
ನವದೆಹಲಿ, ಆಗಸ್ಟ್ 6: ಮೊದಲ ಟೆಸ್ಟ್ನಲ್ಲಿ ಭಾರತ ಗೆಲುವಿನ ಸನಿಹ ಬಂದು ಮುಗ್ಗರಿಸಿದ ಬಳಿಕ ತಂಡದ ಆಯ್ಕೆಯ ಬಗ್ಗೆ ವಿಪರೀತ ಟೀಕೆಗಳು ವ್ಯಕ್ತವಾಗಿವೆ. ಟೆಸ್ಟ್ ಪರಿಣತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರನ್ನು ತಂಡದಲ್ಲಿ ಆಡಿಸದೆ ಇರುವುದು ಸರಿಯಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ನಡೆಯುವ ಮಹತ್ವದ ಪಂದ್ಯದಲ್ಲಿ ಪೂಜಾರ ಅವರನ್ನು ಆಡಿಸಲೇಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತಮಾಷೆಯ ಹಾಗೂ ಲಘುವಾದ ಟ್ವೀಟ್ಗಳಿಗೆ ಹೆಸರಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ತಮ್ಮದೇ ದಾಟಿಯಲ್ಲಿ ಪೂಜಾರ ಆಯ್ಕೆಯ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಇಂಗ್ಲೆಂಡ್ ಮುಂಬರುವ ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡ ಬಳಿಕ ಸೆಹ್ವಾಗ್ ತಂಡದ ಮ್ಯಾನೇಜ್ಮೆಂಟ್ ಪೂಜಾರ ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ ವಿಫಲರಾಗಿದ್ದಲ್ಲದೆ, ಮಹತ್ವದ ಕ್ಯಾಚ್ಗಳನ್ನು ಕೈಚೆಲ್ಲಿದ್ದ ಡವಿಡ್ ಮಲನ್ ಅವರ ಜಾಗಕ್ಕೆ ಇಂಗ್ಲೆಂಡ್ ಸರ್ರೆ ಕೌಂಟಿ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಒಲ್ಲಿ ಪೋಪ್ ಅವರನ್ನು ಆಯ್ಕೆ ಮಾಡಿದೆ.
ಪ್ರಕರಣವೊಂದರ ಸಂಬಂಧ ಬ್ರಿಸ್ಟಲ್ನ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಬೇಕಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸ್ಥಾನಕ್ಕೆ ಕ್ರಿಸ್ ವೋಕ್ಸ್ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಆಯ್ಕೆದಾರರು ಈ ಎರಡು ಬದಲಾವಣೆಗಳನ್ನು ಮಾಡಿದಂತೆಯೇ ಸೆಹ್ವಾಗ್ ಹಾಸ್ಯದ ಶೈಲಿಯಲ್ಲಿ ಭಾರತ ತಂಡಕ್ಕೆ ಸಲಹೆ ನೀಡಿದ್ದಾರೆ.
'ಇಂಗ್ಲೆಂಡ್ ತಂಡದ ಪರವಾಗಿ ಪೋಪ್ ಆಡುವ ಸಾಧ್ಯತೆ ಇದೆ. ಎರಡನೆಯ ಟೆಸ್ಟ್ನಲ್ಲಿ ಭಾರತವು ಪೂಜಾರ ಅವರನ್ನು ಆಡಿಸಬೇಕೇ? ಏನೆಂದರೂ ಅದು ಲಾರ್ಡ್ಸ್' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಇದು ಮೊದಲನೆಯ ಪಂದ್ಯದಿಂದ ಪೂಜಾರ ಅವರನ್ನು ಕೈಬಿಟ್ಟಿದ್ದನ್ನು ವ್ಯಂಗ್ಯವಾಗಿಯೂ ಅವರು ಆಡಿಕೊಂಡಂತಿದೆ. ಲಾರ್ಡ್ಸ್ ಪಂದ್ಯವನ್ನು ಲಘುವಾಗಿ ತೆಗೆದುಕೊಂಡಂತೆ ಸೆಹ್ವಾಗ್ ತಂಡದ ಆಡಳಿತ ಮಂಡಳಿಯತ್ತ ಚಾಟಿ ಬೀಸಿದ್ದಾರೆ.