10. ಭುವನೇಶ್ವರ್ ಕುಮಾರ್
2013ರ ಸಮಯದಲ್ಲಿ ಧೋನಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಭಾರತದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ 2014ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸರಣಿಯಲ್ಲಿ 2 ಬಾರಿ 5 ವಿಕೆಟ್ಗಳ ಗೊಂಚಲನ್ನು ಪಡೆದುಕೊಳ್ಳುವುದರ ಮೂಲಕ ತಂಡದಲ್ಲಿ ಭದ್ರಸ್ಥಾನವನ್ನು ಕಂಡುಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭುವನೇಶ್ವರ್ ಕುಮಾರ್ ಹೆಚ್ಚಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳಲಿಲ್ಲ. ಕೊಹ್ಲಿ ನಾಯಕತ್ವದಲ್ಲಿ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡಿದರೂ ಸಹ ಗಾಯದ ಸಮಸ್ಯೆಯಿಂದ ಆಗಾಗ ಬಳಲುತ್ತಿದ್ದ ಭುವನೇಶ್ವರ್ ಕುಮಾರ್ 2018ರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲೇ ಇಲ್ಲ.
9. ಸುರೇಶ್ ರೈನಾ
ಟಿ ಟ್ವೆಂಟಿ ಸ್ಪೆಷಲಿಸ್ಟ್ ಎಂದೇ ಖ್ಯಾತಿಯನ್ನು ಪಡೆದಿದ್ದ ಸುರೇಶ್ ರೈನಾ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸಂದರ್ಭದಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿಯೂ ಸಹ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ತಂಡಕ್ಕೆ ನಾಯಕನಾದ ಆರಂಭದ ಒಂದೆರಡು ಸರಣಿಗಳಲ್ಲಿ ಅವಕಾಶವನ್ನು ಪಡೆದುಕೊಂಡಿದ್ದ ಸುರೇಶ್ ರೈನಾ ತದನಂತರ ತಂಡದಿಂದ ಹೊರಬಿದ್ದರು.
8. ಶಿಖರ್ ಧವನ್
ಧೋನಿ ನಾಯಕತ್ವದ ಟೆಸ್ಟ್ ತಂಡದಲ್ಲಿ ಆರಂಭಿಕ ಆಟಗಾರನಾಗಿ ಸಾಲು ಸಾಲು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಮೊಹಾಲಿ ಟೆಸ್ಟ್ನಲ್ಲಿ 188 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ದೀರ್ಘಕಾಲ ಸ್ಥಾನ ಪಡೆದುಕೊಳ್ಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಕೊಹ್ಲಿ ನಾಯಕತ್ವದಲ್ಲಿ ಶಿಖರ್ ಧವನ್ ಹೇಳಿಕೊಳ್ಳುವಂತಹ ಅವಕಾಶಗಳನ್ನೇನೂ ಪಡೆದುಕೊಳ್ಳಲಿಲ್ಲ. 2018ರಲ್ಲಿ ಕೊನೆಯ ಟೆಸ್ಟ್ ಪಂದ್ಯ ಆಡಿದ ಶಿಖರ್ ಧವನ್ ಮತ್ತೆ ಸ್ಥಾನ ಪಡೆದುಕೊಂಡೇ ಇಲ್ಲ.
7. ಗೌತಮ್ ಗಂಭೀರ್
ಟೆಸ್ಟ್ ಕ್ರಿಕೆಟ್ನಲ್ಲಿ ಗೌತಮ್ ಗಂಭೀರ್ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್ಮನ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಗೌತಮ್ ಗಂಭೀರ್ 2009ರಲ್ಲಿ ಐಸಿಸಿ ಬೆಸ್ಟ್ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ ಧೋನಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ ನಂತರ ಗೌತಮ್ ಗಂಭೀರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ.
6. ವರುಣ್ ಆ್ಯರನ್
2011ರಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ಟೀಮ್ ಇಂಡಿಯಾದ ವೇಗಿ ವರುಣ್ ಆ್ಯರನ್ ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡು ಉತ್ತಮ ಪ್ರದರ್ಶನವನ್ನು ನೀಡಿದ್ದರು. ಆದರೆ ಕೊಹ್ಲಿ ನಾಯಕತ್ವದ ನಂತರ ವರುಣ್ ಆ್ಯರನ್ ಹೇಳಿಕೊಳ್ಳುವಷ್ಟೇನೂ ಅವಕಾಶಗಳನ್ನು ಪಡೆದುಕೊಳ್ಳಲಿಲ್ಲ.
