
ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕತ್ವದ ವಿಚಾರವಾಗಿ ಬಿಸಿಸಿಐ ಅತ್ಯಂತ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇತ್ತೀಚೆಗಷ್ಟೇ ಟಿ20 ನಾಯಕತ್ವವನ್ನು ತ್ಯಜಿಸಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನ ನಾಯಕತ್ವದಲ್ಲಿ ಮಾತ್ರವೇ ಮುಂದುವರಿಯುವುದಾಗಿ ಘೋಷಿಸಿದ್ದ ವಿರಾಟ್ ಕೊಹ್ಲಿಗೆ ಬಿಸಿಸಿಐ ಶಾಕ್ ನೀಡಿದೆ. ಏಕದಿನ ಕ್ರಿಕೆಟ್ನ ನಾಯಕತ್ವವನ್ನು ವಿರಾಟ್ ಕೊಹ್ಲಿಯಿಂದ ಬಿಸಿಸಿಐ ಹಿಂಪಡೆದಿದ್ದು ರೋಹಿತ್ ಶರ್ಮಾ ಅವರನ್ನೇ ನಾಯಕ ಏಕದಿನ ಮಾದರಿಗೂ ನಾಯಕನನ್ನಾಗಿ ನಿಯೋಜಿಸಿದೆ. ಈ ಮೂಲಕ ವೈಟ್ಬಾಲ್ ಕ್ರಿಕೆಟ್ಗೆ ಸಂಪೂರ್ಣವಾಗಿ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಯಲಿದ್ದು ವಿರಾಟ್ ಕೊಹ್ಲಿ ರೆಡ್ ಬಾಲ್ ನಾಯಕನಾಗಿ ಮುಂದುವರಿಯಲಿದ್ದಾರೆ.
ಆದರೆ ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಈಗ ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ವಿರುದ್ಧ ವಿರಾಟ್ ಕೊಹ್ಲಿ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಬಿಸಿಸಿಐ ನಿರ್ಧಾರಕ್ಕೆ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಟ್ವಿಟ್ಟರ್ನಲ್ಲಿ #ShameOnBCCI ಟ್ರೆಂಡಿಂಗ್ನಲ್ಲಿದೆ.
ವಿರಾಟ್ ಕೊಹ್ಲಿ ಕಳೆದ ನಾಲ್ಕುವರೆ ವರ್ಷಗಳಿಮದ ಟೀಮ್ ಇಂಡಿಯಾದ ನಾಯಕನಾಗಿದ್ದು ತಂಡ ಸಾಕಷ್ಟು ಉತ್ತಮ ಪ್ರಗತಿ ಸಾಧಿಸಿದೆ. ಸಾಕಷ್ಟು ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ವಿದೇಶಗಳಲ್ಲಿಯೂ ಭಾರತದ ಪ್ರದರ್ಶನ ಗಮನಾರ್ಹವಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಭಾರತ ಮತ್ತೆ ಮತ್ತೆ ವೈಫಲ್ಯವನ್ನು ಅನುಭವಿಸುತ್ತಾ ಬಂದಿದೆ. ಇದು ವಿರಾಟ್ ಕೊಹ್ಲಿಯ ನಾಯಕತ್ವದ ಮೇಲೆ ಪ್ರಶ್ನೆಗಳು ಮೂಡುವಂತೆ ಮಾಡಿತ್ತು.
