ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ತಲುಪುವುದರಲ್ಲಿ ವಿಫಲವಾಗಿ ಸೂಪರ್ 12 ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಿ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆಲ್ಲಲಿರುವ ತಂಡಗಳಲ್ಲೊಂದು ಎನಿಸಿಕೊಂಡಿತ್ತು.
ಆದರೆ ಟೂರ್ನಿ ಆರಂಭವಾದ ನಂತರ ಟೀಮ್ ಇಂಡಿಯಾ ತನ್ನ ಮೊದಲೆರಡು ಪಂದ್ಯಗಳಲ್ಲಿ ಸತತವಾಗಿ ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡಿತು. ಹೀಗೆ ಟೂರ್ನಿಯಲ್ಲಿನ ತನ್ನ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ನಂತರ ನಡೆದ 3 ಪಂದ್ಯಗಳಲ್ಲಿ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಹೀಗೆ ಹ್ಯಾಟ್ರಿಕ್ ಗೆಲುವು ಕಂಡರೂ ಸಹ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳುವಷ್ಟು ಅಂಕಗಳನ್ನು ಸಂಪಾದಿಸದ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬಿದ್ದಿದೆ. ನವೆಂಬರ್ 8ರಂದು ನಮೀಬಿಯಾ ವಿರುದ್ಧ ನಡೆದ ಪಂದ್ಯವೇ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಭಾರತದ ಪಾಲಿನ ಅಂತಿಮ ಪಂದ್ಯವಾಗಿತ್ತು. ಈ ಪಂದ್ಯ ಟೀಮ್ ಇಂಡಿಯಾಗೆ ಟೂರ್ನಿಯಲ್ಲಿ ಅಂತಿಮ ಪಂದ್ಯವಾದದ್ದು ಮಾತ್ರವಲ್ಲದೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡವನ್ನು ನಾಯಕನಾಗಿ ಮುನ್ನಡೆಸಿ ಅಂತಿಮ ಪಂದ್ಯವೂ ಕೂಡ ಆಗಿತ್ತು ಹಾಗೂ 2017ರಿಂದ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ರವಿಶಾಸ್ತ್ರಿ ಅವರ ಅಂತಿಮ ಪಂದ್ಯವೂ ಕೂಡ ಇದಾಗಿತ್ತು. ಇನ್ನು ಈ ಪಂದ್ಯ ಕೇವಲ ರವಿಶಾಸ್ತ್ರಿಗೆ ಮಾತ್ರವಲ್ಲದೆ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರಿಗೂ ಕೂಡ ಅಂತಿಮ ಪಂದ್ಯವಾಗಿತ್ತು.
ಯಾರೇ ಬಂದರೂ ವಿರಾಟ್ ಕೊಹ್ಲಿ ಸ್ಥಾನ ತುಂಬಲಾಗುವುದಿಲ್ಲ: ವಿರೇಂದ್ರ ಸೆಹ್ವಾಗ್
ಹೀಗೆ ತಂಡದ ಘಟಾನುಘಟಿ ಆಟಗಾರ ಮತ್ತು ತರಬೇತುದಾರರೇ ತಮ್ಮ ಸ್ಥಾನದ ಅಂತಿಮ ಪಂದ್ಯವನ್ನು ಒಂದೇ ಪಂದ್ಯದ ಮೂಲಕ ಆಡಿದ್ದು ತಂಡದ ಇತರೆ ಆಟಗಾರರ ಮುಖದಲ್ಲಿ ಬೇಸರದ ಛಾಯೆ ಆವರಿಸುವಂತೆ ಮಾಡಿತ್ತು. ನೆಚ್ಚಿನ ನಾಯಕ ಮತ್ತು ತರಬೇತುದಾರರ ಜೊತೆ ಅಂತಿಮ ಪಂದ್ಯ ಆಡುತ್ತಿದ್ದ ನೋವು ಇತರ ಆಟಗಾರರಲ್ಲಿತ್ತು. ಹೀಗೆ ನಮೀಬಿಯಾ ವಿರುದ್ಧದ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ಆಟಗಾರರಿಗೆ ರವಿ ಶಾಸ್ತ್ರಿ ತಮ್ಮ ಅಂತಿಮ ಭಾಷಣವನ್ನು ಕೂಡ ಮಾಡಿದರು. ಈ ವೇಳೆ ಟೀಮ್ ಇಂಡಿಯಾ ತನ್ನ ತರಬೇತಿಯಲ್ಲಿ ಮಾಡಿದ ಸಾಧನೆಗಳನ್ನು ಮೆಲುಕು ಹಾಕಿದ ರವಿಶಾಸ್ತ್ರಿ ಆಟಗಾರರಿಗೆ ಮತ್ತೊಮ್ಮೆ ಹುರಿದುಂಬಿಸಿದರು.
