ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 112 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ತನ್ನ ಎರಡನೇ ಪಂದ್ಯವನ್ನು ಆಡುತ್ತಿರುವ ಅಕ್ಷರ್ ಪಟೇಲ್ 6 ವಿಕೆಟ್ಗಳ ಗೊಂಚಲು ಪಡೆದು ಇಂಗ್ಲೆಂಡ್ ಪಾಳಯಕ್ಕೆ ಆಘಾತ ನೀಡಿದರು. ಕನಿಷ್ಟ ಮೊತ್ತಕ್ಕೆ ಆಲೌಟ್ ಆದ ಒತ್ತಡದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತದ ಇನ್ನಿಂಗ್ಸ್ ವೇಳೆ ಮೂರನೇ ಅಂಪೈರ್ ಆಘಾತವನ್ನು ನೀಡಿದ್ದಾರೆ.
ಇಂಗ್ಲೆಂಡ್ 112 ರನ್ಗಳನ್ನು ಗಳಿಸಿ ಆಲೌಟ್ ಆದ ನಂತರ ಭಾರತ ತನ್ನ ಬ್ಯಾಟಿಂಗ್ ಆರಂಭಿಸಿತು. ಈ ವೇಳೆ ಇಂಗ್ಲೆಂಡ್ ಆದಷ್ಟು ಶೀಘ್ರವಾಗಿ ಭಾರತದ ಮೊದಲ ವಿಕೆಟ್ ಕಬಳಿಸುವ ಉದ್ಧೇಶದಲ್ಲಿದ್ದರು. ಇದಕ್ಕೆ ಪೂರಕವಾಗಿ ಭಾರತದ ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಬ್ಯಾಟ್ಗೆ ತಾಗಿ ಸೆಕೆಂಡ್ ಸ್ಲಿಪ್ನತ್ತ ತೆರಳಿತ್ತು.
ಮೊಟೆರಾ ಸ್ಟೇಡಿಯಂ ಇನ್ಮುಂದೆ 'ನರೇಂದ್ರ ಮೋದಿ ಸ್ಟೇಡಿಯಂ'
ಅತ್ಯಂತ ಕೆಳ ಮಟ್ಟದಲ್ಲಿ ಎರಡನೇ ಸ್ಲಿಪ್ನತ್ತ ಧಾವಿಸಿದ ಚೆಂಡನ್ನು ಫೀಲ್ಡಿಂಗ್ ಮಾಡುತ್ತಿದ್ದ ಬೆನ್ ಸ್ಟೋಕ್ಸ್ ಪಡೆದುಕೊಂಡರು. ಆದರೆ ಅಸ್ಪಷ್ಟವಾಗಿದ್ದ ಈ ಕ್ಯಾಚ್ಗೆ ಇಂಗ್ಲೆಂಡ್ ಆಟಗಾರರು ಮನವಿಯನ್ನು ಸಲ್ಲಿಸಿದ್ದರು. ಅಂಪೈರ್ ಈ ಬಗ್ಗೆ ತೀರ್ಪಿಗಾಗಿ ಮೂರನೇ ಅಂಪಾಯರ್ನ ಮೊರೆಹೋದರು.
ಆದರೆ ಥರ್ಡ್ ಅಂಪೈರ್ ಹೆಚ್ಚು ಸಮಯವನ್ನು ತೆಗೆದುಕೊಳ್ಳದೆ ಹೆಚ್ಚಿನ ರಿಪ್ಲೇಗಳನ್ನು ನೋಡದೆಯೇ ನಾಟ್ಔಟ್ ತೀರ್ಪನ್ನು ನೀಡಿದ್ದರು. ಅಂಪೈರ್ ನಿಡಿದ್ದ ಈ ತೀರ್ಪಿಗೆ ಇಂಗ್ಲೆಂಡ್ ಆಟಗಾರರು ಅಚ್ಚರಿ ಹಾಗೂ ತಮ್ಮೊಳಗೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಆದರೆ ಬಳಿಕ ದೊಡ್ಡ ಪರದೆಯಲ್ಲಿ ಪ್ರಸಾರವಾದ ರಿಪ್ಲೇಗಳು ಬೆನ್ ಸ್ಟೋಕ್ಸ್ ಹಿಡಿದ ಚೆಂಡು ಮೈದಾನದ ಹುಲ್ಲಿಗೆ ತಗುಲಿರುವುದು ಸ್ಪಷ್ಟಪಡಿಸಿತ್ತು.
ಆದರೆ ಈ ಸಂದರ್ಭದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಪಾಳಯದಿಂದ ವಿಭಿನ್ನ ಭಾವನೆಗಳು ವ್ಯಕ್ತವಾಗಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕ್ಯಾಚ್ಗೆ ಇಂಗ್ಲೆಂಡ್ ತಂಡ ಮನವಿಯನ್ನು ಮಾಡಿದಾಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದ್ದರು. ಬಳಿಕ ಮೂರನೇ ಅಂಪಾಯರ್ ಸಾಫ್ಟ್ ಸಿಗ್ನಲ್ ಅನ್ನು ತಿರಸ್ಕರಿಸಿ ನಾಟ್ಔಟ್ ತೀರ್ಪು ನೀಡುವಾಗ ಇಂಗ್ಲೆಂಡ್ ಆಟಗಾರರಾದ ಜೋ ರೂಟ್, ಬೆನ್ ಸ್ಟೋಕ್ಸ್ ಸ್ಟುವರ್ಟ್ ಬ್ರಾಡ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಇಂಗ್ಲೆಂಡ್ ನಾಯಕ ಜೋ ರೂಟ್ ಈ ತೀರ್ಪಿನ ವಿಚಾರವಾಗಿ ಆನ್ಫೀಲ್ಡ್ ಅಂಪಾಯರ್ಗಳ ಜೊತೆಗೆ ಸುದೀರ್ಘ ಚರ್ಚೆಯನ್ನೂ ನಡೆಸಿದರು.