
ಬ್ಯಾಟ್ಸ್ಮನ್ ಪಿಚ್ ಮಧ್ಯದಲ್ಲಿ ಬೇಕಾದರೂ ನಿಲ್ಲಬಹುದು!
ಮೂರನೇ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಸ್ಕ್ರೀಜ಼್ ಬಿಟ್ಟು ಮುಂದೆ ಬಂದು ನಿಂತಿದ್ದ ಕಾರಣಕ್ಕೆ ಸರಿಯಾಗಿ ನಿಲ್ಲುವಂತೆ ಅಂಪೈರ್ ನೀಡಿದ ಸಲಹೆಯ ವಿರುದ್ಧ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಬ್ಯಾಟ್ಸ್ ಮನ್ ಪಿಚ್ ಮಧ್ಯದಲ್ಲಿಯೂ ಕೂಡಾ ಬಂದು ನಿಲ್ಲಬಹುದು ಎಂದು ಹೇಳಿಕೆ ನೀಡುವುದರ ಮೂಲಕ ಆ ಅಂಪೈರ್ಗೆ ತಿರುಗೇಟು ನೀಡಿದ್ದಾರೆ. ಬ್ಯಾಟಿಂಗ್ ವೇಳೆ ಇಲ್ಲೇ ನಿಲ್ಲಬೇಕು, ಅಲ್ಲೇ ನಿಲ್ಲಬೇಕು ಎಂಬ ಯಾವುದೇ ನಿಯಮಗಳಿಲ್ಲ ಬ್ಯಾಟ್ಸ್ಮನ್ಗೆ ತಾನು ಪಿಚ್ ಮಧ್ಯದಲ್ಲಿ ನಿಲ್ಲಬೇಕು ಎನಿಸಿದರೆ ಆತ ಪಿಚ್ ಮಧ್ಯದಲ್ಲಿಯೂ ಕೂಡ ಬಂದು ನಿಲ್ಲುವ ಸ್ವಾತಂತ್ರ್ಯವಿದೆ ಎಂದು ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ.

ಅಂಪೈರ್ ಹಿಂದೆ ನಿಲ್ಲಲು ಹೇಳಿದ್ದರ ಹಿಂದಿನ ಕಾರಣ ತಿಳಿಸಿದ್ದ ರಿಷಭ್ ಪಂತ್
ಮೊದಲೇ ಹೇಳಿದ ಹಾಗೆ ರಿಷಭ್ ಪಂತ್ ಸರಿಯಾದ ಜಾಗದಲ್ಲಿ ಬ್ಯಾಟಿಂಗ್ಗೆ ನಿಂತಿಲ್ಲ ಎಂಬ ಕಾರಣಕ್ಕೆ ಅಂಪೈರ್ ರಿಷಬ್ ಪಂತ್ಗೆ ಸರಿಯಾಗಿ ನಿಲ್ಲುವಂತೆ ಸಲಹೆ ನೀಡಿದ್ದರು. ಅಂಪೈರ್ ಈ ರೀತಿ ಹೇಳಲು ಕಾರಣವೇನೆಂಬುದನ್ನು ದಿನದಾಟ ಮುಗಿದ ನಂತರ ಸ್ವತಃ ರಿಷಭ್ ಪಂತ್ ಅವರೇ ಬಿಚ್ಚಿಟ್ಟಿದ್ದರು. ಸ್ಕ್ರೀಜ್ ಬಿಟ್ಟು ಸ್ವಲ್ಪ ಮುಂದೆ ನಿಲ್ಲುವುದರಿಂದ ಬ್ಯಾಟ್ಸ್ಮನ್ಗೆ ಅಪಾಯ ಉಂಟಾಗಬಹುದು ಎಂಬ ಮುನ್ನೆಚ್ಚರಿಕಾ ಕ್ರಮದಿಂದ ಅಂಪೈರ್ ತನಗೆ ಸ್ಕ್ರೀಜ಼್ ಬಳಿ ನಿಲ್ಲುವಂತೆ ಹೇಳಿದ್ದರು ಎಂದು ರಿಷಭ್ ಪಂತ್ ಅಂಪೈರ್ ನೀಡಿದ ಸಲಹೆಯ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದರು.

ಸಂಕಷ್ಟದಲ್ಲಿ ಟೀಮ್ ಇಂಡಿಯಾ
ಇನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ 78 ರನ್ಗೆ ಆಲ್ ಔಟ್ ಆಗಿದ್ದ ಟೀಮ್ ಇಂಡಿಯಾ ಆಟಗಾರರು ಎರಡನೇ ಇನ್ನಿಂಗ್ಸ್ನಲ್ಲಿ ಜವಾಬ್ದಾರಿಯುತ ಆಟವನ್ನಾಡಿದ್ದು ಮೂರನೆ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿರುವ ಟೀಮ್ ಇಂಡಿಯಾ 215 ರನ್ ಗಳಿಸಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ 139 ರನ್ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಇನ್ನೂ ಸಹ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಶನಿವಾರ ನಡೆಯಲಿರುವ ನಾಲ್ಕನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಉತ್ತಮ ಆಟವನ್ನು ಆಡುವುದರ ಮೂಲಕ ಸಂಕಷ್ಟದಲ್ಲಿರುವ ಟೀಂ ಇಂಡಿಯಾಗೆ ಆಸರೆಯಾಗಬೇಕಿದೆ.


Click it and Unblock the Notifications
