
ಬೆಂಗಳೂರು, ಏಪ್ರಿಲ್ 03: ಪಾಕಿಸ್ತಾನಿ ಕ್ರಿಕೆಟರ್ ಶಹೀದ್ ಅಫ್ರಿದಿ ಅವರು ಕಾಶ್ಮೀರದಲ್ಲಿ ಎಲ್ಲವೂ ಸರಿಯಿಲ್ಲ, ವಿಶ್ವಸಂಸ್ಥೆ ನೆರವು ಬೇಕಿದೆ ಎಂದು ಮಾಡಿದ ಟ್ವೀಟ್ ತಿರುಗುಬಾಣವಾಗಿದೆ. ಕ್ರಿಕೆಟರ್ ಗಳು, ಸಾರ್ವಜನಿಕರು ತಿರುಗೇಟು ನೀಡುತ್ತಿದ್ದಾರೆ.
ಕಾಶ್ಮೀರದ ರಕ್ತಪಾತವನ್ನು ತಡೆಯುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂದು ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರು ತಿಳಿಸಿದ್ದಾರೆ.
'ಭಾರತ ಆಕ್ರಮಿತ ಕಾಶ್ಮೀರದಲ್ಲಿ ಚಿಂತೆಗೀಡುಮಾಡುವ ಪರಿಸ್ಥಿತಿ ನಡೆಯುತ್ತಿದೆ. ದುರಾಡಳಿತದಿಂದಾಗಿ ಸ್ವಸಂಕಲ್ಪ ಹಾಗೂ ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತಿದ ಅಮಾಯಕರ ಬಲಿಯಾಗುತ್ತಿದ್ದಾರೆ. ಆಶ್ಚರ್ಯವೆಂದರೆ ವಿಶ್ವಸಂಸ್ಥೆ ಹಾಗೂ ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳು ಎಲ್ಲಿವೆ ಎಂಬ ಪ್ರಶ್ನೆ ಮೂಡುವಂತಿದೆ. ರಕ್ತಪಾತವನ್ನು ತಡೆಯುವಲ್ಲಿ ಇವುಗಳು ಯಾಕೆ ಪ್ರಯತ್ನಿಸುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 13 ಮಂದಿ ಉಗ್ರರು ಸೇರಿದಂತೆ 20 ಮಂದಿ ಮೃತರಾಗಿದ್ದರು. ಮೃತರ ಪೈಕಿ ನಾಲ್ವರು ನಾಗರಿಕರು ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದರು.
ಅಫ್ರಿದಿ ಅವರ ಟ್ವೀಟ್ ಗೆ ಉತ್ತರಿಸಿರುವ ಕ್ರಿಕೆಟರ್ ಗೌತಮ್ ಗಂಭೀರ್ ಅವರು, ಬಹುಶಃ UN ಎಂದರೆ ವಿಶ್ವಸಂಸ್ಥೆಯಲ್ಲ, ಅಂಡರ್ ನೈಂಟಿನ್ ಎಂದು ಅಫ್ರಿದಿ ತಿಳಿದಿರಬಹುದು ಎಂದು ಗೇಲಿ ಮಾಡಿದ್ದಾರೆ.