5. ಪ್ರವೀಣ್ ಕುಮಾರ್
ಭುವನೇಶ್ವರ್ ಕುಮಾರ್ ಆಗಮನಕ್ಕೂ ಮುನ್ನ ಭಾರತದ ವೇಗಿ ಪ್ರವೀಣ್ ಕುಮಾರ್ ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಸದ್ದು ಮಾಡಿದ್ದರು. 2011ರಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಅತ್ಯುತ್ತಮ ಪ್ರದರ್ಶನ ನೀಡಿದ್ದ ಪ್ರವೀಣ್ ಕುಮಾರ್ ಇಂಗ್ಲೆಂಡ್ ಆಟಗಾರರಲ್ಲಿ ನಡುಕ ಹುಟ್ಟಿಸಿದ್ದರು. ಆ ಪ್ರವಾಸದಲ್ಲಿ 15 ವಿಕೆಟ್ ಪಡೆದು ಮಿಂಚಿದ್ದ ಪ್ರವೀಣ್ ಕುಮಾರ್ 5 ವಿಕೆಟ್ಗಳ ಗೊಂಚಲನ್ನೂ ಪಡೆದಿದ್ದರು. ಆದರೆ ತದನಂತರ ಗಾಯದ ಸಮಸ್ಯೆಗಳಿಗೆ ಒಳಗಾದ ಪ್ರವೀಣ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾದರು.
4. ಪ್ರಗ್ಯಾನ್ ಓಜಾ
2013ರಲ್ಲಿ ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಗೊಂಚಲನ್ನು ಪಡೆದು ಮಿಂಚಿದ್ದ ಪ್ರಗ್ಯಾನ್ ಓಜಾ ತದನಂತರದ ದಿನಗಳಲ್ಲಿ ತಂಡದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಎಡವಿದರು. ಉತ್ತಮ ಪ್ರದರ್ಶನ ನೀಡಿದ ನಂತರವೂ ತಂಡದಲ್ಲಿ ಅವಕಾಶ ಸಿಗದೇ ಮೂಲೆಗುಂಪಾದ ಪ್ರಗ್ಯಾನ್ ಓಜಾ ಕೊಹ್ಲಿ ನಾಯಕತ್ವದಲ್ಲಿ ತಂಡಕ್ಕೆ ಮರಳುವಲ್ಲಿಯೂ ವಿಫಲರಾದರು. ಅದರಲ್ಲಿಯೂ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರ ಮಧ್ಯ ಪ್ರಗ್ಯಾನ್ ಓಜಾ ಮಂಕಾಗಿದ್ದು ನಿಜ.
3. ಪಂಕಜ್ ಸಿಂಗ್
2014ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಪಂಕಜ್ ಸಿಂಗ್ ಹೆಚ್ಚೇನು ವಿಕೆಟ್ ಪಡೆದುಕೊಳ್ಳದೇ ಇದ್ದರೂ ಸಹ ತನ್ನ ಉತ್ತಮ ಬೌಲಿಂಗ್ ವಿಧಾನದಿಂದ ಕ್ರೀಡಾ ತಜ್ಞರು ಮತ್ತು ಅಭಿಮಾನಿಗಳಿಂದ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿದ್ದರು. ಮುಂದಿನ ದಿನಗಳಲ್ಲಿ ಈತನಿಗೆ ಹೆಚ್ಚು ಅವಕಾಶಗಳು ಲಭಿಸುತ್ತವೆ ಎಂದು ಭಾವಿಸಲಾಗಿತ್ತು. ಆದರೆ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ನಂತರ ಪಂಕಜ್ ಸಿಂಗ್ ಯಾವುದೇ ಪಂದ್ಯದಲ್ಲಿಯೂ ಆಡುವ ಅವಕಾಶವನ್ನು ಪಡೆದುಕೊಳ್ಳಲೇ ಇಲ್ಲ.
2. ಅಭಿಮನ್ಯು ಮಿಥುನ್
2010ರಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಅಭಿಮನ್ಯು ಮಿಥುನ್ 4 ವಿಕೆಟ್ ಗೊಂಚಲನ್ನು ಪಡೆದು ಶ್ರೀಲಂಕಾದ ಬಲಿಷ್ಠ ಬ್ಯಾಟ್ಸ್ಮನ್ಗಳಾದ ತಿಲಕರತ್ನೆ ದಿಲ್ಶಾನ್, ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆರನ್ನು ಕಾಡಿದ್ದರು. ಆದರೆ ನಂತರದ ದಿನಗಳಲ್ಲಿ ಅವಕಾಶ ಪಡೆದುಕೊಳ್ಳುವಲ್ಲಿ ಎಡವಿದ ಅಭಿಮನ್ಯು ಮಿಥುನ್ ಕೇವಲ 4 ಟೆಸ್ಟ್ ಪಂದ್ಯಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
1. ಯುವರಾಜ್ ಸಿಂಗ್
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಖಾಯಂ ಸ್ಥಾನ ಪಡೆದುಕೊಳ್ಳುತ್ತಿದ್ದ ಆಟಗಾರರ ಪಟ್ಟಿಯಲ್ಲಿದ್ದವರಲ್ಲಿ ಯುವರಾಜ್ ಸಿಂಗ್ ಕೂಡ ಪ್ರಮುಖರು. ಆದರೆ 2012ರ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ಪಡೆದುಕೊಳ್ಳದ ಯುವರಾಜ್ ಸಿಂಗ್ ವಿರಾಟ್ ಕೊಹ್ಲಿ ನಾಯಕತ್ವದ ದಿನಗಳಲ್ಲಿ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ಅಂತಾರಾಷ್ಟ್ರೀಯ ತಂಡಕ್ಕೆ ಪುನಃ ಪ್ರವೇಶವನ್ನು ಪಡೆದುಕೊಳ್ಳಲೇ ಇಲ್ಲ.