ಟಿ20 ವಿಶ್ವಕಪ್: ಕೊಹ್ಲಿ, ರಾಹುಲ್ ಅಲ್ಲ ಟ್ರೋಫಿ ಗೆಲ್ಲಲು ಈತನೇ ಪ್ರಮುಖ ಅಸ್ತ್ರ ಎಂದ ಗಂಭೀರ್!

ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ಮತ್ತು ಸುದ್ದಿಗಳಿಗೆ ಕಾರಣವಾಗಿದ್ದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇತ್ತೀಚೆಗಷ್ಟೇ ಯುಎಇಯಲ್ಲಿ ಮುಕ್ತಾಯವಾಗಿದ್ದು ಇದೀಗ ಇದೇ ನೆಲದಲ್ಲಿ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಚಾಲನೆ ದೊರೆತಿದೆ. ಕಳೆದ ಭಾನುವಾರದಿಂದ ಆರಂಭವಾಗಿರುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವಿವಿಧ ತಂಡಗಳು ಭಾಗವಹಿಸುತ್ತಿದ್ದು, ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 23ರ ಶನಿವಾರದಿಂದ ಆರಂಭಗೊಳ್ಳಲಿವೆ.
ಇನ್ನು ಟೀಮ್ ಇಂಡಿಯಾ ಪ್ರಸ್ತುತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 24ರ ಭಾನುವಾರದಂದು ಆಡಲಿದ್ದು ಈ ಪಂದ್ಯದಲ್ಲಿ ತನ್ನ ಬದ್ಧ ಎದುರಾಳಿಯಾದ ಪಾಕಿಸ್ತಾನದ ವಿರುದ್ಧ ಸೆಣಸಾಟ ನಡೆಸಲಿದೆ. ಈ ಎರಡೂ ತಂಡಗಳು ಕೂಡ ಸಾಮಾನ್ಯ ಪಂದ್ಯಗಳಲ್ಲಿ ಮುಖಾಮುಖಿಯಾದರೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತವೆ. ಹೀಗಿರುವಾಗ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ ಎಂದರೆ ಆ ಚರ್ಚೆಗಳು ಮತ್ತಷ್ಟು ದೊಡ್ಡ ಮಟ್ಟದಲ್ಲಿ ನಡೆಯುವುದು ಸಾಮಾನ್ಯ. ಹೀಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಪಂದ್ಯದ ಕುರಿತು ಸಾಕಷ್ಟು ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಜಯ ಸಾಧಿಸಬೇಕೆಂದರೆ ಯಾವ ಯಾವ ಆಟಗಾರರು ತಂಡದಲ್ಲಿರಬೇಕು ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಅಷ್ಟೇ ಅಲ್ಲದೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಗೆಲ್ಲಲಿರುವ ತಂಡಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಯಾವ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಟೀಮ್ ಇಂಡಿಯಾಗೆ ಆಸರೆಯಾಗಲಿದ್ದಾರೆ ಎಂಬುದರ ಕುರಿತು ಹಲವಾರು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ ಮಾತನಾಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಟೂರ್ನಿಯಲ್ಲಿ ಈತನೇ ಭಾರತ ತಂಡದ ಪ್ರಮುಖ ಅಸ್ತ್ರ
"ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವರುಣ್ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಿಂಚಲಿದ್ದಾರೆ. ಅದರಲ್ಲಿಯೂ ಟೂರ್ನಿಯಲ್ಲಿ ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡಬಲ್ಲ ಅಸ್ತ್ರವೆಂದರೆ ಅದು ಜಸ್ಪ್ರೀತ್ ಬೂಮ್ರಾ ಮಾತ್ರ" ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
"ಈ ಬಾರಿಯ ಟೂರ್ನಿಯಲ್ಲಿ ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ ಮಿಂಚುವುದರಲ್ಲಿ ಯಾವುದೇ ಅನುಮಾನವಿಲ್ಲ, ಆತ ಅಗ್ರ ಫಾರ್ಮ್ ಹೊಂದಿದ್ದು ಖಂಡಿತವಾಗಿಯೂ ಒಳ್ಳೆಯ ಪ್ರದರ್ಶನವನ್ನು ನೀಡಲಿದ್ದಾರೆ. ಆದರೆ ನನ್ನ ಪ್ರಕಾರ ಬೌಲಿಂಗ್ನಲ್ಲಿ ಭಾರತ ತಂಡದ ಪರ ಅಸ್ತ್ರವಾಗಿ ನಿಲ್ಲುವ ಏಕೈಕ ಬೌಲರ್ ಎಂದರೆ ಅದು ಜಸ್ಪ್ರೀತ್ ಬೂಮ್ರಾ ಮಾತ್ರ" ಎಂದು ಗೌತಮ್ ಗಂಭೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರೋಫಿ ಗೆಲ್ಲುವತ್ತ ವಿರಾಟ್ ಕೊಹ್ಲಿ ಕಣ್ಣಿಟ್ಟಿದ್ದಾರೆ
ವರುಣ್ ಚಕ್ರವರ್ತಿ ಮತ್ತು ಜಸ್ಪ್ರೀತ್ ಬುಮ್ರಾ ಕುರಿತು ವಿಶೇಷವಾಗಿ ಮಾತನಾಡಿದ ಗೌತಮ್ ಗಂಭೀರ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುರಿತಾಗಿಯೂ ತಮ್ಮ ಪಾಲಿನ ಅಭಿಪ್ರಾಯವನ್ನು ತಿಳಿಸಿದ್ದಾರೆ. "ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಟ್ರೋಫಿ ಗೆಲ್ಲುವತ್ತ ಕಣ್ಣಿಟ್ಟಿದ್ದಾರೆ. ಕೊಹ್ಲಿ ಮಾತ್ರವಲ್ಲ 14 ವರ್ಷಗಳಿಂದ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ ಗೆಲ್ಲದೇ ಇರುವ ಕಾರಣ ಇಡೀ ತಂಡ ಈ ಬಾರಿಯ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಗುರಿಯನ್ನು ಹೊಂದಿದೆ" ಎಂದು ಗಂಭೀರ್ ಹೇಳಿಕೆ ನೀಡಿದ್ದಾರೆ.

ಎಂಎಸ್ ಧೋನಿ ಮೆಂಟರ್ ಆಗಿರುವುದು ಟೀಮ್ ಇಂಡಿಯಾಕ್ಕೆ ಪ್ಲಸ್ ಪಾಯಿಂಟ್
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸಲುವಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ. ಈ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಯುವ ಆಟಗಾರರಿಗೆ ಎಂಎಸ್ ಧೋನಿ ಅವರ ಮಾರ್ಗದರ್ಶನ ನೆರವಿಗೆ ಬರಲಿದೆ, ಹಲವಾರು ವಿಶ್ವಕಪ್ ಟೂರ್ನಿಗಳಲ್ಲಿ ಆಡಿರುವ ಅನುಭವವನ್ನು ಹೊಂದಿರುವ ಎಂ ಎಸ್ ಧೋನಿ ತಮ್ಮ ಅನುಭವಗಳನ್ನು ಆ ಯುವ ಆಟಗಾರರ ಜೊತೆ ಹಂಚಿಕೊಳ್ಳುವುದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications