For Quick Alerts
ALLOW NOTIFICATIONS  
For Daily Alerts
 

ನಿವೃತ್ತಿಯಾಗಲು ವಿಶ್ವಕಪ್‌ಗಾಗಿ ಕಾಯ್ತಿದ್ದಾರೆ ಯುವರಾಜ್ ಸಿಂಗ್

ಬೆಂಗಳೂರು, ಏಪ್ರಿಲ್ 23: ಭಾರತ ತಂಡ ಏಕದಿನ ಮತ್ತು ಟಿ 20 ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪಾತ್ರ ಬಹು ಮಹತ್ವದ್ದಾಗಿತ್ತು. ಆದರೆ, ಬಳಿಕ ಯುವಿ ಆಟ ಮಂಕಾಯಿತು. ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪ್ರದರ್ಶಿಸುತ್ತಿದ್ದ ಚುರುಕುತನ ಮರೆಯಾಯಿತು. ಬೌಲಿಂಗ್‌ನಲ್ಲಿ ಕೂಡ ಯುವಿ ಸಾಮರ್ಥ್ಯ ಮೊದಲಿನಂತಿಲ್ಲ. ಯುವರಾಜ್ ಇದ್ದರೆ ಎಂತಹ ದೊಡ್ಡ ಮೊತ್ತವನ್ನಾದರೂ ತಲುಪಬಹುದು ಎಂಬ ಭರವಸೆ ಈಗ ಉಳಿದಿಲ್ಲ.

ತಂಡಕ್ಕೆ ಅನಿವಾರ್ಯ ಎಂಬ ಸ್ಥಿತಿಯಲ್ಲಿದ್ದ ಯುವಿ ಆಟ ಹೀಗೇಕಾಯಿತು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿದ್ದು ಫಿಟ್‌ನೆಸ್. ಯುವಿ ಪದೇಪದೇ ಗಾಯದ ಸಮಸ್ಯೆಗೆ ಒಳಗಾದರು. ತಮ್ಮ ಹಿಂದಿನ ಫಿಟ್‌ನೆಸ್, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾದರು. ಇದು ಅವರ ಆಟದ ಮೇಲೆ ಪರಿಣಾಮ ಬೀರಿತು. ಒಮ್ಮೆ ಮರಳಿ ಬಂದಾಗ ತಮ್ಮಲ್ಲಿ ಅದೇ ಛಾತಿ ಉಳಿದಿದೆ ಎಂಬಂತೆ ಭರ್ಜರಿ ಶತಕ ಬಾರಿಸಿದರೂ ನಂತರದ ಪಂದ್ಯಗಳಲ್ಲಿ ಅದೇ ವೈಫಲ್ಯ ಮುಂದುವರಿಯಿತು.

ಈಗ ಐಪಿಎಲ್ ಆವೃತ್ತಿಯಲ್ಲಿಯೂ ಯುವಿ ತಮ್ಮ ಸಾಮರ್ಥ್ಯವನ್ನು ಮರೆತಂತಿದೆ. ಅವರ ಬ್ಯಾಟ್‌ನಿಂದ ಸಿಕ್ಸರ್, ಬೌಂಡರಿಗಳು ಸಿಡಿಯುತ್ತಿಲ್ಲ. ರನ್ ಗಳಿಸಲು ಪರದಾಡುತ್ತಿದ್ದಾರೆ. ಮಾರುದ್ದ ಜಿಗಿದು ಕ್ಯಾಚ್ ಹಿಡಿಯುತ್ತಿದ್ದವರು ಕೈಗೆ ಬಂದ ಸುಲಭದ ಕ್ಯಾಚನ್ನೂ ಕೈಚೆಲ್ಲುತ್ತಿದ್ದಾರೆ. ಯುವಿ ಇಷ್ಟೆಲ್ಲಾ ಸತತ ವೈಫಲ್ಯ ಕಂಡರೂ ಅಭಿಮಾನಿಗಳ ಪ್ರೀತಿ ಕಡಿಮೆಯಾಗಿಲ್ಲ. ಅವರು ಮತ್ತೆ ಭಾರತ ತಂಡದಲ್ಲಿ ಆಡಬೇಕು ಎಂದು ಬಯಸುತ್ತಿದ್ದಾರೆ.

2019ರ ವಿಶ್ವಕಪ್‌ ಕರೆ ಬರುತ್ತದೆಯೇ?

2019ರ ವಿಶ್ವಕಪ್‌ ಕರೆ ಬರುತ್ತದೆಯೇ?

ಯುವರಾಜ್ ಸಿಂಗ್ ಮತ್ತೆ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಹೊಂದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ತಂಡವನ್ನು ಪ್ರತಿನಿಧಿಸುವ ಆಸೆ ಅವರದು. ಆದಕ್ಕೆ ತಕ್ಕಂತೆ ಅವರು ಆಟವಾಡಬೇಕಿದೆ. ಫಿಟ್‌ನೆಸ್ ಮರಳಿ ಪಡೆದುಕೊಂಡು ಆಯ್ಕೆದಾರರ ವಿಶ್ವಾಸ ಗಳಿಸಬೇಕಿದೆ. ಐಪಿಎಲ್‌ನಲ್ಲಿ ರನ್ ಗಳಿಸಲು ತಿಣುಕಾಡುತ್ತಿರುವ ಅವರಿಗೆ ಪಂಜಾಬ್ ತಂಡ ಮತ್ತೆ ಮತ್ತೆ ಅವಕಾಶಗಳನ್ನು ನೀಡುತ್ತಲೇ ಇದೆ. ಆದರೆ, ಅದಕ್ಕೆ ತಕ್ಕ ಆಟ ಯುವಿ ಬ್ಯಾಟ್‌ನಿಂದ ಬಂದಿಲ್ಲ.

