ಭಾರತ vs ಇಂಗ್ಲೆಂಡ್: ರಿಷಭ್ ಪಂತ್ ಮಾಡಿದ್ದು ತಪ್ಪು ಎಂದ ಅಂಪೈರ್ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಕ್ರಿಕೆಟ್ ಸರಣಿ ಎಂದರೆ ಅದು ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಪಟೌಡಿ ಟೆಸ್ಟ್ ಸರಣಿ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಈ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಳೆಯ ಆಗಮನವಾದ ಕಾರಣ ಯಾವುದೇ ಫಲಿತಾಂಶವಿಲ್ಲದೇ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಯಿತು. ನಂತರ ಲಾರ್ಡ್ಸ್ ಅಂಗಳದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್ಗಳ ಅಂತರದಿಂದ ಗೆಲುವನ್ನು ಸಾಧಿಸುವುದರ ಮೂಲಕ ಸರಣಿಯಲ್ಲಿ ಗೆಲುವಿನ ಖಾತೆ ತೆರೆದು ಮುನ್ನಡೆಯನ್ನು ಕಾಯ್ದುಕೊಂಡಿದೆ.
ಹೀಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಟೀಮ್ ಇಂಡಿಯಾ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅಕ್ಷರಶಃ ಮಂಕಾಗಿ ಹೋಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾದ ಓರ್ವ ಬ್ಯಾಟ್ಸ್ಮನ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಟ್ಸ್ಮನ್ ಕೂಡ ಎರಡಂಕಿ ಮುಟ್ಟುವ ಯತ್ನವನ್ನು ಮಾಡಲೇ ಇಲ್ಲ. ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 78 ರನ್ಗೆ ಟೀಮ್ಇಂಡಿಯಾ ಆಲ್ ಔಟ್ ಆಯಿತು. ಟೀಮ್ ಇಂಡಿಯಾ ಇಂತಹ ಪಂದ್ಯಗಳಲ್ಲಿ ಕಷ್ಟಕ್ಕೆ ಸಿಲುಕಿಕೊಂಡಾಗ ಕೊನೆಯದಾಗಿ ಏಕಾಂಗಿ ಹೋರಾಟ ನಡೆಸುತ್ತಿದ್ದ ರಿಷಭ್ ಪಂತ್ ಕೂಡ ಈ ಪಂದ್ಯದಲ್ಲಿ 9 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು.
ಹೀಗೆ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾದ ರಿಷಭ್ ಪಂತ್ ದಿನದಾಟ ಮುಗಿದ ನಂತರ ಪಂದ್ಯದ ಕುರಿತು ಮಾತನಾಡುವಾಗ ತಾನು ಮಾಡಿದ ತಪ್ಪನ್ನು ಅಂಪೈರ್ ತಿದ್ದಿದರು ಎಂದು ಮೈದಾನದಲ್ಲಿ ತನ್ನ ಮತ್ತು ಅಂಪೈರ್ ನಡುವೆ ನಡೆದ ಒಂದು ಸನ್ನಿವೇಶದ ಹಿಂದಿನ ಕಾರಣವನ್ನು ಬಿಚ್ಚಿಟ್ಟರು. ಹೌದು, ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಸ್ಕ್ರೀಜ಼್ ಬಿಟ್ಟು ತುಸು ಮುಂದೆ ಬಂದು ನಿಂತಿದ್ದ ಕಾರಣ ಮಧ್ಯಪ್ರವೇಶಿಸಿದ ಅಂಪೈರ್ ಸ್ಟಂಪ್ ಕಡೆ ನಿಲ್ಲುವಂತೆ ರಿಷಭ್ ಪಂತ್ ಅವರಿಗೆ ಸಲಹೆ ನೀಡಿದ್ದರಂತೆ. ಈ ವಿಷಯವನ್ನು ಸ್ವತಃ ರಿಷಭ್ ಪಂತ್ ದಿನದಾಟ ಮುಗಿದ ನಂತರ ಪಂದ್ಯದ ಕುರಿತು ಮಾತನಾಡುವಾಗ ಹೇಳಿಕೊಂಡಿದ್ದರು.
ಇದೀಗ ಈ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದು ಈ ಕೆಳಕಂಡ ಹೇಳಿಕೆಗಳನ್ನು ನೀಡಿದ್ದಾರೆ..

ಬ್ಯಾಟ್ಸ್ಮನ್ ಪಿಚ್ ಮಧ್ಯದಲ್ಲಿ ಬೇಕಾದರೂ ನಿಲ್ಲಬಹುದು!
