
ಬೆಂಗಳೂರು, ಮಾರ್ಚ್ 13: ದೇಶಿ ಟಿ20 ಟೂರ್ನಮೆಂಟ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಅಂತಿಮ ಹಣಾಹಣಿಯಲ್ಲಿ ಸೆಣಸಲಿವೆ. ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ಕರ್ನಾಟಕವು, ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.
ಇದೇ ವೇಳೆ ಕರ್ನಾಟಕದ ಮಹಿಳೆಯರ ತಂಡ ಕೂಡಾ ದೇಶಿ ಟಿ20 ಲೀಗ್ನ ಫೈನಲ್ಗೇರಿದೆ. ಪಂಜಾಬ್ ವಿರುದ್ಧ ಸೆಣೆಸಲು ಸಜ್ಜಾಗಿದೆ. ಕೆ. ರಕ್ಷಿತಾ ಸಾರಥ್ಯದ ಕರ್ನಾಟಕ ತಂಡವು ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿ ಸೂಪರ್ ಲೀಗ್ ಹಂತ ತಲುಪಿತ್ತು. ಸೂಪರ್ ಲೀಗ್ ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 1ರಲ್ಲಿ ಸೋತು 12 ಅಂಕದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಫೈನಲ್ ತಲುಪಿದೆ.
ಅಂತಿಮ ಸೂಪರ್ ಲೀಗ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ವಿದರ್ಭ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ಕರ್ನಾಟಕ ತಂಡವು, 13 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು. ಗುರುವಾರದಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮನೀಶ್ ಪಾಂಡೆ ಪಡೆ ವಿರುದ್ಧ ಮಹಾರಾಷ್ಟ್ರ ಸೆಣಸಲಿದೆ.
ಕನ್ನಡಿಗ ಗಣೇಶ್ ಸತೀಶ್ ಸಾರಥ್ಯದ ವಿದರ್ಭ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ಕಳೆದುಕೊಂಡು 138 ರನ್ಗಳಿಸಿತು. ಪ್ರತಿಯಾಗಿ ಕರ್ನಾಟಕ ತಂಡ 19.2 ಓವರ್ಗಳಲ್ಲಿ 4 ವಿಕೆಟ್ಗೆ 140 ರನ್ಗಳಿಸಿ ಜಯದ ನಗೆ ಬೀರಿತು. ನಾಯಕ ಮನೀಷ್ ಪಾಂಡೆ (49*ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಸೂಪರ್ ಲೀಗ್ ಹಂತದಲ್ಲಿ ಸತತ 4ನೇ ಜಯ ಹಾಗೂ ಟೂರ್ನಿಯಲ್ಲಿ ಸತತ 11ನೇ ಜಯ ದಾಖಲಿಸಿದ ಕರ್ನಾಟಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.
ಇನ್ನೊಂದೆಡೆ ಸತತ ನಾಲ್ಕನೇ ಜಯ ದಾಖಲಿಸಿದ ಮಹಾರಾಷ್ಟ್ರ ಎ ಗುಂಪಿನಿಂದ ಪ್ರಶಸ್ತಿ ಸುತ್ತಿಗೇರಿತು. ಅಂತಿಮ ಸೂಪರ್ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ 21 ರನ್ಗಳಿಂದ ರೈಲ್ವೇಸ್ ತಂಡವನ್ನು ಮಣಿಸಿತು.