ಆಗಸ್ಟ್ 9 ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ಮತ್ತು ವಿದ್ಯಮಾನಗಳು ನಡೆದಿವೆ. ಒಂದೆಡೆ ಆಸ್ಟ್ರೇಲಿಯಾ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶದ ಮೂಲಕ ಹೀನಾಯವಾಗಿ ಸೋಲುವುದರ ಮೂಲಕ ಬೇಡವಾದ ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರೆ ಮತ್ತೊಂದೆಡೆ ಐಪಿಎಲ್ ಕುರಿತು ಬಿಸಿಸಿಐ ಹೊಸ ನಿಯಮಗಳನ್ನು ಪ್ರಕಟಿಸಿದೆ. ಹೀಗೆ ಆಗಸ್ಟ್ 9ರ ಸೋಮವಾರದಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದ ಕೆಲ ಪ್ರಮುಖ ಘಟನೆಗಳ ಕಿರು ನೋಟ ಈ ಕೆಳಕಂಡಂತಿದೆ ಓದಿ.
* ಬಾಂಗ್ಲಾದೇಶದ ವಿರುದ್ಧದ ಐದನೇ ಟಿ ಟ್ವೆಂಟಿ ಪಂದ್ಯದಲ್ಲಿ 62 ರನ್ಗಳಿಗೆ ಆಲ್ ಔಟ್ ಆಗಿರುವ ಆಸ್ಟ್ರೇಲಿಯ ತಂಡ ಆಸ್ಟ್ರೇಲಿಯಾದ ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಕಡಿಮೆ ಮೊತ್ತ ದಾಖಲಿಸಿದ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
* ಆಸ್ಟ್ರೇಲಿಯಾ ವಿರುದ್ಧದ 5 ಟಿ ಟ್ವೆಂಟಿ ಪಂದ್ಯಗಳ ಸರಣಿಯನ್ನು 4-1 ಅಂತರದಲ್ಲಿ ಗೆಲ್ಲುವುದರ ಮೂಲಕ ಬಾಂಗ್ಲಾದೇಶ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಬಾಂಗ್ಲಾದೇಶ ವಶಪಡಿಸಿಕೊಂಡಿದೆ.
* ಯುಎಇಯಲ್ಲಿ ಮುಂದುವರಿಯಲಿರುವ ಐಪಿಎಲ್ ಕುರಿತು ಬಿಸಿಸಿಐ ಹೊಸ ನಿಯಮವನ್ನು ಪ್ರಕಟಿಸಿದ್ದು ಯುಎಇಯಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳಲ್ಲಿ ಚೆಂಡು ಮೈದಾನದಿಂದ ಹೊರ ಹೋದರೆ ಅಥವಾ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳಕ್ಕೆ ಹೋಗಿ ಬಿದ್ದರೆ, ಆ ಚೆಂಡನ್ನು ಪುನಃ ಪಂದ್ಯದಲ್ಲಿ ಬಳಸುವಂತಿಲ್ಲ ಹಾಗೂ ಹೊಸ ಚೆಂಡನ್ನು ಬಳಸಿ ಪಂದ್ಯವನ್ನು ಮುಂದುವರೆಸಬೇಕೆಂಬ ನೂತನ ನಿಯಮವನ್ನು ಬಿಸಿಸಿಐ ಜಾರಿಗೆ ತಂದಿದೆ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿರಲಿಲ್ಲ. ಅಶ್ವಿನ್ ಬದಲು ಶಾರ್ದೂಲ್ ಠಾಕೂರ್ ತಂಡದಲ್ಲಿ ಸ್ಥಾನ ಪಡೆದುಕೊಂಡು ಉತ್ತಮ ಪ್ರದರ್ಶನವನ್ನು ನೀಡಿದರು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಶಾರ್ದೂಲ್ ಠಾಕೂರ್ ಜತೆ ಪೈಪೋಟಿ ನಡೆಸುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಹೇಳಿದ್ದಾರೆ.
* ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನಾಡಲು ಟೀಮ್ ಇಂಡಿಯಾ ಆಟಗಾರರು ಲಂಡನ್ಗೆ ಪ್ರಯಾಣ ಬೆಳೆಸಿದ್ದಾರೆ.
* ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರ ಕುರಿತು ವಿರಾಟ್ ಕೊಹ್ಲಿ ಬೇಸರ ವ್ಯಕ್ತಪಡಿಸುತ್ತಾರೆ. ಐದನೇ ದಿನದಾಟವನ್ನು ಪೂರ್ಣಗೊಳಿಸಲು ಆಗದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
* ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾದದ್ದು ಎರಡೂ ತಂಡಗಳಿಗೆ ವರವಾಗಿ ಪರಿಣಮಿಸಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಹೇಳಿಕೆ ನೀಡಿದ್ದಾರೆ.