ಮೂರನೇ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಸ್ಕ್ರೀಜ಼್ ಬಿಟ್ಟು ಮುಂದೆ ಬಂದು ನಿಂತಿದ್ದ ಕಾರಣಕ್ಕೆ ಸರಿಯಾಗಿ ನಿಲ್ಲುವಂತೆ ಅಂಪೈರ್ ನೀಡಿದ ಸಲಹೆಯ ವಿರುದ್ಧ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಟ್ಸ್ ಮನ್ ಪಿಚ್ ಮಧ್ಯದಲ್ಲಿಯೂ ಕೂಡಾ ಬಂದು ನಿಲ್ಲಬಹುದು ಎಂದು ಹೇಳಿಕೆ ನೀಡುವುದರ ಮೂಲಕ ಆ ಅಂಪೈರ್ಗೆ ತಿರುಗೇಟು ನೀಡಿದ್ದಾರೆ. ಬ್ಯಾಟಿಂಗ್ ವೇಳೆ ಇಲ್ಲೇ ನಿಲ್ಲಬೇಕು, ಅಲ್ಲೇ ನಿಲ್ಲಬೇಕು ಎಂಬ ಯಾವುದೇ ನಿಯಮಗಳಿಲ್ಲ ಬ್ಯಾಟ್ಸ್ಮನ್ಗೆ ತಾನು ಪಿಚ್ ಮಧ್ಯದಲ್ಲಿ ನಿಲ್ಲಬೇಕು ಎನಿಸಿದರೆ ಆತ ಪಿಚ್ ಮಧ್ಯದಲ್ಲಿಯೂ ಕೂಡ ಬಂದು ನಿಲ್ಲುವ ಸ್ವಾತಂತ್ರ್ಯವಿದೆ ಎಂದು ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಅಂಪೈರ್ ಹಿಂದೆ ನಿಲ್ಲಲು ಹೇಳಿದ್ದರ ಹಿಂದಿನ ಕಾರಣ ತಿಳಿಸಿದ್ದ ರಿಷಭ್ ಪಂತ್
ಮೊದಲೇ ಹೇಳಿದ ಹಾಗೆ ರಿಷಭ್ ಪಂತ್ ಸರಿಯಾದ ಜಾಗದಲ್ಲಿ ಬ್ಯಾಟಿಂಗ್ಗೆ ನಿಂತಿಲ್ಲ ಎಂಬ ಕಾರಣಕ್ಕೆ ಅಂಪೈರ್ ರಿಷಬ್ ಪಂತ್ಗೆ ಸರಿಯಾಗಿ ನಿಲ್ಲುವಂತೆ ಸಲಹೆ ನೀಡಿದ್ದರು. ಅಂಪೈರ್ ಈ ರೀತಿ ಹೇಳಲು ಕಾರಣವೇನೆಂಬುದನ್ನು ದಿನದಾಟ ಮುಗಿದ ನಂತರ ಸ್ವತಃ ರಿಷಭ್ ಪಂತ್ ಅವರೇ ಬಿಚ್ಚಿಟ್ಟಿದ್ದರು. ಸ್ಕ್ರೀಜ್ ಬಿಟ್ಟು ಸ್ವಲ್ಪ ಮುಂದೆ ನಿಲ್ಲುವುದರಿಂದ ಬ್ಯಾಟ್ಸ್ಮನ್ಗೆ ಅಪಾಯ ಉಂಟಾಗಬಹುದು ಎಂಬ ಮುನ್ನೆಚ್ಚರಿಕಾ ಕ್ರಮದಿಂದ ಅಂಪೈರ್ ತನಗೆ ಸ್ಕ್ರೀಜ಼್ ಬಳಿ ನಿಲ್ಲುವಂತೆ ಹೇಳಿದ್ದರು ಎಂದು ರಿಷಭ್ ಪಂತ್ ಅಂಪೈರ್ ನೀಡಿದ ಸಲಹೆಯ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದರು.

ಸಂಕಷ್ಟದಲ್ಲಿ ಟೀಮ್ ಇಂಡಿಯಾ
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 78 ರನ್ಗೆ ಆಲ್ ಔಟ್ ಆಗಿದ್ದ ಟೀಮ್ ಇಂಡಿಯಾ ಆಟಗಾರರು ಎರಡನೇ ಇನ್ನಿಂಗ್ಸ್ನಲ್ಲಿ ಜವಾಬ್ದಾರಿಯುತ ಆಟವನ್ನಾಡಿದ್ದು ಮೂರನೆ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 215 ರನ್ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ 139 ರನ್ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಇನ್ನೂ ಸಹ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಶನಿವಾರ ನಡೆಯಲಿರುವ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಉತ್ತಮ ಆಟವನ್ನು ಆಡುವುದರ ಮೂಲಕ ಸಂಕಷ್ಟದಲ್ಲಿರುವ ಟೀಂ ಇಂಡಿಯಾಗೆ ಆಸರೆಯಾಗಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications