ಕೊಲಂಬೋ, ಡಿಸೆಂಬರ್ 24 :ರಾಹುಲ್ ದ್ರಾವಿಡ್ ಮಾರ್ಗದರ್ಶನದ 19 ವಯೋಮಿತಿ ಭಾರತ ತಂಡ ಕಿರಿಯರ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿ ಗೆದ್ದುಕೊಂಡಿದೆ. ಇದು ಭಾರತಕ್ಕೆ ಹ್ಯಾಟ್ರಿಕ್ ಪ್ರಶಸ್ತಿಯಾಗಿದೆ.
ಶುಕ್ರವಾರ ನಡೆದ 3ನೇ ಆವೃತ್ತಿಯ ಟೂರ್ನಿಯ ಫೈನಲ್ನಲ್ಲಿ ನಾಯಕ ಅಭಿಷೇಕ್ ಶರ್ಮ(37ಕ್ಕೆ 4) ಮಾಂತ್ರಿಕ ಸ್ಪಿನ್ ದಾಳಿಯ ನೆರವಿನಿಂದ ಭಾರತ 34 ರನ್ಗಳಿಂದ ಆತಿಥೇಯ ಶ್ರೀಲಂಕಾವನ್ನು ಮಣಿಸಿ ಪ್ರಶಸ್ತಿ ಜಯಿಸಿತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದ ಲಂಕಾ ರನ್ನರ್ ಅಪ್ಗೆ ತೃಪ್ತಿಪಡಬೇಕಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಹಿಮಾಂಶು ರಾಣಾ(71 ರನ್, 79 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ಶುಭ್ವುನ್ ಗಿಲ್(70 ರನ್, 92 ಎಸೆತ, 4 ಬೌಂಡರಿ) ಆಕರ್ಷಕ ಅರ್ಧಶತಕದಾಟದ ನೆರವಿನಿಂದ 8 ವಿಕೆಟ್ಗೆ 273ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಈ ಸವಾಲು ಬೆನ್ನಟ್ಟಿದ ಲಂಕಾ ತಂಡ ಅಭಿಷೇಕ್ ಶರ್ಮ ನಿರ್ಣಾಯಕ ಅವಧಿಯಲ್ಲಿ ತೋರಿದ ಮಾರಕ ಸ್ಪಿನ್ ದಾಳಿಯ ಎದುರಿಗೆ 48.4 ಓವರ್ಗಳಲ್ಲಿ 239ರನ್ಗೆ ಆಲೌಟ್ ಆಗಿ ನಿರಾಸೆ ಕಂಡಿತು.[ಆಸ್ಟ್ರೇಲಿಯಾದ ವಾರ್ಷಿಕ ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!]
ರಾಣಾ-ಶುಭಂ ಭರ್ಜರಿ ಆರಂಭ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ(39) ಹಾಗೂ ಹಿಮಾಂಶು ರಾಣಾ (71 ರನ್, 79 ಎಸೆತ, 6 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ಗೆ 11.2 ಓವರ್ಗಳಲ್ಲಿ 67 ರನ್ಗಳ ಜತೆಯಾಟವಾಡಿ ಉತ್ತಮ ಆರಂಭ ಒದಗಿಸಿದರು. ಆದರೆ ಎಡಗೈ ಸ್ಪಿನ್ನರ್ ಜಯವಿಕ್ರಮ ಓವರ್ನಲ್ಲಿ ಸ್ಲಾಗ್ ಸ್ವೀಪ್ ಮಾಡಲೆತ್ನಿಸಿದ ಪೃಥ್ವಿ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಹಿಮಾಂಶುಗೆ ಜತೆಯಾದ ಶುಭ್ವುನ್ ಗಿಲ್(70 ರನ್, 92 ಎಸೆತ, 4 ಬೌಂಡರಿ) ಬಿರುಸಿನ ಆಟವಾಡಿ ಮೊತ್ತ ಹಿಗ್ಗಿಸಿದರು.
ಸ್ಲಾಗ್ ಓವರ್ನಲ್ಲಿ ಕುಸಿತ: ನಾಯಕ ಅಭಿಷೇಕ್ ಶರ್ಮ(29) ತಂಡದ ಮೊತ್ತವನ್ನು 200 ಗಡಿ ದಾಟಿಸಿದರೂ ರನ್ಸಿಕ ಓವರ್ನಲ್ಲಿ ಔಟಾದರು. ಒಂದು ಹಂತದಲ್ಲಿ 39.4 ಓವರ್ಗಳಲ್ಲಿ 2 ವಿಕೆಟ್ಗೆ 203ರನ್ ಗಳಿಸಿ ಬೃಹತ್ ಮೊತ್ತದ ಹಾದಿಯಲ್ಲಿದ್ದ ಭಾರತ ಸ್ಲಾಗ್ ಓವರ್ನಲ್ಲಿ ನೀರಸವಾಗಿ ಆಡಿತು. ಶತಕದ ನಿರೀಕ್ಷೆಯಲ್ಲಿದ್ದ ಶುಭ್ವುನ್ ಔಟಾಗಿದ್ದು ಪೆಟ್ಟು ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್ ಖಾನ್(26), ಬಾಲಂಗೋಚಿ ಕಮಲೇಶ್ ನಾಗರ್ಕೋಟಿ(23) ಮಾತ್ರವೇ ಅಲ್ಪ ರನ್ ಗಳಿಸಿದರು.[ಧೋನಿ ಹೆಸರು ಹೇಳದ ಅಶ್ವಿನ್ ವಿರುದ್ಧ ಫ್ಯಾನ್ಸ್ ಗರಂ]
ಭಾರತ ಸತತ ಮೂರನೇ ಬಾರಿ ಏಷ್ಯಾಕಪ್ನಲ್ಲಿ ಪ್ರಶಸ್ತಿ ಜಯಿಸಿತು. 2012ರ ಮಲೇಷ್ಯಾದಲ್ಲಿ ನಡೆದ ಮೊದಲ ಆವೃತ್ತಿಯಲ್ಲಿ ಪಾಕ್ ಜತೆ ಪ್ರಶಸ್ತಿ ಹಂಚಿಕೊಂಡರೆ, 2013-14ರ ಯುಎಇನಲ್ಲಿ ನಡೆದ ಟೂರ್ನಿಯಲ್ಲಿ ಪಾಕಿಸ್ತಾನವನ್ನೇ ಮಣಿಸಿ ಚಾಂಪಿಯನ್ ಆಗಿತ್ತು.
-ಏಜೆನ್ಸೀಸ್