3 ಅಂಕ ನಮ್ಮ ಗುರಿ
"ಪ್ರತಿ ಬಾರಿ ಮೂರು ಅಂಕಗಳನ್ನು ನಮ್ಮದಾಗಿಸಿಕೊಳ್ಳುವುದೇ ಮುಖ್ಯ ಗುರಿ. ಒಟ್ಟಾರೆ 50 ಅಂಕಗಳನ್ನು ಗಳಿಸಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ನಾವು ಉಳಿದೆ 10 ಪಂದ್ಯಗಳನ್ನು ಗೆಲ್ಲಬೇಕು. ಏಕೆಂದರೆ ಈವರೆಗೆ ನೀಡಿರುವ ಪ್ರದರ್ಶನ ನಮಗೆ ತೃಪ್ತಿ ನೀಡಿಲ್ಲ. ಹಂತ ಹಂತವಾಗಿ ಒಂದೊಂದೇ ಹೆಜ್ಜೆ ಮೇಲಿಡುವ ಪ್ರಯತ್ನ ಮಾಡಲಿದ್ದೇವೆ. ಪ್ರತಿ ಪಂದ್ಯವೂ ಮುಖ್ಯ. ಮುಂದಿನ ಪಂದ್ಯ ನಮ್ಮ ಪಾಲಿಗೆ ಅತ್ಯಂತ ಮುಖ್ಯವಾದದ್ದು," ಎಂದು ಜುವಾನ್ ಫೆರಾಂಡೊ ಹೇಳಿದ್ದಾರೆ. ಕಳೆದ ಪಂದ್ಯದಲ್ಲಿ ಗೋವಾ ತಂಡ ಸಂಪೂರ್ಣ 3 ಅಂಕ ಗಳಿಸಿದ್ದು ಅದೃಷ್ಟವೇ ಸರಿ. ಈ ಬಗ್ಗೆ ಮಾತನಾಡಿರುವ ಕೋಚ್, ಗೆಲುವಿನ ಹೊರತಾಗಿಯೂ ತಂಡವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಹಿಂದಿನ ತಪ್ಪು ಮರುಕಳಿಸದು
"ಜಮ್ಷೆಡ್ಪುರ್ ತಂಡ ಅತ್ಯುತ್ತಮವಾಗಿದೆ. ಗುಣಮ್ಟದ ಆಟಗಾರರಿದ್ದಾರೆ. ನಮಗೆ ಇದು ಹೊಸ ಅಧ್ಯಾಯ. ಪ್ರತಿದಿನ ನಮ್ಮ ಆಟ ಸುಧಾರಿಸಿಕೊಳ್ಳುವ ಕಡೆಗೆ ಕೆಲಸ ಮಾಡುತ್ತಿದ್ದೇವೆ. ಡಿಫೆನ್ಸ್ ಮತ್ತು ಅಟ್ಯಾಕ್ ಕಡೆಗೆ ಗಮನ ನೀಡಿದ್ದೇವೆ. ಜಮ್ಷೆಡ್ಪುರ್ ವಿರುದ್ಧದ ಪಂದ್ಯದಲ್ಲಿ ನಮ್ಮ ಹಿಂದಿನ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರ ವಹಿಸಲಿದ್ದೇವೆ," ಎಂದಿದ್ದಾರೆ. ನೆರಿಜಸ್ ವಾಲ್ಸ್ಕೀ ಹೊರತಾಗಿ ಗೋಲ್ ಗಳಿಸಬಲ್ಲ ಮತ್ತೊಬ್ಬ ಆಟಗಾರನನ್ನು ಜಮ್ಷೆಡ್ಪುರ್ ಎಫ್ಸಿ ತಂಡ ಕಂಡುಕೊಳ್ಳಬೇಕಿದೆ. ಜಮ್ಷೆಡ್ಪುರ್ ಎಫ್ಸಿ ತಂಡ ಈ ಬಾರಿ ದಾಖಲಿಸಿರುವ ಒಟ್ಟು 12 ಗೋಲ್ಗಳಲ್ಲಿ 8 ಗೋಲ್ಗಳನ್ನು ನೆರಿಜಸ್ ಒಬ್ಬರೇ ಬಾರಿಸಿದ್ದಾರೆ. ಆದರೆ, ಫೆರಾಂಡೊ ಪಡೆ ಕೇವಲ ಒಬ್ಬ ಆಟಗಾರನ ವಿರುದ್ಧ ಮಾತ್ರವಲ್ಲ ಇಡೀ ತಂಡದ ವಿರುದ್ಧ ಪ್ರತ್ಯೇಕ ರಣತಂತ್ರ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. "ನಮ್ಮ ತಂಡದ ಬಗ್ಗೆ ನನಗೆ ಬಹಳಾ ವಿಶ್ವಾಸವಿದೆ. ಒಂದು ತಂಟವಾಗಿ ಹೋರಾಡುವುದೇ ನಮಗೆ ಮುಖ್ಯ. ಜಮ್ಷೆಡ್ಪುರ ವಿರುದ್ಧವೂ ಒಂದು ತಂಡದ ವಿರುದ್ಧ ಹೋರಾಡುವಂತಹ ಯೋಜನೆಯನ್ನೇ ಹಾಕಿಕೊಂಡಿದ್ದೇವೆ," ಎಂದಿದ್ದಾರೆ.