BGT 2018, BGT 2020, ENG test series 2021, T20I series victories in SENA.
— Soham (@Soham718) November 8, 2021
Revolution of Indian fast bowling, arrival of wrist spinners, 5-bowler theory in tests.
END OF AN ERA under Ravi Shastri. pic.twitter.com/Hr1Msw3hQG
ಇನ್ನು ರವಿಶಾಸ್ತ್ರಿಗೆ ನಾಯಕ ವಿರಾಟ್ ಕೊಹ್ಲಿ ಎಂದರೆ ದೊಡ್ಡ ಮಟ್ಟದ ಪ್ರೀತಿ. ಈ ಇಬ್ಬರ ನಡುವೆ ಒಂದೊಳ್ಳೆ ರೀತಿಯ ಸ್ನೇಹ ಸಂಬಂಧವಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿ ಹಲವಾರು ಕೊಹ್ಲಿ ಅಭಿಮಾನಿಗಳಿಗೂ ಕೂಡ ಅಚ್ಚುಮೆಚ್ಚು. ಹೀಗಾಗಿಯೇ ತಮ್ಮ ನೆಚ್ಚಿನ ನಾಯಕ ವಿರಾಟ್ ಕೊಹ್ಲಿ ಮತ್ತು ವಿರಾಟ್ ಕೊಹ್ಲಿ ನೆಚ್ಚಿನ ತರಬೇತುದಾರ ರವಿಶಾಸ್ತ್ರಿ ಒಂದೇ ಪಂದ್ಯದ ಮೂಲಕ ತಮ್ಮ ಸ್ಥಾನಗಳ ಅಂತಿಮ ಪಂದ್ಯವನ್ನು ಆಡಿದ್ದನ್ನು ಕಂಡ ಅಭಿಮಾನಿಗಳು ಭಾವುಕರಾಗಿದ್ದಾರೆ. ಹಾಗೂ ಪಂದ್ಯ ಮುಗಿದ ನಂತರ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಭಾವುಕರಾಗಿ ಪರಸ್ಪರ ಅಪ್ಪುಗೆಯನ್ನು ನೀಡಿದ ದೃಶ್ಯದ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Virat Kohli hugs Ravi Shastri and Bharat Arun - End of an Era. Thank You, Ravi Shastri and Bharat Arun sir. pic.twitter.com/U80fIxbkcM
— CricketMAN2 (@man4_cricket) November 9, 2021
ಪಂದ್ಯ ಮುಗಿದ ನಂತರ ಭಾವುಕರಾಗಿ ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ ಮೈದಾನದಲ್ಲಿ ಅಪ್ಪುಗೆ ನೀಡಿದ್ದು ಮಾತ್ರವಲ್ಲದೇ, ಡ್ರೆಸಿಂಗ್ ರೂಮ್ ಬೀಳ್ಕೊಡುಗೆ ಭಾಷಣ ಮುಗಿದ ನಂತರವೂ ಸಹ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾವುಕರಾಗಿ ಅಪ್ಪುಗೆ ನೀಡಿದರು. ಈ ಚಿತ್ರಗಳು ಮತ್ತು ವಿಡಿಯೋ ಕೂಡ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳು ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅಭಿಮಾನಿಗಳು ಈ ಜೋಡಿಯನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳಲಿದ್ದೇವೆ, ವಿರಾಟ್ ಕೊಹ್ಲಿ - ರವಿಶಾಸ್ತ್ರೀ ಯುಗ ಇಂದಿಗೆ ಮುಗಿಯಿತು ಎಂದು ಭಾವುಕ ಸಾಲುಗಳನ್ನು ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಜೋಡಿ ಕುರಿತು ಬರೆದುಕೊಳ್ಳುತ್ತಿದ್ದಾರೆ.