
ಆರ್ಸಿಬಿ ಗೆಲುವಿಗೆ ಕಾರಣ ಹೇಳಿದ ವಿರಾಟ್ ಕೊಹ್ಲಿ
ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲ್ ರೌಂಡರ್ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಆರ್ಸಿಬಿ ಮಿಂಚಿತ್ತು. ಈ ಕಾರಣಕ್ಕಾಗಿಯೇ ಬೆಂಗಳೂರೂ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿ ಗಟ್ಟಿಯಾಗಿದೆ. ಮುಂದಿನ ಪಂದ್ಯಗಳಲ್ಲೂ ಗೆದ್ದು ಅಂಕಪಟ್ಟಿಯಲ್ಲಿ ಅಗ್ರ ಎರಡರೊಳಗೆ ಲೀಗ್ ಹಂತದ ಸ್ಪರ್ಧೆ ಮುಗಿಸುವ ಆಲೋಚನೆಯಲ್ಲಿ ಆರ್ಸಿಬಿಯಿದೆ. "ನಮಗೆ ಜಯದ ಉಡುಗೊರೆಗಳು ಸಿಗುತ್ತಿವೆ ಯಾಕೆಂದರೆ ಪಂದ್ಯ ಸೋಲುತ್ತೆ ಅನ್ನುವಾಗಲೂ ನಾವು ನಿರ್ಭೀತಿಯ, ವಿಶ್ವಾಸದ ಆಟ ಆಡುತ್ತಿದ್ದೇವೆ ಅದಕ್ಕೆ. ಇನ್ನು ಕೆಲವು ಗಮನಾರ್ಹ ಸಂಗತಿಯೆಂದರೆ ಮಧ್ಯಮ ಓವರ್ಗಳಲ್ಲಿ ನಮ್ಮ ಅತ್ಯುತ್ತಮ ಬೌಲಿಂಗ್. ನೀವು ವಿಕೆಟ್ ತೆಗೆದುಕೊಳ್ಳತೊಡಗಿದರೆ ಪಂದ್ಯವನ್ನು ಬದಲಿಸಲು ಸಾಧ್ಯವಾಗುತ್ತದೆ. ಬ್ಯಾಟಿಂಗ್ನಲ್ಲೂ ನಾವು ನಿರ್ಭೀತಿಯ ಆಟ ಆಡುತ್ತಿದ್ದೇವೆ," ಎಂದು ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಬಾರಿ ಕಪ್ ಗೆಲ್ಲಲು ಸುವರ್ಣಾವಕಾಶ
ಐಪಿಎಲ್ನಲ್ಲಿ ಕಪ್ ಗೆಲ್ಲದ ತಂಡಗಳ ಸಾಲಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿದೆ. ಟ್ರೋಫಿ ಗೆಲ್ಲದ ಇನ್ನೆರಡು ತಂಡಗಳೆಂದರೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಎರಡೂ ತಂಡಗಳಿಗೂ ಟ್ರೋಫಿ ಗೆಲ್ಲಲು ಅವಕಾಶವಿದೆ. ಅಂಕಪಟ್ಟಿಯಲ್ಲಿ ಸದ್ಯ ಚೆನ್ನೈ ಸೂಪರ್ ಕಿಂಗ್ಸ್ 10ರಲ್ಲಿ 8 ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿರುವ ಡೆಲ್ಲಿ 11ರಲ್ಲಿ 8 ಪಂದ್ಯಗಳನ್ನು ಗೆದ್ದು 16 ಪಾಯಿಂಟ್ಸ್ ಕಲೆ ಹಾಕಿವೆ. ರಾಯಲ್ ಚಾಲೆಂಜರ್ಸ್ 11ರಲ್ಲಿ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್ ಗಳಿಸಿದೆ. ನಾಲ್ಕನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಐದನೇ ಸ್ಥಾನದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಗಳು ಇವೆ.

ರಾಜಸ್ಥಾನ್ ರಾಯಲ್ಸ್ vs ರಾಯಲ್ ಚಾಲೆಂಜರ್ಸ್ ಪಂದ್ಯ ಸ್ಕೋರ್
ದುಬೈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಎವಿನ್ ಲೂಯಿಸ್ 58, ಯಶಸ್ವಿ ಜೈಸ್ವಾಲ್ 31, ಸಂಜು ಸ್ಯಾಮ್ಸನ್ 19, ಲಿಯಾಮ್ ಲಿವಿಂಗ್ಸ್ಟೋನ್ 6, ಮಹಿಪಾಲ್ ಲೊಮ್ರರ್ 3, ರಿಯಾನ್ ಪರಾಗ್ 9, ರಾಹುಲ್ ತೆವಾಟಿಯಾ 2, ಕ್ರಿಸ್ ಮೋರಿಸ್ 14, ಕಾರ್ತಿಕ್ ತ್ಯಾಗಿ 1 ರನ್ನೊಂದಿಗೆ 20 ಓವರ್ಗೆ 9 ವಿಕೆಟ್ ಕಳೆದು 149 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಬೆಂಗಳೂರು, ವಿರಾಟ್ ಕೊಹ್ಲಿ 25, ದೇವದತ್ ಪಡಿಕ್ಕಲ್ 22, ಶ್ರೀಕರ್ ಭರತ್ 44, ಗ್ಲೆನ್ ಮ್ಯಾಕ್ಸ್ವೆಲ್ ಅಜೇಯ 50, ಎಬಿ ಡಿ ವಿಲಿಯರ್ಸ್ ಅಜೇಯ 4 ರನ್ನೊಂದಿಗೆ 17.1 ಓವರ್ಗೆ 3 ವಿಕೆಟ್ ಕಳೆದು 153 ರನ್ ಗಳಿಸಿ 7 ವಿಕೆಟ್ ಗೆಲುವನ್ನಾಚರಿಸಿತು.


Click it and Unblock the Notifications
