ಹೆಡಿಂಗ್ಲೆ ಟೆಸ್ಟ್ ಭಾರತಕ್ಕೆ ಕಬ್ಬಿಣದ ಕಡಲೆ: ಕಾರಣ ತಿಳಿಸಿದ ಮಾಂಟಿ ಪೆನೆಸರ್

ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಅಬ್ಬರದ ಪ್ರದರ್ಶನ ನೀಡಿದೆ. ಇದರಲ್ಲಿ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಅದ್ಭುತ ರೀತಿಯಲ್ಲಿ ತಿರುಗು ಬಿದ್ದು ಸಂಪೂರ್ಣವಾಗಿ ವಶಕ್ಕೆ ಪಡೆದು ಗೆದ್ದು ಬೀಗಿದೆ. ಈ ಮೂಲಕ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ ನೀಡಲು ವಿರಾಟ್ ಬಳಗ ಸಜ್ಜಾಗಿದೆ. ಆದರೆ ಹೆಡಿಂಗ್ಲೆಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ತುಂಬಾ ಕಠಿಣವಾಗಿರಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಮಾಂಟಿ ಪೆನೆಸರ್ ಹೇಳಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಭಾನುವಾರ ಲೀಡ್ಸ್ಗೆ ಬಂದಿಳಿದಿದೆ. ಇಲ್ಲಿನ ಹೆಡಿಂಗ್ಲೆ ಮೈದಾನದಲ್ಲಿ ಭಾನುವಾರದಿಂದಲೇ ಕಠಿಣ ಅಭ್ಯಾಸವನ್ನು ಆರಂಭಿಸಿದೆ. ಬುಧವಾರ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಈ ಸೆಣೆಸಾಟದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾಗೆ ಹೆಡಿಂಗ್ಲೆ ಟೆಸ್ಟ್ ಒಂದ್ಯ ಯಾವ ರೀತಿಯಾಗಿ ಕಠಿಣವಾಗಿ ಪರಿಣಮಿಸಲಿದೆ ಎಂದು ವಿವರಿಸಿದ್ದಾರೆ. ಇದಕ್ಕೆ ಕಾರಣ ಹೆಡಿಂಗ್ಲೆ ಮೈದಾನ ಇಂಗ್ಲೆಂಡ್ ತಂಡದ ಪ್ರಮುಖ ಇಬ್ಬರು ಆಟಗಾರರ ತವರು ಅಂಗಳವಾಗಿದೆ.
ಜೋ ರೂಟ್, ಜಾನಿ ಬೈರ್ಸ್ಟೋವ್ಗೆ ತವರು ಅಂಗಳ: ಹೆಡಿಂಗ್ಲೆ ಮೈದಾನ ಭಾರತೀಯ ತಂಡಕ್ಕೆ ಕಠಿಣವಾಗಿ ಪರಿಣಮಿಸಲು ಪ್ರಮುಖ ಕಾರಣ ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋವ್ ಎಂದಿದ್ದಾರೆ ಮಾಂಟಿ ಪೆನೆಸರ್. ಇಂಗ್ಲೆಂಡ್ ತಂಡದ ಈ ಇಬ್ಬರು ಪ್ರಮುಖ ಆಟಗಾರರಿಗೂ ಹೆಡಿಂಗ್ಲೆ ಮೈದಾನ ತವರು ಅಂಗಳ. ಹೀಗಾಗಿ ಇಲ್ಲಿನ ಪ್ರತಿ ಮಾಹಿತಿಯೂ ಈ ಆಟಗಾರರಿಗೆ ಚೆನ್ನಾಗಿ ಅರಿವಿದೆ. ಅದರಲ್ಲೂ ಜೋ ರೂಟ್ ಇಂಗ್ಲೆಂಡ್ ತಂಡದ ನಾಯಕನೂ ಆಗಿದ್ದು ಈ ಮೈದಾನದಲ್ಲಿ ಭಾರತ ತಂಡದ ವಿರುದ್ಧ ಯಾವ ರೀತಿಯ ಕಾರ್ಯಾಚರಣೆ ಸೂಕ್ತ ಎಂದು ಉತ್ತಮ ಸಿದ್ಧತೆಯನ್ನು ಮಾಡಿಕೊಂಡಿರುತ್ತಾರೆ. ಇದು ಭಾರತ ತಂಡಕ್ಕೆ ಕಠಿಣವಾಗಬಹುದು ಎಂದಿದ್ದಾರೆ ಮಾಂಟಿ ಪೆನೆಸರ್.
ಲಾರ್ಡ್ಸ್ ರೀತಿಯಲ್ಲಿಯೇ ಬೌಲಿಂಗ್ ಪ್ರದರ್ಶನ ನೀಡಿದರೆ ಕಠಿಣವಲ್ಲ: ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಹೆಡಿಂಗ್ಲೆ ಮೈದಾನದಲ್ಲಿಯೂ ಯಶಸ್ಸು ಸಾಧಿಸಬೇಕಾದರೆ ಲಾರ್ಡ್ಸ್ ಅಂಗಳದಲ್ಲಿ ನೀಡಿದ ಬೌಲಿಂಗ್ ಪ್ರದರ್ಶನವನ್ನು ಇಲ್ಲಿಯೂ ಮುಂದುವರಿಸಬೇಕು. ಜೊತೆಗೆ ಜೋ ರೂಟ್ ವಿಕೆಟ್ಅನ್ನು ಶೀಘ್ರವಾಗಿ ಪಡೆಯಬೇಕು. ಹಾಗಾದಲ್ಲಿ ಮಾತ್ರ ಭಾರತ ತಂಡದ ಗೆಲುವು ಹೆಡಿಂಗ್ಲೆ ಅಂಗಳದಲ್ಲಿ ಸಾಧ್ಯವಾಗಲಿದೆ ಎಂದಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್.
