ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ರೋಹಿತ್
ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಂಜು ಸ್ಯಾಮ್ಸನ್ ಕುರಿತಾಗಿ ಮಾತನಾಡಿರುವ ರೋಹಿತ್ ಶರ್ಮಾ ಐಪಿಎಲ್ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಎಲ್ಲರ ಗಮನವನ್ನು ಸೆಳೆಯುವಂಥ ಅತ್ಯುತ್ತಮ ಪ್ರದರ್ಶನವನ್ನು ನೀಡಬಲ್ಲ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಹೊಗಳಿದ್ದಾರೆ. ಇಂತಹ ಪ್ರತಿಭೆಯನ್ನು ಹಲವಾರು ಕ್ರಿಕೆಟಿಗರು ಹೊಂದಿದ್ದು, ಅದನ್ನು ಯಾವ ರೀತಿ ಬಳಸಬೇಕು ಎನ್ನುವುದು ಕಠಿಣ ಭಾಗವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಮಿಕ್ಕಿದ್ದು ಸಂಜು ಸ್ಯಾಮ್ಸನ್ ಅವರಿಗೆ ಬಿಟ್ಟದ್ದು ಎಂದ ಶರ್ಮಾ
ಹೀಗೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿ ಬಳಸಿಕೊಳ್ಳಬೇಕು ಎಂದಿರುವ ರೋಹಿತ್ ಶರ್ಮಾ ಇದೀಗ ಎಲ್ಲಾ ಸಂಜು ಸ್ಯಾಮ್ಸನ್ ಅವರಿಗೆ ಬಿಟ್ಟದ್ದು ಎಂದಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಅವರನ್ನು ಓರ್ವ ಆಟಗಾರನಾಗಿ ಪರಿಗಣಿಸಿದ್ದು ಆತನಲ್ಲಿರುವ ವಿಶೇಷ ಪ್ರತಿಭೆಯಿಂದಲೇ ಅವಕಾಶವನ್ನು ನೀಡಿದೆ, ಹೀಗಾಗಿ ಸಂಜು ಸ್ಯಾಮ್ಸನ್ ಅದನ್ನು ಅರಿಯಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಬ್ಯಾಕ್ಫುಟ್ ಹೊಡೆತ ಬಾರಿಸಬಲ್ಲ ಸಾಮರ್ಥ್ಯವಿರುವ ಸಂಜು ಸ್ಯಾಮ್ಸನ್ ರೀತಿಯ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ತಂಡದಲ್ಲಿರಬೇಕು ಎಂದಿರುವ ರೋಹಿತ್ ಶರ್ಮಾ ಮುಂದೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬುದನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ. ಹಾಗೂ ಇನ್ನೂ ಮುಂದುವರಿದು ಮಾತನಾಡಿರುವ ರೋಹಿತ್ ಶರ್ಮಾ ಸಂಜು ಸ್ಯಾಮ್ಸನ್ ಈ ಅಂಶಗಳನ್ನೆಲ್ಲಾ ಗಮನಿಸಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಭಾವಿಸುತ್ತೇನೆ ಎಂದು ಹೇಳಿಕೆ ನೀಡುವುದರ ಮೂಲಕ ಪರೋಕ್ಷವಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಪ್ರದರ್ಶನ ನೀಡಬೇಕು ಎಂಬ ಎಚ್ಚರಿಕೆ ನೀಡಿದ್ದಾರೆ.
ಸಂಜು ಸ್ಯಾಮ್ಸನ್ ಟಿ ಟ್ವೆಂಟಿ ಅಂಕಿ ಅಂಶ
ಇದುವರೆಗೂ ಒಟ್ಟು 10 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಭಾರತ ತಂಡದ ಪರ ಕಣಕ್ಕಿಳಿದಿರುವ ಸಂಜು ಸ್ಯಾಮ್ಸನ್ ಕೇವಲ 117 ರನ್ ಬಾರಿಸಲಷ್ಟೇ ಶಕ್ತರಾಗಿದ್ದು, ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಹೀಗೆ ಸಿಕ್ಕ ಅವಕಾಶವನ್ನು ಇದುವರೆಗೂ ಸರಿಯಾಗಿ ಬಳಸಿಕೊಳ್ಳಲಾಗದ ಸಂಜು ಸ್ಯಾಮ್ಸನ್ ಸದ್ಯ ಶ್ರೀಲಂಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಸಿಕ್ಕಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ಗೆ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.