ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ಈ ಗೆಲುವಿನಿಂದಾಗಿ ತಂಡದ ಬ್ಯಾಟ್ಸ್ಮನ್ಗಳು ಯಾವ ಗುರಿಯನ್ನಾದರು ನೀಡಿದರೂ ಬೆನ್ನತ್ತಬಹುದು ಎಂಬ ಭರವಸೆ ಮೂಡಿದೆ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರದರ್ಶನದ ಬಗ್ಗೆ ಮುಂಬೈ ನಾಯಕ ರೊಹಿತ್ ಶರ್ಮಾ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕ್ರಿಕೆಟ್ ಆಟದಿಂದಾಗಿ ನಾವು ಸಾಕಷ್ಟು ಆತ್ಮವಿಶ್ವಾಸವನ್ನು ಪಡೆದುಕೊಳ್ಳುತ್ತೇವೆ. ಈ ರೀತಿಯ ಕ್ಷಣಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿರುವುದು ನಮಗೆ ಅಗತ್ಯವಾಗಿದೆ. ಇದು ನಮಗೆ ಅತ್ಯುತ್ತಮ ದಿನ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
"ಸಾಮಾನ್ಯವಾಗಿ ಪಂದ್ಯದ ಫಿನಿಷಿಂಗ್ ಸಂದರ್ಭದಲ್ಲಿ ಓರ್ವ ಸೆಟ್ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಇರುವುದನ್ನು ನಾವು ಬಯಸುತ್ತೇವೆ. ಆದರೆ ಆ ಸಂದರ್ಭದಲ್ಲೆ ಕೆಲ ಸೆಟ್ ಬ್ಯಾಟ್ಸ್ಮನ್ಗಳು ವಿಕೆಟ್ ಕಳೆದುಕೊಂಡರು. ಆದರೆ ನಾನು ಯಾರತ್ತವೂ ಬೊಟ್ಟು ಮಾಡಲಾರೆ. ಯಾಕೆಂದರೆ ಈ ಆವೃತ್ತಿಯಲ್ಲಿ ಗುರಿ ಬೆನ್ನಟ್ಟುವುದು ಕಷ್ಟಕರವಾಗಿದೆ. ಆದರೆ ಇಂದು ನಾವು ಬ್ಯಾಟಿಂಗ್ ಮಾಡಿದ ರೀತಿಯಿಂದಾಗಿ ಯಾವ ಗುರಿಯನ್ನಾದರೂ ಬೆನ್ನಟ್ಟಬಲ್ಲೆವು ಎಂಬ ಭರವಸೆ ಮೂಡಿಸಿದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಡೆಲ್ಲಿ ತಂಡ 163 ರನ್ಗಳ ಗುರಿಯನ್ನು ನೀಡಿದಾಗ ಶಾಂತಚಿತ್ತದಿಂದ ಗುರಿಯನ್ನು ಬೆನ್ನಟ್ಟಬೇಕು ಎಂದು ಯೋಜನೆ ಮಾಡಿದೆವು. ಹಾಗೂ ಪಂದ್ಯದ ಮಧ್ಯದಲ್ಲಿ ಉತ್ತಮ ಜೊತೆಯಾಟವನ್ನು ಹೊಂದಬೇಕು ಎಂದುಕೊಂಡೆವು ಎಂದು ತಮ್ಮ ರಣತಂತ್ರವನ್ನು ಬಹಿರಂಗಗೊಳಿಸಿದರು.
ಮುಂಬೈ ಇಂಡಿಯನ್ಸ್ ಪರವಾಗಿ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದರೆ ಕ್ವಿಂಟನ್ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಅದ್ಭುತ ಆಟವನ್ನು ಪ್ರದರ್ಶಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು.