
ಭಾರತ-ಬಾಂಗ್ಲಾದೇಶದ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಆರಂಭಕ್ಕೆ ಒಂದು ದಿನದ ಮುನ್ನವೇ ಶಕೀಬ್ ಅಲ್ ಹಸನ್ ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಬಾಂಗ್ಲಾದೇಶದ ಆಟಗಾರರು ಅಭ್ಯಾಸಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸಿದ ವೇಳೆ ಶಕೀಬ್ ಅಲ್ ಹಸನ್ರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಅವರು ಸಹಾಯಕ ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ತೆರಳಿದರು. ಈ ಘಟನೆಯಿಂದ ಅವರು ಮೊದಲ ಟೆಸ್ಟ್ನಲ್ಲಿ ಆಡುವ ಬಗ್ಗೆ ಅನುಮಾನ ಮೂಡಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇನ್ನೂ ಯಾವುದೇ ಅಧಿಕೃತ ನಿರ್ಣಯ ತೆಗೆದುಕೊಂಡಿಲ್ಲ.
ಶಕೀಬ್ಗೆ ಗಂಭೀರವಾದ ಗಾಯವಾಗಿಲ್ಲ ಎಂದು ಹೇಳಿದರೂ, ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಗ್ಗೆ ಬುಧವಾರ ತೀರ್ಮಾನಿಸುವುದಾಗಿ ಹೇಳಿದೆ. ಮುಖ್ಯ ಕೋಚ್ ರಸೆಲ್ ಡೊಮಿಂಗೊ ಹೇಳಿಕೆಯ ಪ್ರಕಾರ, ಅವರ ಲಭ್ಯತೆ ಬಗ್ಗೆ ಬುಧವಾರ ತಿಳಿಯಲಿದ್ದು, ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಿಂದ ಶಕೀಬ್ ಅಲ್ ಹಸನ್ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಹೋದರು. ಯಾವುದೇ ಗಂಭೀರವಾದ ಗಾಯವಾಗಿಲ್ಲ, ಬೇರೆ ಯಾವುದು ವಾಹನ ಲಭ್ಯವಿಲ್ಲದ ಕಾರಣ, ಅವರನ್ನು ಆಂಬುಲೆನ್ಸ್ನಲ್ಲಿ ಸಾಗಿಸಲಾಗಿದೆ ಎಂದು ಬಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಶಕೀಬ್ ಅಲ್ ಹಸನ್ ಸ್ಯಾಯು ಸೆಳೆತದಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ. ಅವರು ಸೋಮವಾರ ಕೂಡ ತರಬೇತಿಯಲ್ಲಿ ಭಾಗವಹಿಸಿರಲಿಲ್ಲ.

ತಸ್ಕಿನ್ ಅಹ್ಮದ್ ಕೂಡ ಅನುಮಾನ
ಬಾಂಗ್ಲಾದೇಶದ ಪ್ರಮುಖ ವೇಗದ ಬೌಲರ್ ತಸ್ಕಿನ್ ಅಹ್ಮದ್ ಕೂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಬೆನ್ನಿನ ಗಾಯಕ್ಕೆ ತುತ್ತಾಗಿದ್ದ ಅವರು ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ, ಮೂರನೇ ಏಕದಿನ ಪಂದ್ಯದಲ್ಲಿ ಆಡಿದ್ದರೂ, ಅವರು ತಮ್ಮ ಲಯವನ್ನು ಕಂಡುಕೊಳ್ಳಲಿಲ್ಲ.
ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲದ ಕಾರಣ ಮೊದಲ ಟೆಸ್ಟ್ ನಲ್ಲಿ ಆಡುವುದು ಅನುಮಾನವಾಗಿದೆ.
"ತಂಡದ ನಿರ್ವಹಣೆಯು ನನ್ನ ಕೆಲಸದ ಹೊರೆಯನ್ನು ಹೆಚ್ಚಿಸುವ ಬಗ್ಗೆ ಕಾಳಜಿ ವಹಿಸುತ್ತದೆ. ನಾನು ಗಾಯದಿಂದ ಗುಣಮುಖನಾಗಿದ್ದೇನೆ, ಕೆಲಸದ ಹೊರೆ, ಫಿಟ್ನೆಸ್ ಮತ್ತು ಬೌಲಿಂಗ್ ಲೋಡ್ ಅನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದೇನೆ" ಎಂದು ತಸ್ಕಿನ್ ಹೇಳಿದ್ದಾರೆ.
"ಮೊದಲ ಟೆಸ್ಟ್ಗೆ ಮುನ್ನ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ, ತಂಡದಲ್ಲಿ ಸೇರಿಕೊಳ್ಳುವ ಬಗ್ಗೆ ಮ್ಯಾನೇಜ್ಮೆಂಟ್ ನಿರ್ಧಾರ ಮಾಡುತ್ತದೆ. ಮೊದಲನೇ ಟೆಸ್ಟ್ನಲ್ಲಿ ಆಡದೇ ಇರಬಹುದು ಆದರೆ, ಎರಡನೇ ಟೆಸ್ಟ್ ವೇಳೆಗೆ ಸಂಪೂರ್ಣವಾಗಿ ಫಿಟ್ ಆಗಿರುತ್ತೇನೆ ಎನ್ನುವ ವಿಶ್ವಾಸ ಇದೆ" ಎಂದು ತಸ್ಕಿನ್ ಅಹ್ಮದ್ ಹೇಳಿದ್ದಾರೆ.
ಇನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಎರಡನೇ ಏಕದಿನ ಪಂದ್ಯದ ವೇಳೆ ಗಾಯಗೊಂಡು ಮೂರನೇ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಕೆಎಲ್ ರಾಹುಲ್ ತಂಡದ ನಾಯಕತ್ವದ ಹೊಣೆ ಹೊತ್ತಿದ್ದು ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.