ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮ್ಯಾಚ್ ರೆಫ್ರಿ ವೆಂಗಲಿಲ್ ನಾರಾಯಣ್ ಕುಟ್ಟಿ ಅವರಿಂದ ಖಂಡನೆಗೆ ಒಳಗಾಗಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಇದಕ್ಕೆ ಕಾರಣವಾಗಿದೆ.
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಮೇಲೆ ಐಪಿಎಲ್ ನೀತಿ ಸಂಹಿತೆಯ ಷರತ್ತಿನ 2.2 ನಿಯಮದ ಮೊದಲ ಹಂತವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವಿದೆ. ಇದು ಕ್ರಿಕೆಟ್ ಉಪಕರಣ, ಉಡುಪು, ಮೈದಾನದ ಉಪಕರಣಗಳು ಅಥವಾ ಫಿಕ್ಚರ್ಸ್ಗಳಿಗೆ ಹಾನಿ ಮಾಡುವುದನ್ನು ಒಳಗೊಂಡಿದೆ.
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 33 ರನ್ಗಳಿಸಿ ಜೇಸನ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ಗೆ ಸಾಗಿದರು. ಆದರೆ ವಿಕೆಟ್ ಕಳೆದುಕೊಂಡ ಹತಾಶೆಯಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಲೈನ್ ಪಕ್ಕ ಜಾಹೀರಾತು ಫಲಕಕ್ಕೆ ಹಾಗೂ ಡಗ್ಔಟ್ನಲ್ಲಿದ್ದ ಚೇರ್ಗೆ ಬ್ಯಾಟ್ನಿಂದ ಬಾರಿಸಿದ್ದರು. ಇದು ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದೇ ರೀತಿಯ ವರ್ತನೆಯನ್ನು 2016ರಲ್ಲಿ ಗೌತಮ್ ಗಂಭೀರ್ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವ್ಯಕ್ತಡಿಸಿದ್ದರು. ಆ ಸಂದರ್ಭದಲ್ಲಿ ಗಂಭೀರ್ಗೆ ಪಂದ್ಯದ ಸಂಭಾವನೆಯ ಶೇಕಡಾ 15ರಷ್ಟು ದಂಡವನ್ನು ವಿಧಿಸಲಾಗಿತ್ತು. ಆದರೆ ವಿರಾಟ್ ಕೊಹ್ಲಿಗೆ ರೆಫ್ರಿ ಯಾವುದೇ ದಂಡವನ್ನು ವಿಧಿಸದೆ ಖಂಡಿಸಿದ್ದಾರೆ. ಮೊದಲ ಹಂತದ ಉಲ್ಲಂಘನೆಗೆ ರೆಫ್ರಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ.