ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಯಾರಿ ಆರಂಭಿಸಿದ್ದಾರೆ. ಸೋಮವಾರ ನೆಟ್ಸ್ನಲ್ಲಿ ಬೆವರು ಹರಿಸಿದ ಅವರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಲಘು ತರಬೇತಿಯ ಸಮಯದಲ್ಲಿ ಓಟ ಮತ್ತು ಕ್ಯಾಚ್ಗಳನ್ನು ಅಭ್ಯಾಸ ಮಾಡಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದಿಂದ ಹೊರಗುಳಿಯಲಿರುವ ರೋಹಿತ್ ಶರ್ಮಾ, ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಅವರು ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಬೆರಳಿಗೆ ಗಾಯ ಮಾಡಿಕೊಂಡಿದ್ದ ಅವರು ಮೂರನೇ ಏಕದಿನ ಪಂದ್ಯ ಮತ್ತು ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು.
2023ರ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಭಾರತಕ್ಕೆ ಮಹತ್ವದ್ದಾಗಿದ್ದು, ರೋಹಿತ್ ಶರ್ಮಾರನ್ನು ಟೆಸ್ಟ್ ಪಂದ್ಯದ ವೇಳೆಗೆ ಫಿಟ್ ಆಗಿಡಲು ಬಿಸಿಸಿಐ ಕಾಳಜಿ ವಹಿಸುತ್ತಿದೆ.
ಕ್ರಿಕೆಟ್ ಜೀವನವೇ ಅಂತ್ಯವಾಗುತ್ತಿತ್ತು : ಗಾಯಗೊಂಡ ಘಟನೆಯನ್ನು ವಿವರಿಸಿದ ಮ್ಯಾಕ್ಸ್ವೆಲ್
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಸಂಪೂರ್ಣ ಸರಣಿಯಲ್ಲಿ ರೋಹಿತ್ ಶರ್ಮಾ ಆಡಬೇಕು ಎಂದು ಭಾರತೀಯ ಕ್ರಿಕೆಟ್ ಮಂಡಳಿ ಬಯಸುತ್ತದೆ. ರೋಹಿತ್ ಮುಂದಿನವಾರ ಬೆಂಗಳೂರಿನ ಎನ್ಸಿಎಗೆ ಹಾಜರಾಗಲಿದ್ದಾರೆ.
ಅಪಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ
ರೋಹಿತ್ ಶರ್ಮಾ ಇನ್ನೂ 100 ಪ್ರತಿಶತ ಫಿಟ್ ಆಗಿಲ್ಲ. ಗಾಯದ ವಿಚಾರ ಬಂದಾಗ ನಾವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಈಗಾಗಲೇ ಎನ್ಸಿಎಗೆ ಮರಳಿದ್ದಾರೆ, ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಆಯ್ಕೆಗೆ ಅರ್ಹರಾಗಿರುತ್ತಾರೆ. ಅವರು ಟಿ20 ಸರಣಿಯನ್ನು ತಪ್ಪಿಸಿಕೊಂಡರು, ಏಕದಿನ ಸರಣಿಗೆ ತಂಡಕ್ಕೆ ಮರಳುತ್ತಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಜಾಗೊಂಡಿರುವ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಿದೆ. ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡಕ್ಕೆ ನಾಯಕನಾಗಿ ಆಯ್ಕೆಯಾಗಲಿದ್ದಾರೆ. ಅವರು 2024ರ ಟಿ20 ವಿಶ್ವಕಪ್ವರೆಗೂ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇಶಾನ್ ಇಕಿಶನ್ ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ್ದರು. ಸಂಜು ಸ್ಯಾಮ್ಸನ್ ತಮಗೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ರಣಜಿಯಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವ ಸ್ಯಾಮ್ಸನ್ ಮೊದಲ ಆಯ್ಕೆಯಾಗುವ ಸಾಧ್ಯತೆ ಇದೆ.