ವಿಶ್ವಕಪ್ ಬಳಿಕ ನಿವೃತ್ತಿ

ವಿಶ್ವಕಪ್ ಬಳಿಕ ನಿವೃತ್ತಿ

2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಯ ಬಳಿಕ ನಿವೃತ್ತಿ ಹೊಂದುವ ಉದ್ದೇಶ ಯುವಿಯದು. '2019ರವರೆಗೂ ಎಲ್ಲಿ ಅವಕಾಶ ಸಿಗುತ್ತದೆಯೋ ಅಲ್ಲೆಲ್ಲ ಆಡುತ್ತೇನೆ. ಆ ವರ್ಷ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಪಯಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ನಿರ್ಧಾರ ತೆಗೆದುಕೊಳ್ಳಲೇಬೇಕು. 2000ನೇ ಇಸವಿಯಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೇನೆ. ಈಗಾಗಲೇ 17-18 ವರ್ಷವಾಗಿದೆ. ಹೀಗಾಗಿ ಮುಂದಿನ ವರ್ಷ ಅದಕ್ಕೆ ಅಂತ್ಯ ಹಾಡುತ್ತೇನೆ' ಎಂದಿದ್ದಾರೆ ಅವರು.

ಗೌರವದ ಬೀಳ್ಕೊಡುಗೆ ಸಿಗುತ್ತದೆಯೇ?

ಗೌರವದ ಬೀಳ್ಕೊಡುಗೆ ಸಿಗುತ್ತದೆಯೇ?

ಭಾರತ ತಂಡಕ್ಕೆ ಸುದೀರ್ಘ ಕಾಲ ತಮ್ಮದೇ ಕೊಡುಗೆ ನೀಡಿರುವ ಯುವರಾಜ್‌ಗೆ ಬಿಸಿಸಿಐ ಗೌರವಯುತ ಬೀಳ್ಕೊಡುಗೆ ನೀಡುತ್ತದೆಯೇ? ಅಭಿಮಾನಿಗಳಲ್ಲಿ ಈ ಕುತೂಹಲ ಮೂಡಿದೆ. ಸಚಿನ್ ತೆಂಡೂಲ್ಕರ್‌ಗೆ ದೊರೆತ ಗೌರವದ ಬೀಳ್ಕೊಡುಗೆ ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಅವರಂತಹ ಆಟಗಾರರಿಗೆ ಸಿಕ್ಕಿರಲಿಲ್ಲ. ಈ ವಿಚಾರದಲ್ಲಿ ಕ್ರಿಕೆಟ್ ಪ್ರಿಯರು ಬಿಸಿಸಿಐ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಫಾರ್ಮ್‌ ಕಳೆದುಕೊಂಡಿರುವ ಯುವರಾಜ್‌ಗೆ ಬಿಸಿಸಿಐ ಕೊನೆಯ ಅವಕಾಶ ನೀಡುವ ಜತೆಯಲ್ಲಿ ಗೌರವ ನೀಡಬೇಕು ಎನ್ನುವುದು ಅಭಿಮಾನಿಗಳ ಬಯಕೆ.

ತಂಡದಲ್ಲಿ ಸ್ಥಾನ ಸುಲಭವಲ್ಲ

ತಂಡದಲ್ಲಿ ಸ್ಥಾನ ಸುಲಭವಲ್ಲ

ಯುವರಾಜ್‌ಗೆ ಕೊನೆಯ ಅವಕಾಶ ನೀಡಬೇಕೆಂಬ ಕೂಗಿಗೆ ಮನ್ನಣೆ ನೀಡಿದರೂ, ಯಾರ ಸ್ಥಾನದಲ್ಲಿ ಅವರಿಗೆ ಅವಕಾಶ ನೀಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ತಂಡದಲ್ಲಿನ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಗಾಯಗೊಂಡು ಹೊರಗೆ ಹೋದರೂ ಮತ್ತೆ ಮರಳಿ ತಂಡದಲ್ಲಿ ಸೇರಿಕೊಳ್ಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ತೀವ್ರ ಪೈಪೋಟಿ ಇದೆ. ಯುವ ಆಟಗಾರರು ಅವಕಾಶ ಸಿಕ್ಕಾಗಲೆಲ್ಲ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಇದರ ನಡುವೆ ಹಿರಿಯ ಯುವರಾಜ್‌ಗೆ ಸ್ಥಾನ ಕಲ್ಪಿಸುವುದು ಸುಲಭವಲ್ಲ.

Story first published: Monday, April 23, 2018, 19:29 [IST]
Other articles published on Apr 23, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+