
ನವದೆಹಲಿ, ಜುಲೈ 23: ಭಾರತದ ಟೇಬಲ್ ಟೆನ್ನಿಸ್ ತಾರೆ ಮಣಿಕಾ ಬಾತ್ರಾ ಮತ್ತು ಇತರೆ ಆರು ಮಂದಿ ಪ್ರಮುಖ ಕ್ರೀಡಾಪಟುಗಳನ್ನು ವಿಮಾನಕ್ಕೆ ಹತ್ತಿಸಿಕೊಳ್ಳಲು ಏರ್ ಇಂಡಿಯಾ ನಿರಾಕರಿಸಿದ ಘಟನೆ ವರದಿಯಾಗಿದೆ.
ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಈ ಕ್ರೀಡಾಪಟುಗಳು ಸೋಮವಾರ ಮೆಲ್ಬರ್ನ್ಗೆ ತೆರಳಬೇಕಿತ್ತು.
ಆದರೆ, ಈ ಆಟಗಾರರು ತಡವಾಗಿ ಬಂದಿದ್ದೇ ವಿಮಾನ ಪ್ರಯಾಣ ನಿರಾಕರಿಸಲು ಕಾರಣ ಎಂದು ಏರ್ ಇಂಡಿಯಾ ಹೇಳಿದೆ. ಅಲ್ಲದೆ, ಇವರು ಬೇರೆ ಬೇರೆ ಪಿಎನ್ಆರ್ಗಳಲ್ಲಿ ಬುಕಿಂಗ್ ಮಾಡಿಕೊಂಡಿದ್ದರು ಎಂದು ದೂರಿದೆ.
17 ಆಟಗಾರರು ಮತ್ತು ಅಧಿಕಾರಿಗಳನ್ನು ಒಳಗೊಂಡ ತಂಡವು ಜುಲೈ 24ರಿಂದ ಆರಂಭವಾಗಲಿರುವ ಐಟಿಟಿಎಫ್ ವರ್ಲ್ಡ್ ಟೂರ್ ಆಸ್ಟ್ರೇಲಿಯನ್ ಓಪನ್ನಲ್ಲಿ ಪಾಲ್ಗೊಳ್ಳಲು ಹೊರಟಿದ್ದರು.
ಆದರೆ, ವಿಮಾನದ ಸೀಮಿತ ಆಸನಗಳಿಗಿಂತಲೂ ಹೆಚ್ಚು ಬುಕಿಂಗ್ ಮಾಡಿರುವುದರಿಂದ 10 ಮಂದಿ ಆಟಗಾರರಿಗೆ ಮಾತ್ರ ವಿಮಾನವೇರಲು ಅವಕಾಶ ನೀಡಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಮಣಿಕಾ ಅವರಲ್ಲದೆ ಹಿರಿಯ ಆಟಗಾರ್ತಿ ಮವುಮಾ ದಾಸ್ ಅವರಿಗೂ ವಿಮಾನವೇರಲು ಅವಕಾಶ ನಿರಾಕರಿಸಲಾಗಿದೆ. ಸರ್ಕಾರಿ ವಿಮಾನಯಾನ ಸಂಸ್ಥೆಯ ಈ ವರ್ತನೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಾವು ಎದುರಿಸಿದ ಸಂಕಷ್ಟದ ಕುರಿತು ಮಣಿಕಾ ಬಾತ್ರಾ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ವಿಚಾರವನ್ನು ಪರಿಶೀಲಿಸುವಂತೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರಿಗೆ ಕೋರಿದ್ದಾರೆ.
'ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆಯಾದ ನಾನು ಸೇರಿದಂತೆ, ಮವುಮಾ ದಾಸ್, ಶರತ್ ಕಮಲ್, ಮಧುರಿಕಾ, ಹರ್ಮೀತ್, ಸುತೀರ್ಥ, ಸತ್ಯನ್ ಸೇರಿದಂತೆ 17 ಜನರ ತಂಡ ನಾಳೆಯಿಂದ ಶುರುವಾಗುವ ಐಟಿಟಿಎಫ್ ವರ್ಲ್ಡ್ ಟೂರ್ ಆಸ್ಟ್ರೇಲಿಯನ್ ಓಪನ್ನಲ್ಲಿ ಆಡಲು ಏರ್ ಇಂಡಿಯಾ 0308ನಲ್ಲಿ ಇಂದು ಹೋಗಬೇಕಿತ್ತು' ಎಂದು ಮಣಿಕಾ ಟ್ವೀಟ್ ಮಾಡಿದ್ದಾರೆ.
