ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅಮೋಘ ಪ್ರದರ್ಶನ ನೀಡಿದರು. 145 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 74 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಜೊತೆಯಾದ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಜೋಡಿ 8ನೇ ವಿಕೆಟ್ಗೆ ಅಜೇಯ 71 ರನ್ ಕಲೆ ಹಾಕುವ ಮೂಲಕ ಭಾರತಕ್ಕೆ 3 ವಿಕೆಟ್ ಜಯ ತಂದುಕೊಟ್ಟರು. ಅಜೇಯ 42 ರನ್ ಗಳಿಸಿದ ಅಶ್ವಿನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯದಲ್ಲಿ 6 ವಿಕೆಟ್ ಪಡೆದು, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕಾಗಿ ಅವರಿಗೆ ಪಂದ್ಯದ ಆಟಗಾರ ಪ್ರಶಸ್ತಿ ನೀಡಲಾಯಿತು.
ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿರುವ ಅವರು, ತಮ್ಮ ಮುಂದಿನ ಗುರಿ ಏನು ಎನ್ನುವುದನ್ನು ತಿಳಿಸಿದ್ದಾರೆ. ಚೇತೇಶ್ವರ ಪೂಜಾರ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅಶ್ವಿನ್ ಭಾರತದ ಮುಂದಿನ ಟೆಸ್ಟ್ ಸರಣಿಗೆ ಕಾಯುತ್ತಿರುವುದಾಗಿ ಹೇಳಿದ್ದಾರೆ.
IPL 2023: ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಮೂವರು ಮಾಜಿ ಆರ್ಸಿಬಿ ಆಟಗಾರರು
2023ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಆಡಲಿದೆ. ಇದಕ್ಕೆ ಭಾರತ ಆತಿಥ್ಯ ವಹಿಸುತ್ತಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪುವ ದೃಷ್ಟಿಯಿಂದ ಇಂದು ಭಾರತಕ್ಕೆ ಮಹತ್ವದ ಸರಣಿಯಾಗಿದೆ. ಈ ಸರಣಿಯಲ್ಲಿ ಭಾರತ ಕನಿಷ್ಠ 3 ಪಂದ್ಯಗಳಲ್ಲಿ ಗೆದ್ದರೆ ಸುಲಭವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗೆಲ್ಲುವ ವಿಶ್ವಾಸ
ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ನಾವು ಗೆಲ್ಲುವ ವಿಶ್ವಾಸವಿದೆ ಎಂದು ಆರ್ ಅಶ್ವಿನ್ ಹೇಳಿದ್ದಾರೆ. "ನಾನು ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಎದುರು ನೋಡುತ್ತಿದ್ದೇನೆ, ನಾವು ಅವರ ವಿರುದ್ಧ ತವರು ಮತ್ತು ವಿದೇಶಗಳಲ್ಲಿ ಅತ್ಯುತ್ತಮ ಪಂದ್ಯಗಳನ್ನು ಆಡಿದ್ದೇವೆ" ಎಂದು ಹೇಳಿದರು.
2017ರಿಂದ ಭಾರತದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಆಯೋಜಿಸಲಾಗುತ್ತಿದೆ. ಭಾರತ ಕೊನೆಯ ಮೂರು ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಗೆದ್ದಿದೆ. 2023ರಲ್ಲಿ ಕೂಡ ಟ್ರೋಫಿ ಗೆಲ್ಲುವ ವಿಶ್ವಾಸವಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯುವ ವಿಶ್ವಾಸವಿದೆ.
"ಟೆಸ್ಟ್ ಕ್ರಿಕೆಟ್ನಲ್ಲಿ ರಕ್ಷಣಾತ್ಮಕವಾಗಿ ಆಡುವುದು ಮುಖ್ಯವಾಗುತ್ತದೆ. ಆಧುನಿಕ ಕ್ರಿಕೆಟ್ ಸಿಕ್ಸ್, ಬೌಂಡರಿ ಹೊಡೆಯಲು ಕೇಳುತ್ತದೆ. ಬೌಲರ್ಗಳು ನಿಮ್ಮ ಮೇಲೆ ಒತ್ತಡ ಹೇರಲು ಬಿಡಬಾರದು. ನನ್ನ ಬ್ಯಾಟಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ನಾನು ಕೆಲಸ ಮಾಡುತ್ತಿದ್ದೇನೆ. ಪವರ್-ಹಿಟ್ಟಿಂಗ್ನಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನನ್ನ ಮೇಲೆ ಆ ವಿಶ್ವಾಸವಿದೆ" ಎಂದು ಅವರು ಹೇಳಿದ್ದಾರೆ.