ನ್ಯೂಜಿಲೆಂಡ್ ವಿರುದ್ಧ ಸರಣಿಗೆ ಹಾರ್ದಿಕ್ ನಾಯಕ
ಹಾರ್ದಿಕ್ ಪಾಂಡ್ಯ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಟೀಮ್ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಈ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಹಾರ್ದಿಕ್ ಪಾಂಡ್ಯಗೆ ತಂಡವನ್ನು ಮುನ್ನಡೆಸುವ ಜವಾಬ್ಧಾರಿ ದೊರೆತಿದೆ. ಈಗಾಗಲೇ ಒಂದು ಬಾರಿ ಟೀಮ್ ಇಂಡಿಯಾವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ.
ಟಿ20ಗೆ ಹೊಸ ನಾಯಕನನ್ನು ಆಯ್ಕೆ ಮಾಡಿದರೆ ತಪ್ಪಿಲ್ಲ
ಮಾಜಿ ಕೋಚ್ ರವಿ ಶಾಸ್ತ್ರಿ ಟಿ20 ಕ್ರಿಕೆಟ್ಗೆ ಹೊಸ ನಾಯಕನನ್ನು ಆಯ್ಕೆ ಮಾಡಿದರೆ ತಪ್ಪಿಲ್ಲ ಎಂಬ ಮಾತು ಹೇಳಿದ್ದಾರೆ. ಇದು ತಂಡಕ್ಕೆ ಯಾವುದೇ ರೀತಿಯಲ್ಲೂ ಅಪಾಯವನ್ನುಂಟು ಮಾಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಒಬ್ಬ ಆಟಗಾರ ಮೂರು ಮಾದರಿಯಲ್ಲಿಯೂ ನಾಯಕನಾಗಿ ಮುನ್ನಡೆಸುವುದು ಕಠಿಣ ಎಂದಿದ್ದು ದೀರ್ಘ ಕಾಲದ ಗುರಿಯಿಟ್ಟುಕೊಂಡು ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದಿದ್ದಾರೆ.
ಮೂರು ಮಾದರಿಯಲ್ಲಿಯೂ ನಾಯಕನಾಗುವುದು ಸುಲಭವಲ್ಲ
ನನ್ನ ಪ್ರಕಾರ ಟಿ20 ಮಾದರಿಗೆ ಹೊಸ ನಾಯಕನನ್ನು ಆಯ್ಕೆ ಮಾಡುವುದರಿಂದ ಯಾವುದೇ ಆಪಾಯವಾಗುವುದಿಲ್ಲ. ಯಾಕೆಂದರೆ ಅಷ್ಟು ಪ್ರಮಾಣದಲ್ಲಿ ಪಂದ್ಯಗಳು ನಡೆಯುತ್ತಿದ್ದು ಮೂರು ಮಾದರಿಯಲ್ಲಿಯೂ ನಾಯಕನಾಗಿ ಮುನ್ನಡೆಸುವುದು ಸುಲಭವಿರುವುದಿಲ್ಲ" ಎಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಹಿನ್ನೆಲೆಯಲ್ಲಿ ಪ್ರೈಮ್ ವಿಡಿಯೋ ನಡೆಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
"ರೋಹಿತ್ ಶರ್ಮಾ ಈಗಾಗಲೇ ಏಕದಿನ ಹಾಗೂ ಟೆಸ್ಟ್ ಸರಣಿಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಟಿ20 ಮಾದರಿಗೆ ಹೊಸ ನಾಯಕನನ್ನು ಆಯ್ಕೆ ಮಾಡುವುದರಲ್ಲಿ ತಪ್ಪಿಲ್ಲ. ಆ ನಾಯಕನ ಹೆಸರು ಹಾರ್ದಿಕ್ ಪಾಂಡ್ಯ" ಎಂದಿದ್ದಾರೆ ರವಿ ಶಾಸ್ತ್ರಿ.