ಭಾರತ ಮಹಿಳಾ ಕ್ರಿಕೆಟ್ ತಂಡ ಮುಂದಿನ ಶನಿವಾರ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಆಡಲಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ವೇಗಿ ಜೂಲನ್ ಗೋಸ್ವಾಮಿ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಿರಲಿದೆ. ಈ ಮಾಹಿತಿಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಜೂಲನ್ ಗೋಸ್ವಾಮಿಯವರ ಅಂತಿಮ ಪಂದ್ಯದ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ. ಆದರೆ ಈವರೆಗೂ ಜೂಲನ್ ಗೋಸ್ವಾಮಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ. ಆದರೆ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಈ ಬಗ್ಗೆ ಸುಳಿವು ನೀಡಿದ್ದರು. ಇದೀಗ ಸೌರವ್ ಗಂಗೂಲಿ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು
ಕಳೆದ ಮಾರ್ಚ್ನಲ್ಲಿ ನ್ಯೂಜಿಲೆಂಡ್ನಲ್ಲಿ ನಡೆದ ಏಕದಿನ ಮಾದರಿಯ ವಿಶ್ವಕಪ್ನ ನಂತರ ಜೂಲನ್ ಗೋಸ್ವಾಮಿ ಯಾವುದೇ ಸರಣಿಯಲ್ಲಿ ಭಾಗಿಯಾಗಿರಲಿಲ್ಲ. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ಪ್ರವಾಸಕ್ಕೆ ಜೂಲನ್ ಅವರನ್ನು ಆಯ್ಕೆ ಮಾಡಿದ ಬಳಿಕ ಜೂಲನ್ ಗೋಸ್ವಾಮಿ ಈ ಸರಣಿಯ ನಂತರ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು.
ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿದ್ದು ಈ ಸಂದರ್ಭದಲ್ಲಿ ಜೂಲನ್ ಗೋಸ್ವಾಮಿ ಪ್ರದರ್ಶನವನ್ನು ಕೊಂಡಾಡಿದ್ದಾರೆ. "ಜೂಲನ್ ಗೋಸ್ವಾಮಿ ಅವರ ಸಾಧನೆಯಿಂದಾಗಿ ನನಗೆ ಸಂತೋಷವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದು ನನ್ನ ಖುಷಿ ಹೆಚ್ಚಿಸಿದೆ. ಈ ಸರಣಿಯಲಲ್ಲಿ ಭಾರತದ ಮಹಿಳಾ ತಂಡ ಉತ್ತಮವಾಗಿ ಪ್ರದರ್ಶನ ನಿಡಿದ್ದು ಗೆಲುವು ಸಾಧಿಸಿದೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
"ಜೂಲನ್ ಗೋಸ್ವಾಮಿ ನಿಜಕ್ಕೂ ಓರ್ವ ದಿಗ್ಗಜ ಆಟಗಾರ್ತಿ. ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಅವರು ಬಂಗಾಳ ಚಕ್ದಾದಿಂದ ಬಂದವರು. ನಾನು ಅವರೊಂದಿಗೆ ತುಂಬಾ ಸೌಹಾರ್ದಯುತವಾದ ಸಂಬಂಧವನ್ನು ಹೊಂದಿದ್ದೇನೆ. ನಾನು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಸಂಬಂಧಿಸಿದಂತೆ ಜೂಲನ್ ಗೋಸ್ವಾಮಿ ಅವರೊಂದಿಗೆ ಸಾಕಷ್ಟು ಭಾರಿ ಚರ್ಚೆ ನಡೆಸಿದ್ದೇನೆ" ಎಂದಿದ್ದಾರೆ ಸೌರವ್ ಗಂಗೂಲಿ.
IND vs ENG: ಮಿಥಾಲಿ ರಾಜ್ ದಾಖಲೆ ಮುರಿದು ವಿಶ್ವದಲ್ಲಿ 3ನೇ ಸ್ಥಾನ ಪಡೆದ ಸ್ಮೃತಿ ಮಂಧಾನ
"ನನಗೆ ಜೂಲನ್ ಬಗ್ಗೆ ತುಂಬಾ ಸಂತೋಷವಿದೆ. ಈಗ ಅವರು 40ರ ಹರೆಯದ ಸನಿಹದಲ್ಲಿದ್ದಾರೆ. ಅವರ ವೃತ್ತಿ ಜೀವನ ನಿಜಕ್ಕೂ ಅದ್ಭುತವಾಗಿದೆ. ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನಕ್ಕೂ ಅಂತ್ಯವಿದೆ. ಕ್ರೀಡೆ ಅಂದರೆ ಹಾಗೆಯೇ. ಆದರೆ ಜೂಲನ್ ಗೋಸ್ವಾಮಿ ದೊಡ್ಡ ಪರಂಪರೆಯನ್ನೇ ಬಿಟ್ಟುಹೋಗುತ್ತಿದ್ದಾರೆ. ಆಕೆ ನಿಜಕ್ಕೂ ಎಲ್ಲರಿಗೂ ಮಾದರಿ. ಅವರ ವೃತ್ತಿ ಜೀವನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಂತ್ಯವಾಗುತ್ತಿದೆ. ಲಾರ್ಡ್ಸ್ನಲ್ಲಿ ವೃತ್ತಿಜೀವನ ಅಂತ್ಯಗೊಳಿಸುವುದು ದೊಡ್ಡ ಕನಸು" ಎಂದಿದ್ದಾರೆ ಸೌರವ್ ಗಂಗೂಲಿ.