ರೋಹಿತ್ ಶರ್ಮಾ ಎಲ್ಲಾ ಮಾದರಿಯ ನಾಯಕನಾಗಬೇಕು
ವಿವಿಧ ಮಾದರಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಯಾರಾಗಬೇಕು ಎಂಬುದರ ಕುರಿತಾಗಿ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿರುವ ಗೌತಮ್ ಗಂಭೀರ್ ರೋಹಿತ್ ಶರ್ಮಾ ಅವರೇ ಎಲ್ಲಾ ಮಾದರಿಯ ನಾಯಕನಾಗಬೇಕು ಎಂದಿದ್ದಾರೆ. ಹಾಗೂ ಕೆಎಲ್ ರಾಹುಲ್ ಎಲ್ಲಾ ಮಾದರಿಯ ತಂಡಗಳಿಗೆ ಉಪ ನಾಯಕನಾಗಬೇಕು ಎಂದು ಸಹ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಟೆಸ್ಟ್ ನಾಯಕನಾಗಲಿ ಎಂದು ಗಂಭೀರ್ ಹೇಳದಿರಲು ಕಾರಣ
ಇನ್ನು ಎಲ್ಲ ಮಾದರಿಗಳಿಗೂ ರೋಹಿತ್ ಶರ್ಮಾ ಅವರೇ ನಾಯಕನಾಗಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿರುವ ಗೌತಮ್ ಗಂಭೀರ್ ಇದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. ಎಲ್ಲಾ ಮಾದರಿಯ ತಂಡಗಳಿಗೂ ಓರ್ವನೇ ನಾಯಕನಿದ್ದರೆ ತಂಡದಲ್ಲಿ ಯಾವುದೇ ರೀತಿಯ ಗೊಂದಲಗಳಿರುವುದಿಲ್ಲ ಹಾಗೂ ತಂಡದಲ್ಲಿ ಸ್ಥಿರತೆ ಇರಲಿದೆ. ಅದರಲ್ಲಿಯೂ ಈ ವರ್ಷ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇರುವುದರಿಂದ ಎಲ್ಲ ಮಾದರಿಗಳಿಗೂ ಓರ್ವನೇ ನಾಯಕನಿರುವುದು ಉತ್ತಮ ಆಯ್ಕೆ ಎಂದು ಗಂಭೀರ್ ತಿಳಿಸಿದ್ದಾರೆ.
ಟೆಸ್ಟ್ ತಂಡದ ನಾಯಕತ್ವ ನಿಭಾಯಿಸಲು ಸಿದ್ಧ ಎಂದಿದ್ದ ಕೆಎಲ್ ರಾಹುಲ್
ಇನ್ನು ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾಗ ತನಗೆ ಟೆಸ್ಟ್ ತಂಡದ ನಾಯಕತ್ವದ ಜವಾಬ್ದಾರಿಯನ್ನು ನೀಡಿದರೆ ನಿಭಾಯಿಸಲು ಸಿದ್ಧ ಎಂಬ ಹೇಳಿಕೆಯನ್ನು ನೀಡಿದ್ದರು. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮುಗಿದ ನಂತರ ಭಾರತ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ವಿಷಯವನ್ನು ಬಿಸಿಸಿಐ ಅಧಿಕೃತವಾಗಿ ಘೋಷಿಸಲಿದೆ.