ಶ್ರೇಷ್ಠ ಆಟದತ್ತ ನಮ್ಮ ಗಮನ
ಮತ್ತೊಂದೆಡೆ ಜಮ್ಷೆಡ್ಪುರ್ ಎಫ್ಸಿ ತಂಡದ ಕೋಚ್ ಒವೆನ್ ಕಾಯ್ಲ್, ಎಫ್ಸಿ ಗೋವಾ ಎದುರು ತಮ್ಮ ತಂಡ ಯಾವುದೇ ರೀತಿಯ ತಪ್ಪು ಮಾಡಬಾರದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಏಕೆಂದರೆ ಚೆಂಡಿನ ನಿಯಂತ್ರಣ ಸಾಧಿಸುವಲ್ಲಿ ಗೋವಾ ಪಡೆ ಎತ್ತಿದ ಕೈ ಆಗಿದ್ದು, ಸತತ ಆಕ್ರಮಣ ಮಾಡುವ ಸಾಮರ್ಥ್ಯ ಹೊಂದಿದೆ. "ವೈಯಕ್ತಿಕ ತಪ್ಪುಗಳನ್ನು ಇಲ್ಲಿ ಮೊದಲು ದೂರ ಮಾಡಿ, ಮುನ್ನಡೆಯುವುದನ್ನು ಎದುರು ನೋಡಬಕು. ಪಂದ್ಯ ಪಂದ್ಯಕ್ಕೂ ಆಟ ಸುಧಾರಿಸುವ ಅಗತ್ಯವಿದೆ. ಎಫ್ಸಿ ಗೋವಾ ಎದುರು ಉತ್ತಮ ಆಡವಾಡಬೇಕಿದೆ. ಆ ತಂಡ ಅತ್ಯಂತ ಬಲಿಷ್ಠವಾದದ್ದು. ಕಠಿಣ ಪರಿಶ್ರಮ ಮುಂದುವರಿಸಬೇಕು. ಒಂದು ತಂಡವಾಗಿ ಪ್ರಗತಿ ಕಾಣುವ ಅಗತ್ಯವಿದೆ," ಎಂದು ಕಾಯ್ಲ್ ಹೇಳಿದ್ದಾರೆ. "ಗೋವಾ ತಂಡ ಅತ್ಯುತ್ತಮ ಕೋಚ್ನ ಸೇವೆ ಪಡೆದಿದೆ. ಅದ್ಭುತ ಆಟಗಾರರೂ ಇದ್ದಾರೆ. ಹಲವು ವರ್ಷಗಳಿಂದ ಒಂದೇ ಶೈಲಿಯ ಆಟವನ್ನು ಕಾಯ್ದುಕೊಂಡಿದೆ. ಇದೇ ಆ ತಂಡದ ಪ್ರಗತಿಗೆ ಕಾರಣ. ಇದರ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಬಲ ಮತ್ತು ದೌರ್ಬಲ್ಯಗಳು ನಮಗೆ ತಿಳಿದಿದೆ. ಹೀಗಾಗಿ ನಮ್ಮ ಶ್ರೇಷ್ಠ ಆಟವಾಡುವುದರ ಕಡೆಗಷ್ಟೇ ನಮ್ಮ ಗಮನ ನೆಲೆಸಿದೆ," ಎಂದು ಕಾಯ್ಲ್ ವಿಶ್ವಾಸದ ಮಾತುಗಳನ್ನಾಡಿದ್ದಾರೆ.