ಸದ್ಯ ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಪ್ರಭಾವ ಜೋರಾಗಿದ್ದು ದೇಶದಾದ್ಯಂತ ಅತಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊರೊನಾ ಮಹಾಮಾರಿ ತನ್ನ ರೌದ್ರಾವತಾರವನ್ನು ದೇಶದಲ್ಲಿ ತೋರುತ್ತಿದ್ದರು ಸಹ ಐಪಿಎಲ್ ಟೂರ್ನಿಯನ್ನು ಯಾವುದೇ ಕಾರಣಕ್ಕೂ ಮೊಟಕುಗೊಳಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಕೊರೊನಾವೈರಸ್ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದಂತೆ ಇದೇ ವರ್ಷದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಭಾರತದಲ್ಲಿ ನಡೆಸಬೇಕೆಂದುಕೊಂಡಿರುವ ಟಿ ಟ್ವೆಂಟಿ ವಿಶ್ವಕಪ್ ಕುರಿತು ಚರ್ಚೆ ಮತ್ತು ಟೀಕೆಗಳು ಆರಂಭವಾಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಾಗಲೇ ಸಾಕಷ್ಟು ತೊಂದರೆಯನ್ನುಂಟು ಮಾಡಿರುವ ಕೊರೊನಾವೈರಸ್ ಮುಂಬರುವ ಟಿ ಟ್ವೆಂಟಿ ವಿಶ್ವಕಪ್ಗೂ ಸಹ ಇದೇ ರೀತಿಯ ಕಿರಿಕಿರಿಯನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಹೀಗಾಗಿ ಭಾರತದಲ್ಲಿ ಯಾವುದೇ ಕಾರಣಕ್ಕೂ ಟಿ ಟ್ವೆಂಟಿ ವಿಶ್ವಕಪ್ ನಡೆಸಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಕೂಗು ಕೇಳಿ ಬಂದಿತ್ತು. ಇದೀಗ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಇಯಾನ್ ಚಾಪೆಲ್ ಭಾರತದಲ್ಲಿ ಟಿ ಟ್ವೆಂಟಿ ವಿಶ್ವಕಪ್ ನಡೆಸುವುದರ ಕುರಿತು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾವೈರಸ್ ಭೀಕರತೆ ಹೆಚ್ಚಾಗುತ್ತಿದ್ದು ಭಾರತದಲ್ಲಿ ಟಿ ಟ್ವೆಂಟಿ ವಿಶ್ವಕಪ್ ನಡೆಸುವುದು ಸೂಕ್ತವಲ್ಲ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. ಮುಂಜಾಗ್ರತೆ ವಹಿಸುವುದರ ಮೂಲಕ ಏಷ್ಯಾ ದೇಶಗಳಿಂದ ಬೇರೆಡೆಗೆ ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸುವುದು ಒಂದು ಸಾಮಾನ್ಯ ಜ್ಞಾನವಾಗಿದೆ ಎಂದು ಚಾಪೆಲ್ ತಿಳಿಸಿದ್ದಾರೆ. ಐಸಿಸಿ ಟಿ ಟ್ವೆಂಟಿ ವಿಶ್ವಕಪ್ನ್ನು ಭಾರತದಲ್ಲಿಯೇ ನಡೆಸುತ್ತಾ ಅಥವಾ ಈ ಹಿಂದೆಯೇ ನಿರ್ಧರಿಸಿರುವಂತೆ ಎರಡನೇ ಆಯ್ಕೆ ಆಗಿರುವ ಯುಎಇಗೆ ಟಿ ಟ್ವೆಂಟಿ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗುತ್ತಾ ಎಂಬುದನ್ನು ಕಾದು ನೋಡಬೇಕು