ನಾಟಿಂಗ್ಹ್ಯಾಮ್, ಆಗಸ್ಟ್ 9: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗೆಲುವಿನ ಸನಿಹಕ್ಕೆ ಬಂದಿದ್ದ ಭಾರತೀಯ ತಂಡಕ್ಕೆ ಮಳೆ ಆಘಾತವನ್ನು ನೀಡಿತು. ಹೀಗಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಈ ಫಲಿತಾಂಶದಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದು ಪಂದ್ಯ ಡ್ರಾಗೊಂಡ ಬಳಿಕ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ನಾಲ್ಕು ದಿನಗಳಲ್ಲಿಯೂ ಸಾಕಷ್ಟು ಮಳೆ ಕಾಟವನ್ನು ನೀಡಿತ್ತು. ಹಾಗಿದ್ದರೂ ಅಂತಿಮ ದಿನ ಪಂದ್ಯ ಅತ್ಯಂತ ಕುತೂಹಲದ ಘಟ್ಟಕ್ಕೆ ತಲುಪಿತ್ತು. ಕೊನೆಯ ದಿನದಲ್ಲಿ ಭಾರತ ತಂಡದ ಗೆಲುವಿಗಾಗಿ 157 ರನ್ಗಳ ಅಗತ್ಯವಿದ್ದರೆ ಇಂಗ್ಲೆಂಡ್ ಗೆಲುವಿಗೆ 9 ವಿಕೆಟ್ಗಳನ್ನು ಕಬಳಿಸಬೇಕಾಗಿತ್ತು. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಮಳೆಯಿಂದಾಗಿ ಎಲ್ಲವೂ ತಲೆಕೆಳಗಾಗಿತ್ತು. ಅಂತಿಮ ದಿನ ಒಂದೂ ಎಸೆತ ಕಾಣಲು ಸಾಧ್ಯವಾಗದ ಕಾರಣ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಈ ಫಲಿತಾಂಶದ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು ತಮ್ಮ ತಂಡಕ್ಕೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಪಡೆದುಕೊಳ್ಳಲು ಅತ್ಯುತ್ತಮ ಅವಕಾಶವಿತ್ತು ಎಂದಿದ್ದಾರೆ. ಆದರೆ ಭಾರತ ತಂಡ ಪಂದ್ಯದುಕ್ಕೂ ಉತ್ತಮ ಪ್ರದರ್ಶನ ನೀಡಿದ್ದಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಿದ್ದಕ್ಕೆ ಸಂತಸವಾಗುತ್ತದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.
"ಇದು ನಾಚಿಕೆಗೇಡಿನ ಸಂಗತಿ. ನಾವು ಮೂರು ಮತ್ತು ನಾಲ್ಕನೇ ದಿನದಾಟಕ್ಕೆ ಮಳೆ ಅಡ್ಡಿಯಾಗುವುದನ್ನು ನಿರೀಕ್ಷಿಸಿದ್ದೆವು. ಆದರೆ ಮಳೆ ಐದನೇ ದಿನವನ್ನು ಆಯ್ಕೆ ಮಾಡಿಕೊಂಡಿತ್ತು. ನಾವು ಪಂದ್ಯದಲ್ಲಿ ಎದುರಾಳಿ ತಂಡವನ್ನು ಆಘಾತಕ್ಕೆ ಒಳಪಡಿಸುವ ಮೂಲಕ ಉತ್ತಮ ಸ್ಥಿತಿಯಲ್ಲಿದ್ದೇವೆ ಎಂಬ ಭಾವಿಸಿದ್ದೇವೆ. ನಿಜವಾಗಿಯೂ ನಾವು ಅದನ್ನೇ ಮಾಡಲು ಬಯಸಿದ್ದೆವು. ನಾವು ಬಲಿಷ್ಠವಾಗಿ ಆರಂಭ ಮಾಡಲು ಬಯಸಿದ್ದೇವೆ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
"ಐದನೇ ದಿನಕ್ಕೆ ಕಾಲಿಟ್ಟಾದ ನಾವು ಮುಂಚೂಣಿಯಲ್ಲಿದ್ದು ಗೆಲುವಿನ ಅವಕಾಶವನ್ನು ಹೊಂದಿದ್ದೆವು. ನಮಗೆ ಒಂದು ಅತ್ಯುತ್ತಮ ಜೊತೆಯಾಟ ಬೇಕಿತ್ತು. ಅದನ್ನು ಹೊರತುಪಡಿಸಿದರೆ 150 ರನ್ಗಳ ಗುರಿ ಮುಂದಿದ್ದಾಗ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ನಾವು ಪಂದ್ಯದಲ್ಲಿ ಮೇಲುಗೈ ಸಾಧಿಸಿರುವುದು ನಮಗೆ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದೆವು. ನಾವು ಐದನೇ ದಿನದಾಟವನ್ನು ಪೂರ್ಣವಾಗಿ ಆಡಲು ಸಾಧ್ಯವಾಗದಕ್ಕೆ ಬೇಸರವಾಗುತ್ತದೆ. ನಾವು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಬ್ಯಾಟಿಂಗ್ನಲ್ಲಿಯೂ ನಮ್ಮ ಪ್ರದರ್ಶನ ಉತ್ತಮವಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ ಮುನ್ನಡೆ ಪಂದ್ಯದುದ್ದಕ್ಕೂ ನಾವು ಮೇಲುಗೈ ಸಾಧಿಸಲು ಸಾಧ್ಯವಾಯಿತು" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.