
ಶುಕ್ರವಾರ ( ಆಗಸ್ಟ್ 13 ) ಭಾರತೀಯ ಕ್ರಿಕೆಟ್ಗೆ 28 ವರ್ಷ ಹರೆಯದ ಉನ್ಮುಕ್ತ್ ಚಂದ್ ನಿವೃತ್ತಿಯನ್ನು ಘೋಷಿಸುವುದರ ಮೂಲಕ ಕ್ರಿಕೆಟ್ ಜಗತ್ತು ಬೇಸರಕ್ಕೊಳಗಾಗುವ ಇಂತಹ ನಿರ್ಣಯವನ್ನು ಉನ್ಮುಕ್ತ್ ಚಂದ್ ತೆಗೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ಯುವ ಪ್ರತಿಭೆಗಳಲ್ಲಿ ಉನ್ಮುಕ್ತ್ ಚಂದ್ ಕೂಡ ಓರ್ವರು. ಅಂಡರ್ 19 ತಂಡದ ನಾಯಕನಾಗಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸಿದ್ದ ಉನ್ಮುಕ್ತ್ ಚಂದ್ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 111 ರನ್ ಬಾರಿಸುವ ಮೂಲಕ ಟ್ರೋಫಿ ಗೆಲ್ಲಲು ಪ್ರಮುಖ ಕಾರಣಕರ್ತರಾಗಿದ್ದರು. ಹೀಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ತೋರಿದ ಉನ್ಮುಕ್ತ್ ಚಂದ್ ಶೀಘ್ರದಲ್ಲಿಯೇ ಟೀಮ್ ಇಂಡಿಯಾಗೆ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಹಲವಾರು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್ ಚಂದ್ ಯಾವುದೇ ಅವಕಾಶಗಳಿಲ್ಲದೆ ವರ್ಷಾನುಗಟ್ಟಲೆ ಕಾಯ್ದು ಬೇಸತ್ತ ನಂತರ ನಿವೃತ್ತಿ ಘೋಷಿಸುವ ತೀರ್ಮಾನವನ್ನು ಕೈಗೆತ್ತಿಕೊಂಡರು.
ಭಾರತೀಯ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ ಉನ್ಮುಕ್ತ್ ಚಂದ್ 3 ವರ್ಷಗಳ ಕಾಲ ಅಮೇರಿಕಾದ ಮೈನರ್ ಲೀಗ್ ಕ್ರಿಕೆಟ್ ಒಪ್ಪಂದವನ್ನು ಮಾಡಿಕೊಂಡಿದ್ದು ಅಮೇರಿಕಾ ಕ್ರಿಕೆಟ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯ ತನಗೆ 28 ವರ್ಷ ವಯಸ್ಸಾಗಿದ್ದು ಇನ್ನೂ 10 ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಮತ್ತು ಅದನ್ನು ಕ್ರಿಕೆಟ್ ಆಡಲೆಂದು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ ಎಂದು ಉನ್ಮುಕ್ತ್ ಚಂದ್ ವಿಶ್ವಾಸ ವ್ಯಕ್ತಪಡಿಸಿದ್ದರು.
ಹೀಗೆ ಅಮೇರಿಕಾದ ಮೈನರ್ ಕ್ರಿಕೆಟ್ ಲೀಗ್ಗೆ ಪ್ರವೇಶಿಸಿರುವ ಉನ್ಮುಕ್ತ್ ಚಂದ್ ಮೊದಲನೇ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಅಮೇರಿಕಾದ ಮೈನರ್ ಕ್ರಿಕೆಟ್ ಲೀಗ್ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಉನ್ಮುಕ್ತ್ ಚಂದ್ ಮೂರು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೆ ಶೂನ್ಯ ಸುತ್ತುವ ಮೂಲಕ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಉನ್ಮುಕ್ತ್ ಚಂದ್ ಇದೀಗ ಟೀಕೆಗಳಿಗೆ ಗುರಿಯಾಗಿದ್ದಾರೆ.
ಅಂತಾರಾಷ್ಟ್ರೀಯ ತಂಡದ ಪರ ಆಡದೇ ಇರುವ ನೋವಿದೆ
ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಉನ್ಮುಕ್ತ್ ಚಂದ್ ತಾವು ನಿವೃತ್ತಿ ಘೋಷಿಸಿದ್ದರ ಹಿಂದಿನ ಕಾರಣವನ್ನು ಸಹ ತಿಳಿಸಿದ್ದಾರೆ. ಹೀಗೆ ತಮ್ಮ ನಿವೃತ್ತಿ ಕುರಿತು ಪ್ರೇಕ್ಷಕರ ಜತೆ ಹಂಚಿಕೊಂಡಿರುವ ಉನ್ಮುಕ್ತ್ ಚಂದ್ 'ಯಾವಾಗಲೂ ಅಂತಾರಾಷ್ಟ್ರೀಯ ತಂಡದ ಪರ ಆಡಬೇಕೆಂದು ಕನಸು ಕಾಣುವ ನನ್ನಂತಹ ಕ್ರಿಕೆಟಿಗನಿಗೆ ಇಂತಹ ಪರಿಸ್ಥಿತಿ ಎದುರಿಸುವುದು ತೀರಾ ಕಷ್ಟಕರ ಎಂದು ಉನ್ಮುಕ್ತ್ ಚಂದ್ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಉತ್ತಮ ಪ್ರದರ್ಶನ ತೋರಿದರೂ ಸಹ ಅಂತಾರಾಷ್ಟ್ರೀಯ ತಂಡದ ಪರ ಕ್ರಿಕೆಟ್ ಆಡುವ ಅವಕಾಶ ನನಗೆ ಲಭಿಸಿಲ್ಲ ಎನ್ನುವ ನೋವಿದೆ ಎಂದು ಉನ್ಮುಕ್ತ್ ಚಂದ್ ಭಾವುಕರಾಗಿದ್ದಾರೆ.