'ಆದರೆ ಏರ್ ಇಂಡಿಯಾ ಕೌಂಟರ್ಗೆ ತೆರಳಿದಾಗ ವಿಮಾನವನ್ನು ಹೆಚ್ಚುವರಿಯಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದರು. ಇದರಿಂದ ಕೇವಲ 10 ಜನರ ಟಿಟಿ ತಂಡಕ್ಕೆ ವಿಮಾನ ಏರಲು ಅವಕಾಶ ನೀಡಲಾಯಿತು.
ಇನ್ನೂ ನಾವು ಏಳು ಮಂದಿಗೆ ತೆರಳಲು ಸಾಧ್ಯವಾಗಲಿಲ್ಲ. ಎಲ್ಲ ಟಿಕೆಟ್ಗಳನ್ನೂ ಬಲ್ಮರ್ ಲಾರಿ ಕಂಪೆನಿ ಬುಕ್ ಮಾಡಿತ್ತು' ಎಂದು ಮಣಿಕಾ ತಿಳಿಸಿದ್ದಾರೆ.
ಈ ಪ್ರಯಾಣದ ಕುರಿತು ತಮಗೆ ಪೂರ್ವಮಾಹಿತಿ ಇರಲಿಲ್ಲ. ಸಂಸ್ಥೆಗೆ ಕ್ರೀಡಾಪಟುಗಳ ಕುರಿತು ಅಪಾರ ಗೌರವವಿದೆ ಎಂದು ಏರ್ ಇಂಡಿಯಾ ಸ್ಪಷ್ಟೀಕರಣ ನೀಡಿದೆ.
'ಕ್ರೀಡೆಯನ್ನು ಉತ್ತೇಜಿಸುವುದರಲ್ಲಿ ಏರ್ ಇಂಡಿಯಾ ಭವ್ಯ ಪರಂಪರೆ ಹೊಂದಿದೆ. ಅದು ಕ್ರೀಡಾಪಟುಗಳ ಕುರಿತು ಯಾವಾಗಲೂ ಅಧಿಕ ಗೌರವ ಹೊಂದಿರುತ್ತದೆ.
ಮೆಲ್ಬರ್ನ್ಗೆ ತೆರಳಬೇಕಿದ್ದ ಟೇಬಲ್ ಟೆನ್ನಿಸ್ ಆಟಗಾರರ ಟಿಕೆಟ್ಅನ್ನು ಬೇರೆ ಬೇರೆ ಪಿಎನ್ಆರ್ ಸಂಖ್ಯೆಗಳಲ್ಲಿ ಬುಕ್ ಮಾಡಲಾಗಿತ್ತು. ಅಲ್ಲದೆ, ಉಳಿದ ಆಟಗಾರರು ಚೆಕ್ ಇನ್ ಆದ ಬಳಿಕ ಕೆಲವರು ತಡವಾಗಿ ಬಂದಿರಬಹುದು' ಎಂದು ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದೆ.
ಸಾಮಾನ್ಯವಾಗಿ ಕ್ರೀಡಾಪಟುಗಳ ಪ್ರಯಾಣದ ಬಗ್ಗೆ ಮೊದಲೇ ಮಾಹಿತಿ ನೀಡಲಾಗುತ್ತದೆ. ಆದರೆ ವಾಡಿಕೆಗೆ ವಿರುದ್ಧವಾಗಿ ಏರ್ ಇಂಡಿಯಾಕ್ಕೆ ತಂಡದ ಪ್ರಯಾಣದ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ.
ಈ ಕ್ರೀಡಾಪಟುಗಳಿಗೆ ಹೋಟೆಲ್ ವ್ಯವಸ್ಥೆ ಮಾಡಲಾಗಿದ್ದು, ಮರುದಿನದ ವಿಮಾನದ ವ್ಯವಸ್ಥೆ ಮಾಡುವ ಭರವಸೆ ನೀಡಲಾಗಿದೆ' ಎಂದು ಅದು ಟ್ವೀಟ್ ಮಾಡಿದೆ.
ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕಿ ನೀಲಮ್ ಕಪೂರ್, ತಕ್ಷಣ ಕ್ರಮ ಕೈಗೊಂಡರು.
'ಇಂದು ತಡರಾತ್ರಿ ಹೊರಡುವಂತೆ ಟಿಟಿ ತಂಡಕ್ಕೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ' ಎಂದು ಕಪೂರ್ ಅವರು ಟ್ವೀಟ್ ಮಾಡಿದ್ದಾರೆ.