ಸೆಂಚೂರಿಯನ್, ಫೆಬ್ರವರಿ 16: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 6ನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಈ ಪಂದ್ಯವನ್ನೂ ಗೆಲ್ಲುವ ತವಕದಲ್ಲಿದ್ದು, ಈ ಬಾರಿ ಚೇಸ್ ಮಾಡಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸರಣಿ ಗೆದ್ದಿರುವ ಕಾರಣ ಈ ಪಂದ್ಯದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬ ಉಮೇದಿತ್ತು. ಆದರೆ ಈ ಪಂದ್ಯದಲ್ಲಿ ಪ್ರಯೋಗಕ್ಕೆ ಮೊರೆ ಹೋಗದ ಕೊಹ್ಲಿ ಅದೇ ತಂಡವನ್ನು ಉಳಿಸಿಕೊಂಡಿದ್ದಾರೆ. ಆದರೆ ಸಣ್ಣ ಬದಲಾವಣೆ ಒಂದನ್ನು ಮಾಡಿದ್ದು ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಅವರಿಗೆ ಅವಕಾಶ ನೀಡಲಾಗಿದೆ.
ಈ ಪಂದ್ಯದಲ್ಲಿ ಎಂ.ಎಸ್.ಧೋನಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. 10000 ರನ್ಗೆ ಇನ್ನು 33 ರನ್ಗಳು ಮಾತ್ರವೇ ಅವಶ್ಯಕತೆ ಇದೆ. 33 ರನ್ ಗಳಿಸಿದರೆ 10000 ರನ್ ಗಳಿಸಿದ ವೀಶ್ವ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ.
ಸರಣಿ ಸೋತಿರುವ ದ.ಆಫ್ರಿಕಾ ಕೊನೆಯ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಲಿದೆ. ಈ ಪಂದ್ಯಕ್ಕೆ ನಾಲ್ಕು ಬದಲಾವಣೆ ಮಾಡಿದ್ದು, ಕ್ರಿಸ್ ಮಾರಿಸ್, ಬೆಹರ್ದಿನ್, ಇಮ್ರಾನ್ ತಾಹಿರ್ ಮತ್ತು ಜುಂಡೊ ತಂಡಕ್ಕೆ ಮರಳಿದ್ದಾರೆ.