ಮತ್ತೊಂದೆಡೆ ನಾಯಕನಾಗಿ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಮಿಂಚುತ್ತಿರುವುದು ವಿರಾಟ್ ಕೊಹ್ಲಿಯ ಮೇಲೆ ಒತ್ತಡ ಹೆಚ್ಚಾಗುವಂತೆ ಮಾಡಿತ್ತು. ಐದು ಐಪಿಎಲ್ ಟ್ರೋಫಿಗಳನ್ನು ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದುಕೊಂಡಿತ್ತು. ಮತ್ತೊಂದೆಡೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿಯೂ ನಾಯಕನಾಗಿ ವೈಫಲ್ಯವನ್ನು ಅನುಭವಿಸುತ್ತಾ ಬಂದರು. ಒಂದು ಬಾರಿಯೂ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. ಹೀಗಾಗಿ ವಿರಾಟ್ ಕೊಹ್ಲಿಗಿಂತ ವೈಟ್ಬಾಲ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಉತ್ತಮ ನಾಯಕ ಎಂಬ ಅಭಿಪ್ರಾಯಗಳು ಹೆಚ್ಚಾಯಿತು. ಕ್ರಿಕೆಟ್ ಪಂಡಿತರಿಂದಲೂ ಇಂತಾದ್ದೇ ಅಭಿಪ್ರಾಯಗಳು ವ್ಯಕ್ತವಾಯಿತು.
ಟಿ20 ವಿಶ್ವಕಪ್ಗೆ ಮುನ್ನ ನಿರ್ಧಾರ ಪ್ರಕಟಿಸಿದ ಕೊಹ್ಲಿ: ಇನ್ನು ಈ ಬಗ್ಗೆ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ ಈ ಬಾರಿಯ ಟಿ20 ವಿಶ್ವಕಪ್ನ ಆರಂಭಕ್ಕೆ ಕ್ಷಣಗಣನೆ ಇರುವಾದ ವಿರಾಟ್ ಕೊಹ್ಲಿ ಟಿ20 ನಾಯಕತ್ವದ ವಿಚಾರವಾಗಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದ್ದರು. ಟಿ20 ವಿಶ್ವಕಪ್ನ ನಂತರ ಟಿ20 ನಾಯಕತ್ವದಿಂದ ಕೆಳಗಿಳಿದು ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ನಾಯಕನಾಗಿ ಮುಂದುವರಿಯುತ್ತೇನೆ ಎಂದು ವಿರಾಟ್ ಕೊಹ್ಲಿ ಘೋಷಿಸಿದ್ದರು.
ಆದರೆ ವೈಟ್ಬಾಲ್ ಕ್ರಿಕೆಟ್ನ ಎರಡು ಮಾದರಿಗೆ ಪ್ರತ್ಯೇಕ ಇಬ್ಬರು ನಾಯಕರನ್ನು ಹೊಂದುವುದು ಸೂಕ್ತವಲ್ಲ ಎಂಬ ಚರ್ಚೆಗಳು ಮತ್ತೆ ಆರಂಭವಾದಾಗ ರೋಹಿತ್ ಶರ್ಮಾ ಏಕದಿನ ಮಾದರಿಗೂ ನಾಯಕನಾಗಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಬಿಸಿಸಿಐ ಕೂಡ ಇದೇ ರೀತಿ ಯೋಚನೆ ಮಾಡಿದ್ದ ಕಾರಣದಿಂದಾಗಿ ವಿರಾಟ್ ಕೊಹ್ಲಿಗೆ ಏಕದಿನ ಮಾದರಿಯ ನಾಯಕತ್ವದಿಂದಲೂ ತೊರೆಯುವಂತೆ ಕೇಳಿಕೊಂಡಿತ್ತು ಎನ್ನಲಾಗಿದೆ. ಆದರೆ ವಿರಾಟ್ ಕೊಹ್ಲಿ ಅದನ್ನು ಒಪ್ಪದಿದ್ದಾಗ ನಾಯಕತ್ವದಿಮದ ವಿರಾಟ್ ಕೊಹ್ಲಿಯನ್ನು ಕಿತ್ತು ರೋಹಿತ್ ಶರ್ಮಾ ಅವರಿಗೆ ಆ ಜವಾಬ್ಧಾರಿ ನೀಡಲಾಗಿದೆ ಎಂದು ವರದಿಯಾಗಿದೆ.
ಈ ವಿಚಾರ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ, ಅದರಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಹೀಗಾಗಿ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ. ನೇರವಾಗಿ ಅಭಿಮಾನಿಗಳು ಬಿಸಿಸಿಐ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.