್ರೇಲಿಯಾದ ಏಕೈಕ ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ಮತ್ತು ನಾಥನ್ ಲಿಯಾನ್ ತಂಡದಲ್ಲಿ ಸ್ಥಾನ ಪಡೆಯಬೇಕು ಎಂದು ಅವರು ಹೇಳಿದ್ದಾರೆ.
"ಪಿಚ್ಗಳು ಸ್ಪಿನ್ಗೆ ಹೆಚ್ಚಿನ ನೆರವು ನೀಡಿದರೆ, ಫಿಂಗರ್ ಸ್ಪಿನ್ ಹೆಚ್ಚು ನಿಖರವೆಂದು ಪರಿಗಣಿಸಲ್ಪಟ್ಟಿರುವ ಕಾರಣ ಆಶ್ಟನ್ ಅಗರ್ ಪ್ರಾಮುಖ್ಯತೆ ಪಡೆಯುವ ಸಾಧ್ಯತೆ ಇದೆ" ಎಂದು ಹೇಳಿದರು.
ದೌರ್ಬಲ್ಯವನ್ನು ತೊಡೆದು ಹಾಕಬೇಕು
ಡೇವಿಡ್ ವಾರ್ನರ್ ಇನ್ನೂ ತಮ್ಮ ಫಾರ್ಮ್ ಕಂಡುಕೊಳ್ಳಬೇಕಿದೆ. ಭಾರತದಲ್ಲಿ ಟೆಸ್ಟ್ ಮಾದರಿಯಲ್ಲಿ ವಾರ್ನರ್ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಿದೆ. ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್ ಮತ್ತು ಕ್ಯಾಮೆರಾನ್ ಗ್ರೀನ್ ಅವರು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಡಿದ್ದಕ್ಕಿಂತ ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಆಡಬೇಕಿದೆ ಎಂದು ಹೇಳಿದರು.
ನಂಬರ್ 1 ಟೆಸ್ಟ್ ಬ್ಯಾಟರ್ ಮಾರ್ಕಸ್ ಲ್ಯಾಬುಸ್ಚಾಗ್ನೆ ಕೂಡ ಭಾರತದಲ್ಲಿ ಮೊದಲ ಬಾರಿಗೆ ದೊಡ್ಡ ಪರೀಕ್ಷೆಯನ್ನು ಎದುರಿಸಲು ಸಜ್ಜಾಗಿದ್ದಾರೆ. ಸ್ಟೀವ್ ಸ್ಮಿತ್ ಭಾರತದಲ್ಲಿ ಆಡಿರುವ ಅನುಭವ ಹೊಂದಿದ್ದರೂ ಕೂಡ ಸ್ಪಿನ್ ವಿರುದ್ಧ ಜಾಗರೂಕತೆಯಿಂದ ಆಡಬೇಕಿದೆ ಎಂದರು.
ಉಭಯ ತಂಡಗಳ ಗೆಲುವಿನ ಓಟ
ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಶಸ್ ಸರಣಿಯನ್ನು ಗೆದ್ದಿದ್ದ ಆಸ್ಟ್ರೇಲಿಯಾ ನಂತರ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದು ನಂಬರ್ 1 ರ್ಯಾಂಕಿಂಗ್ನಲ್ಲಿದೆ.
19 ವರ್ಷಗಳಿಂದ ಆಸ್ಟ್ರೇಲಿಯಾ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. 2017ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದರೂ, ನಂತರ 1-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡರು.
ಭಾರತ ಕಳೆದ ಒಂದು ದಶಕದಿಂದ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಸೋತಿಲ್ಲ, ಅವರು ಸತತವಾಗಿ 15 ಸರಣಿಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ತಾಳ್ಮೆ, ಪ್ಲ್ಯಾನಿಂಗ್ ಬೇಕು ಎಂದು ಗ್ರೇಗ್ ಚಾಪೆಲ್ ಹೇಳಿದ್ದಾರೆ.
ದೆಹಲಿ ಮತ್ತು ಧರ್ಮಶಾಲಾದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಭಾರತವೇ ಫೇವರಿಟ್ ಆಗಲಿದೆ. ನಾಗ್ಪುರ ಪಿಚ್ ಕೆಂಪು ಮಣ್ಣಿನದ್ದಾಗಿದ್ದು ಮೊದಲ ಮೂರು ದಿನ ಬ್ಯಾಟಿಂಗ್ ಮಾಡಲು ಉತ್ತಮವಾಗಿರುತ್ತದೆ ಎಂದು ಹೇಳಿದರು. ಆಸ್ಟ್ರೇಲಿಯಾ ಗೆಲುವು ಸಾಧಿಸಬೇಕಾದರೆ ಹೊಸ ಚೆಂಡಿನಲ್ಲಿ ಬೇಗನೆ ವಿಕೆಟ್ ಪಡೆಯಬೇಕು ಎಂದು ಚಾಪೆಲ್ ಹೇಳಿದ್ದಾರೆ.