
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದ್ದು ಆಗಸ್ಟ್ 18ರಿಂದ 22ರ ವರೆಗೆ ಈ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜನೆಯಾಗಲಿದೆ. ಈ ಸರಣಿಗೆ ಎರಡೂ ತಂಡಗಳ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು ಭಾರತ ತಂಡದ ಸದಸ್ಯರು ಈಗಾಗಲೇ ಜಿಂಬಾಬ್ವೆಗೆ ತೆರಳಿ ಅಭ್ಯಾಸ ಆರಂಭಿಸಿದ್ದಾರೆ. ಕೆಎಲ್ ರಾಹುಲ್ ಈ ಸರಣಿಯ ಮೂಲಕ ತಂಡಕ್ಕೆ ಮರಳಿದ್ದು ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಈ ಸರಣಿಗೆ ಅಚ್ಚರಿಯೆಂಬಂತೆ ಯುವ ಆಲ್ರೌಂಡರ್ ಶಹಬಾಜ್ ಅಹ್ಮದ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಲ್ರೌಂಡರ್ ವಾಶಿಂಗ್ಟನ್ ಸುಂದರ್ ಗಾಯಗೊಂಡಿರುವ ಕಾರಣ ಬದಲಿ ಆಟಗಾರನಾಗಿ ಶಹ್ಮಬಾಜ್ ಅಹ್ಮದ್ ಅವರನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಏಕದಿನ ತಂಡದಲ್ಲಿ ಆರ್ಸಿಬಿ ತಂಡದ ಆಲ್ರೌಂಡರ್ ಸ್ಥಾನ ಪಡೆದುಕೊಂಡಿದ್ದಾರೆ.
ಆರಂಭದಲ್ಲಿ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ವಾಶಿಂಗ್ಟನ್ ಸುಂದರ್ ಭುಜದ ನೋವಿಗೆ ಒಳಗಾದ ಕಾರಣ ಸರಣಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಅವರ ಬದಲಿಗೆ ಶಹಬಾಜ್ ಅವರನ್ನು ಆಗಸ್ಟ್ 16ರಂದು ಹೆಸರಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಯುವ ಕ್ರಿಕೆಟಿಗನಿಗೆ ಇದು ಭಾರತ ತಂಡದಿಂದ ಚೊಚ್ಚಲ ಕರೆಯೆಂಬುದು ವಿಶೇಷ. ಅವರು ಎಡಗೈ ಸ್ಪಿನ್ನರ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ.
ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರವಾಗಿ ಆಡುತ್ತಿರುವ ಶಹಬಾಜ್ ಅಹ್ಮದ್ 2020ರಲ್ಲಿ ಮೊದಲ ಬಾರಿಗೆ ಐಪಿಎಲ್ನಲ್ಲಿ ಅವಕಾಶವನ್ನು ಪಡೆದುಕೊಂಡರು. ಇದಕ್ಕೂ ಮುನ್ನ 2018ರಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಪ್ರಥಮ ಬಾರಿಗೆ ಅವಕಾಶವನ್ನು ಪಡೆದುಕೊಂಡಿದ್ದರು. ಅವರು ಈಗ 18 ಪ್ರಥಮ ದರ್ಜೆ ಪಂದ್ಯಗಳು, 26 ಲಿಸ್ಟ್-ಎ ಪಂದ್ಯಗಳು ಮತ್ತು 56 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಶಹಬಾಜ್ ಅಹ್ಮದ್ ಐಪಿಎಲ್ನಲ್ಲಿ 29 ಪಂದ್ಯಗಳನ್ನು ಆಡಿದ್ದು ಇದರಲ್ಲಿ 279 ರನ್ ಗಳಿಸಿದ್ದಾರೆ ಜೊತೆಗೆ 13 ವಿಕೆಟ್ಗಳನ್ನು ಕೂಡ ಸಂಪಾದಿಸಿದ್ದಾರೆ. ಇನ್ನು ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಪ್ರಥಮ 41.64 ರ ಸರಾಸರಿಯಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಲಿಸ್ಟ್-ಎ ಕ್ರಿಕೆಟ್ನಲ್ಲಿ 47.28 ರ ಸರಾಸರಿ ಹಾಗೂ 92.45 ರ ಸ್ಟ್ರೈಕ್ ರೇಟ್ನಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2022ರ ರಣಜಿ ಟ್ರೋಫಿಯ ಸೆಮಿಫೈನಲ್ನಲ್ಲಿ ಮಧ್ಯ ಪೊ್ರದೇಶದ ವಿರುದ್ಧ ಅವರು ಬಂಗಾಳದ ಕೊನೆಯ ಪಂದ್ಯದಲ್ಲಿ 138 ರನ್ಗಳನ್ನು ಗಳಿಸಿದ್ದು ಎಂಟು ವಿಕೆಟ್ಗಳನ್ನು ಪಡೆದಿದ್ದರು.
ಯುವ ಆಲ್ರೌಂಡರ್ ಇತ್ತೀಚೆಗೆ ನೀಡುತ್ತಿರುವ ಸ್ಥಿರ ಪ್ರದರ್ಶನದಿಂದಾಗಿ ಭಾರತ ರಾಷ್ಟ್ರೀಯ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.