
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ 10 ರನ್ಗಳ ಅಂತರದಿಂದ ಸೋಲು ಕಂಡಿದೆ. ಆರಂಭಿಕ ಆಘಾತದ ನಂತರ ಚೇತರಿಸಿಕೊಂಡು ಉತ್ತಮ ರೀತಿಯಲ್ಲಿ ರನ್ ಬೆನ್ನಟ್ಟಿದರೂ ಅಂತಿಮವಾಗಿ ಗೆಲುವು ಸಾಧ್ಯವಾಗಲಿಲ್ಲ. ಈ ಸೋಲಿಗೆ ಹೈದರಾಬಾದ್ ತಂಡದ ನಾಯಕ ಕಾರಣಗಳನ್ನು ಹೇಳಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ವಿಭಾಗದಲ್ಲಿ ತಂಡ ಮಾಡಿದ ತಪ್ಪಿನತ್ತ ಬೊಟ್ಟು ಮಾಡಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಪಿಚ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇಷ್ಟು ರನ್ಗಳಿಸಬಹುದು ಎಂದು ಯೋಚಿಸಿರಲಿಲ್ಲ ಎಂದು ವಾರ್ನರ್ ಪಂದ್ಯದ ಮುಕ್ತಾಯದ ಬಳಿಕ ಮಾತನಾಡುತ್ತಾ ಹೇಳಿದರು.
"ಅವರು ಇಷ್ಟು ರನ್ ಗಳಿಸಬಹುದು ಎಂದು ಯೋಚನೆ ಮಾಡಿರಲಿಲ್ಲ. ಅವರು ಈ ಪಿಚ್ಗೆ ತುಂಬಾ ಚೆನ್ನಾಗಿ ಹೊಂದಿಕೊಂಡರು. ಉತ್ತಮ ಜೊತೆಯಾಟವನ್ನು ನೀಡಿದರು. ಬಹುತೇಕ ಓವರ್ನ ಮೊದಲ ಎಸೆತಗಗಳನ್ನು ಅಂದುಕೊಂಡಂತೆ ಕಾರ್ಯಗತಗೊಳಿಸಲು ನಾವು ವಿಫಲರಾದೆವು. ಅಂತಿಮವಾಗಿ ಸಾಕಷ್ಟು ರನ್ ಬಿಟ್ಟುಕೊಟ್ಟೆವು" ಎಂದು ವಾರ್ನರ್ ಹೇಳಿದ್ದಾರೆ.
"ನಾವು ಆರಂಭದಲ್ಲಿ ವಿಕೆಟ್ ಕಳೆದುಕೊಂಡೆವು. ನಂತರ ಮನೀಶ್ ಮತ್ತು ಜಾನ್ ಬೈರ್ಸ್ಟೋವ್ ಉತ್ತಮ ಸ್ಥಿತಿಯತ್ತ ತಲುಪಿಸಿದರು. ಹಾಗಾಗಿ ನಾವು ಕೂಡ ಗೆಲ್ಲುವ ಅವಕಾಶವನ್ನು ಹೊಂದಿದ್ದೆವು" ಎಂದು ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.
"ಮೊದಲ ಪಂದ್ಯವನ್ನು ನಾವು ಗೆಲ್ಲಲು ಬಯಸಿದ್ದೆವು. ಆದರೆ ಈ ಅಂಗಳದಲ್ಲಿ ಇನ್ನೂ ನಾಲ್ಕು ಪಂದ್ಯಗಳನ್ನು ನಾವು ಆಡಲಿದ್ದೇವೆ. ಬಹುಶಃ ಮುಂದಿನ ಪಂದ್ಯಗಳಲ್ಲಿ ನಾವು ಅಂಗಳದ ಕೋನಗಳನ್ನು ಉತ್ತಮವಾಗಿ ಬಳಸಿಕೊಳ್ಳಲಿದ್ದೇವೆ" ಎಂದು ವಾರ್ನರ್ ತಮ್ಮ ಮಾತನ್ನು ಮುಗಿಸಿದರು.