2019ರ ವಿಶ್ವಕಪ್ ಕರೆ ಬರುತ್ತದೆಯೇ?
ಯುವರಾಜ್ ಸಿಂಗ್ ಮತ್ತೆ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿದ್ದಾರೆ. 2019ರ ವಿಶ್ವಕಪ್ನಲ್ಲಿ ತಂಡವನ್ನು ಪ್ರತಿನಿಧಿಸುವ ಆಸೆ ಅವರದು. ಆದಕ್ಕೆ ತಕ್ಕಂತೆ ಅವರು ಆಟವಾಡಬೇಕಿದೆ. ಫಿಟ್ನೆಸ್ ಮರಳಿ ಪಡೆದುಕೊಂಡು ಆಯ್ಕೆದಾರರ ವಿಶ್ವಾಸ ಗಳಿಸಬೇಕಿದೆ. ಐಪಿಎಲ್ನಲ್ಲಿ ರನ್ ಗಳಿಸಲು ತಿಣುಕಾಡುತ್ತಿರುವ ಅವರಿಗೆ ಪಂಜಾಬ್ ತಂಡ ಮತ್ತೆ ಮತ್ತೆ ಅವಕಾಶಗಳನ್ನು ನೀಡುತ್ತಲೇ ಇದೆ. ಆದರೆ, ಅದಕ್ಕೆ ತಕ್ಕ ಆಟ ಯುವಿ ಬ್ಯಾಟ್ನಿಂದ ಬಂದಿಲ್ಲ.
ವಿಶ್ವಕಪ್ ಬಳಿಕ ನಿವೃತ್ತಿ
2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಹೊಂದುವ ಉದ್ದೇಶ ಯುವಿಯದು. '2019ರವರೆಗೂ ಎಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲೆಲ್ಲ ಆಡುತ್ತೇನೆ. ಆ ವರ್ಷ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಪಯಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ನಿರ್ಧಾರ ತೆಗೆದುಕೊಳ್ಳಲೇಬೇಕು. 2000ನೇ ಇಸವಿಯಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಈಗಾಗಲೇ 17-18 ವರ್ಷವಾಗಿದೆ. ಹೀಗಾಗಿ ಮುಂದಿನ ವರ್ಷ ಅದಕ್ಕೆ ಅಂತ್ಯ ಹಾಡುತ್ತೇನೆ' ಎಂದಿದ್ದಾರೆ ಅವರು.
ಗೌರವದ ಬೀಳ್ಕೊಡುಗೆ ಸಿಗುತ್ತದೆಯೇ?
ಭಾರತ ತಂಡಕ್ಕೆ ಸುದೀರ್ಘ ಕಾಲ ತಮ್ಮದೇ ಕೊಡುಗೆ ನೀಡಿರುವ ಯುವರಾಜ್ಗೆ ಬಿಸಿಸಿಐ ಗೌರವಯುತ ಬೀಳ್ಕೊಡುಗೆ ನೀಡುತ್ತದೆಯೇ? ಅಭಿಮಾನಿಗಳಲ್ಲಿ ಈ ಕುತೂಹಲ ಮೂಡಿದೆ. ಸಚಿನ್ ತೆಂಡೂಲ್ಕರ್ಗೆ ದೊರೆತ ಗೌರವದ ಬೀಳ್ಕೊಡುಗೆ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರಿಗೆ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕ್ರಿಕೆಟ್ ಪ್ರಿಯರು ಬಿಸಿಸಿಐ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಫಾರ್ಮ್ ಕಳೆದುಕೊಂಡಿರುವ ಯುವರಾಜ್ಗೆ ಬಿಸಿಸಿಐ ಕೊನೆಯ ಅವಕಾಶ ನೀಡುವ ಜತೆಯಲ್ಲಿ ಗೌರವ ನೀಡಬೇಕು ಎನ್ನುವುದು ಅಭಿಮಾನಿಗಳ ಬಯಕೆ.
ತಂಡದಲ್ಲಿ ಸ್ಥಾನ ಸುಲಭವಲ್ಲ
ಯುವರಾಜ್ಗೆ ಕೊನೆಯ ಅವಕಾಶ ನೀಡಬೇಕೆಂಬ ಕೂಗಿಗೆ ಮನ್ನಣೆ ನೀಡಿದರೂ, ಯಾರ ಸ್ಥಾನದಲ್ಲಿ ಅವರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ತಂಡದಲ್ಲಿನ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಗಾಯಗೊಂಡು ಹೊರಗೆ ಹೋದರೂ ಮತ್ತೆ ಮರಳಿ ತಂಡದಲ್ಲಿ ಸೇರಿಕೊಳ್ಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ತೀವ್ರ ಪೈಪೋಟಿ ಇದೆ. ಯುವ ಆಟಗಾರರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇದರ ನಡುವೆ ಹಿರಿಯ ಯುವರಾಜ್ಗೆ ಸ್ಥಾನ ಕಲ್ಪಿಸುವುದು ಸುಲಭವಲ್ಲ.