ಬಾಂಗ್ಲಾದೇಶದ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗೆ ಆಯ್ಕೆ
ಭಾರತ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಮೂರು ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ. ಡಿಸೆಂಬರ್ 3ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ.
ಸರಣಿಗಾಗಿ ಬಾಂಗ್ಲಾದೇಶಕ್ಕೆ ತೆರಳುವ ಮುನ್ನ ಕೆಎಲ್ ರಾಹುಲ್ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ತಮ್ಮ ಫಾರ್ಮ್ ಕಾರಣಕ್ಕಾಗಿಯೇ ಅವರು ದೇವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ಕೂಡ ಅವರು ಇಲ್ಲಿಗೆ ಭೇಟಿ ನೀಡಿದ ನಂತರವೇ ಉತ್ತಮ ಪ್ರದರ್ಶನ ನೀಡಿದ್ದರು ಎನ್ನುವ ನಂಬಿಕೆ ಇದೆ.
ಹಲವು ಬಾರಿ ಭೇಟಿ ನೀಡಿರುವ ರಾಹುಲ್
ಕೆಎಲ್ ರಾಹುಲ್ 2017ರಲ್ಲಿ ಕೂಡ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದರು. ತಮ್ಮ ಸಂಕಷ್ಟದ ದಿನಗಳಲ್ಲಿ ಕೆಎಲ್ ರಾಹುಲ್ ಸಾಮಾನ್ಯವಾಗಿ ದೇವರ ಮೊರೆ ಹೋಗುತ್ತಾರೆ. ಮೂಲತಃ ಮಂಗಳೂರಿನವರು ಕೂಡ ಆಗಿರುವ ರಾಹುಲ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದಾರೆ.
2017ರಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅನ್ನದಾನ ಕೂಡ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಕಳಪೆ ಫಾರ್ಮ್ನಿಂದ ಟೀಕೆಗೆ ಒಳಗಾದ ರಾಹುಲ್
ಕೆಎಲ್ ರಾಹುಲ್ ಸದ್ಯ ಸಾಕಷ್ಟು ಟೀಕೆಗೆ ಗುರಿಯಾಗಿರುವ ಭಾರತೀಯ ಕ್ರಿಕೆಟರ್. ಟಿ20 ವಿಶ್ವಕಪ್ನಲ್ಲಿ ಅಸ್ಥಿರ ಪ್ರದರ್ಶನ ಮತ್ತು ನಿಧಾನ ಗತಿಯ ಬ್ಯಾಟಿಂಗ್ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಕೆಎಲ್ ರಾಹುಲ್ ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಸಾಕಷ್ಟು ಒತ್ತಾಯ ಕೇಳಿಬಂದಿದೆ.
ತಮ್ಮ ಫಾರ್ಮ್ ಕಂಡುಕೊಳ್ಳಲು ಕೆಎಲ್ ರಾಹುಲ್ ಹೆಚ್ಚಿನ ಅಭ್ಯಾಸ ಮಾಡಿದರು, ಮೆಂಟಲ್ ಕಂಡೀಷನಿಂಗ್ ಮಾಡಿದರೂ ಪ್ರದರ್ಶನದಲ್ಲಿ ಹೆಚ್ಚಿನ ಸುಧಾರಣೆ ಕಾಣಲಿಲ್ಲ, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೆಎಲ್ ರಾಹುಲ್ ವಿಫಲರಾದರು. ಕೆಎಲ್ ರಾಹುಲ್ ಟಿ20 ಮಾದರಿಯಲ್ಲಿ ಆಡಲು ಸೂಕ್ತವಲ್ಲ, ಅವರನ್ನು ಏಕದಿನ ಮತ್ತು ಟೆಸ್ಟ್ ತಂಡದಲ್ಲಿ ಮಾತ್ರ ಆಡಿಸಿ ಎಂದು ಹಲವು ಮಾಜಿ ಕ್ರಿಕೆಟಿಗರು ಒತ್ತಾಯಿಸಿದ್ದಾರೆ.
ಬಾಂಗ್ಲಾದೇಶದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಕೆಎಲ್ ರಾಹುಲ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ, ಈ ಸರಣಿಯಲ್ಲಿ ಅವರು ವಿಫಲರಾದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಅವಕಾಶ ಪಡೆಯುವುದು ಕಷ್ಟವಾಗಲಿದೆ.