
ನವದೆಹಲಿ, ಜುಲೈ 27: ಟೀಮ್ ಇಂಡಿಯಾಕ್ಕೆ ಮುಖ್ಯ ಕೋಚ್ ಮತ್ತು ಬೆಂಬಲ ಸಿಬ್ಬಂದಿಗಳನ್ನು ನೇಮಿಸುವುದಕ್ಕಾಗಿ ಇರುವ ಮೂರು ಜನರಿರುವ ಸಮಿತಿಯಲ್ಲಿರುವ ಸುಪ್ರೀಮ್ ಕೋರ್ಟ್ ನೇಮಿತ ಆಡಳಿತ ಮಂಡಳಿಯಿಂದ (ಸಿಒಎ) ನೇಮಿತ ಅಂಶುಮಾನ್ ಗಾಯಕ್ವಾಡ್ ಅವರು ಮುಖ್ಯ ಕೋಚ್ಆಗಿ ರವಿಶಾಸ್ತ್ರಿ ಅವರೇ ಮುಂದುವರೆಯಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.
ಶುಕ್ರವಾರ (ಜುಲೈ 26) ಸಂದರ್ಶನವೊಂದರಲ್ಲಿ ಮಾತನಾಡಿದ ಗಾಯಕ್ವಾಡ್, ರವಿ ಶಾಸ್ತ್ರಿ ಅವರ ಸ್ಥಾನದಲ್ಲಿ ಬದಲಾವಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋಚ್ ಮತ್ತು ಸಿಬ್ಬಂದಿಗಳನ್ನು ಆರಿಸುವ ಸಮಿತಿಯಲ್ಲಿ ಗಾಯಕ್ವಾಡ್, ಭಾರತ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಮತ್ತು ಮಹಿಳಾ ಕ್ರಿಕೆಟ್ ತಂಡ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಇದ್ದಾರೆ.
'ಬೇರೆ ಬೇರೆ ಫಲಿತಾಂಶಗಳನ್ನು ಆಧರಿಸಿ ನ್ಯಾಯವಾಗಿ ಹೇಳೋದಾದ್ರೆ, ರವಿ ಶಾಸ್ತ್ರಿ ತಮ್ಮ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆ. ಹೀಗಾಗಿ ರವಿ ಶಾಸ್ತ್ರಿ ಅವರ ಸ್ಥಾನವನ್ನು ಹೊರತುಪಡಿಸಿ (ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್, ಫಿಸಿಯೋ ಥೆರಪಿಸ್ಟ್ ಮತ್ತು ಕಂಡೀಷನಿಂಗ್ ಇತ್ಯಾದಿ ಸ್ಥಾನಗಳು ಆಯ್ಕೆಗೆ ತೆರೆದಿವೆ,' ಎಂದಿದ್ದಾರೆ.
'ನನ್ನ ಅನಿಸಿಕೆಯ ಪ್ರಕಾರ ಬೇರೆ ಬೇರೆ ಸ್ಥಾನಗಳಿಗಾಗಿ ಅರ್ಜಿ ಸಲ್ಲಿಸಿದವರು ಬಿಸಿಸಿಐ ಮಾನದಂಡಗಳಿಗೆ ಎಷ್ಟರ ಮಟ್ಟಿಗೆ ಹತ್ತಿರವಾಗುತ್ತಾರೋ ಅದರ ಮೇಲೆ ಆಯ್ಕೆ ಅವಲಂಬಿತವಾಗಲಿದೆ,' ಎಂದು ಗಾಯಕ್ವಾಡ್ ಹೇಳಿದ್ದಾರೆ. ಅಂಶುಮಾನ್ ಈ ಹಿಂದೆ 1997/98ರಿಂದ 1999ರ ವರೆಗೆ ಟೀಮ್ ಇಂಡಿಯಾದ ಕೋಚ್ ಆಗಿದ್ದವರು.