ಸರಣಿ ಗೆಲುವಿಗೂ ಕಾರಣವಾಗಬಹುದು: ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ತನ್ನ ಬೌಲಿಂಗ್ನಲ್ಲಿ ತೋರಿಸುತ್ತಿರುವ ಪರಾಕ್ರಮ ಎಲ್ಲಾ ಪಂದ್ಯಗಳಲ್ಲಿಯೂ ಮುಂದುವರಿದರೆ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಸಂಪೂರ್ಣವಾಗಿ ಮುನ್ನಡೆಯನ್ನು ಸಾಧಿಸಲಿದೆ. ಮಾತ್ರವಲ್ಲದೆ ಟೆಸ್ಟ್ ಸರಣಿಯನ್ನು ಭಾರತ ತನ್ನ ವಶಕ್ಕೆ ಪಡೆದುಕೊಳ್ಳಲು ಕೂಡ ಅವಕಾಶವಿದೆ ಎಂದಿದ್ದಾರೆ ಮಾಂಟಿ ಪೆನೆಸರ್.
ಹೆಡಿಂಗ್ಲೆಯಲ್ಲಿಯೂ ಭಾರತವೇ ಫೇವರೀಟ್ ಆದರೆ..: ಇನ್ನು ಹೆಡಿಂಗ್ಲೆ ಟೆಸ್ಟ್ ಪಂದ್ಯದ ಬಗ್ಗೆ ವಿವರಿಸಿದ ಮಾಂಟಿ ಪೆನೆಸರ್ ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿಯೂ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಭಾರತ ಇಂಗ್ಲೆಂಡ್ ನಾಯಕ ಜೋ ರೂಟ್ ವಿಕೆಟ್ ಪಡೆಯಲು ಸಾಧ್ಯವಾದರೆ ಮಾತ್ರವೇ ಇದು ನೆರವೇರಲಿದೆ.
ಇಂಗ್ಲೆಂಡ್ ತಂಡಕ್ಕೆ ಕಠಣವಾಗುತ್ತಿದ್ದಾರೆ ಈ ವೇಗಿ: ಇನ್ನು ಭಾರತ ಹಾಗೂ ಇಂಗ್ಲೆಂಡ್ ತಂಡದಲ್ಲಿರುವ ವ್ಯತ್ಯಾಸವೆಂದರೆ ಅದು ವೇಗಿ ಮೊಹಮ್ಮದ್ ಸಿರಾಜ್ ಎಂದು ಪೆನೆಸರ್ ವಿವರಿಸಿದ್ದಾರೆ. ಸಿರಾಜ್ ಇಂಗ್ಲೆಂಡ್ ತಂಡದ ದಾಂಡಿಗರ ಪಾಲಿಗೆ ಅತ್ಯಂತ ಕಠಿಣ ಸವಾಲಾಗುತ್ತಿದ್ದಾರೆ. ಸಿರಾಜ್ ಎಸೆತಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲೆಂಡ್ ಆಟಗಾರರು ಪ್ರಯಾಸ ಪಡುತ್ತಿದ್ದಾರೆ ಎಂದು ಟೀಮ್ ಇಂಡಿಯಾ ಯುವ ವೇಗಿಯ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಲೀಡ್ಸ್ನಲ್ಲಿಯೂ ಮುಂದುವರಿಯಲಿದೆ ಆಕ್ರಮಣಕಾರಿ ಆಟ: ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಮಾಂಟಿ ಪೆನೆಸರ್ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಲೀಡ್ಸ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಆಕ್ರಮಣಕಾರಿ ಆಟವನ್ನು ಮುಂದುವರಿಸಬಹುದು ಎಂದಿದ್ದಾರೆ. "ವಿರಾಟ್ ಕೊಹ್ಲಿ ಹೆಡಿಂಗ್ಲೆಯಲ್ಲಿಯೂ ತನ್ನ ಆಟಗಾರರು ಆಕ್ರಮಣಕಾರಿಯಾಗಿ ಆಡುವುದನ್ನು ಬಯಸಬಹುದು. ಇದು ಮೂರನೇ ಟೆಸ್ಟ್ಬಲ್ಲಿಯೂ ಮುಂದುವರಿಯಬಹುದು. ಭಾರತೀಯ ತಂಡ ಈ ಮುಖಾಮುಖಿಯನ್ನು ಹಾಗೂ ನಾಟಕೀಯತೆಯನ್ನು ಬಯಸುತ್ತಿದೆ" ಎಂದಿದ್ದಾರೆ ಪೆನೆಸರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications