ಈ ಕಾರಣಕ್ಕಾಗಿ ಕೆಎಲ್ ರಾಹುಲ್ಗೆ ಯಾವುದೇ ನಾಯಕತ್ವ ಕೊಡಬಾರದು ಎಂದ ಗೌತಮ್ ಗಂಭೀರ್!

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯವಾದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹರಿಣಗಳ ವಿರುದ್ಧ 1 - 2 ಅಂತರದಲ್ಲಿ ಹೀನಾಯವಾಗಿ ಸೋಲುವುದರ ಮೂಲಕ ಮುಖಬಂಗಕ್ಕೊಳಗಾಗಿ ಇದೀಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ.
ಇತ್ತಂಡಗಳ ನಡುವಿನ ಏಕದಿನ ಸರಣಿ ಇಂದಿನಿಂದ ( ಜನವರಿ 19 ) ಆರಂಭವಾಗಿದ್ದು ಈ ಸರಣಿಯಲ್ಲಿ ಜಯ ಸಾಧಿಸುವುದರ ಮೂಲಕ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದರ ಪ್ರತೀಕಾರವನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ. ಇನ್ನು ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧದ ಈ ಏಕದಿನ ಸರಣಿಯ ಮೂಲಕ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಬೇಕಿತ್ತು. ಕಳೆದ ವರ್ಷ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿದ ಬಿಸಿಸಿಐ ರೋಹಿತ್ ಶರ್ಮಾ ಹೆಗಲಿಗೆ ಈ ಜವಾಬ್ದಾರಿಯನ್ನು ಹಾಕಿತ್ತು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ರೋಹಿತ್ ಶರ್ಮಾ ಗಾಯದ ಸಮಸ್ಯೆಗೊಳಗಾದ ಕಾರಣದಿಂದಾಗಿ ಪ್ರವಾಸದಿಂದ ಹೊರಗುಳಿದಿದ್ದು, ಸದ್ಯಕ್ಕೆ ಟೀಮ್ ಇಂಡಿಯಾವನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕೆ ಎಲ್ ರಾಹುಲ್ ನಾಯಕನಾಗಿ ಮುನ್ನಡೆಸುತ್ತಿದ್ದಾರೆ.
ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ಯಾರನ್ನು ನೇಮಿಸಬೇಕು ಎಂಬುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸದ್ಯ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ನಾಯಕನಾಗಬೇಕು ಎಂದು ಕೆಲವರು ಅಭಿಪ್ರಾಯ ಪಡುತ್ತಿದ್ದರೆ, ಮತ್ತೊಂದಷ್ಟು ಮಂದಿ ರೋಹಿತ್ ಶರ್ಮಾ ಅವರೇ ಟೆಸ್ಟ್ ತಂಡದ ನಾಯಕತ್ವವನ್ನೂ ಕೂಡ ವಹಿಸಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ರೋಹಿತ್ ಶರ್ಮಾ ಎಲ್ಲಾ ಮಾದರಿಯ ನಾಯಕನಾಗಬೇಕು
ವಿವಿಧ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಯಾರಾಗಬೇಕು ಎಂಬುದರ ಕುರಿತಾಗಿ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿರುವ ಗೌತಮ್ ಗಂಭೀರ್ ರೋಹಿತ್ ಶರ್ಮಾ ಅವರೇ ಎಲ್ಲಾ ಮಾದರಿಯ ನಾಯಕನಾಗಬೇಕು ಎಂದಿದ್ದಾರೆ. ಹಾಗೂ ಕೆಎಲ್ ರಾಹುಲ್ ಎಲ್ಲಾ ಮಾದರಿಯ ತಂಡಗಳಿಗೆ ಉಪ ನಾಯಕನಾಗಬೇಕು ಎಂದು ಸಹ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಟೆಸ್ಟ್ ನಾಯಕನಾಗಲಿ ಎಂದು ಗಂಭೀರ್ ಹೇಳದಿರಲು ಕಾರಣ
ಇನ್ನು ಎಲ್ಲ ಮಾದರಿಗಳಿಗೂ ರೋಹಿತ್ ಶರ್ಮಾ ಅವರೇ ನಾಯಕನಾಗಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿರುವ ಗೌತಮ್ ಗಂಭೀರ್ ಇದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. ಎಲ್ಲಾ ಮಾದರಿಯ ತಂಡಗಳಿಗೂ ಓರ್ವನೇ ನಾಯಕನಿದ್ದರೆ ತಂಡದಲ್ಲಿ ಯಾವುದೇ ರೀತಿಯ ಗೊಂದಲಗಳಿರುವುದಿಲ್ಲ ಹಾಗೂ ತಂಡದಲ್ಲಿ ಸ್ಥಿರತೆ ಇರಲಿದೆ. ಅದರಲ್ಲಿಯೂ ಈ ವರ್ಷ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇರುವುದರಿಂದ ಎಲ್ಲ ಮಾದರಿಗಳಿಗೂ ಓರ್ವನೇ ನಾಯಕನಿರುವುದು ಉತ್ತಮ ಆಯ್ಕೆ ಎಂದು ಗಂಭೀರ್ ತಿಳಿಸಿದ್ದಾರೆ.

ಟೆಸ್ಟ್ ತಂಡದ ನಾಯಕತ್ವ ನಿಭಾಯಿಸಲು ಸಿದ್ಧ ಎಂದಿದ್ದ ಕೆಎಲ್ ರಾಹುಲ್
ಇನ್ನು ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾಗ ತನಗೆ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಿದರೆ ನಿಭಾಯಿಸಲು ಸಿದ್ಧ ಎಂಬ ಹೇಳಿಕೆಯನ್ನು ನೀಡಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications