ನವದೆಹಲಿ, ಜನವರಿ 13: ಕಳಂಕಿತರಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾ ಅವರನ್ನು ತನ್ನ ಆಜೀವ ಅಧ್ಯಕ್ಷರನ್ನಾಗಿಸಿದ್ದ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯನ್ನು (ಐಒಎ) ಅಮಾನತುಗೊಳಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯ, ಶುಕ್ರವಾರ ತನ್ನ ನಿರ್ಧಾರವನ್ನು ಹಿಂಪಡೆದಿದೆ.
ಎರಡು ದಿನಗಳ ಹಿಂದಷ್ಟೇ, ಐಒಎ, ಆಜೀವ ಅಧ್ಯಕ್ಷರ ಸ್ಥಾನಗಳಿಗೆ ಕಲ್ಮಾಡಿ, ಚೌಟಾಲಾ ಅವರನ್ನು ಆರಿಸಿದ್ದ ನಿರ್ಧಾರವನ್ನು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ, ಇದೀಗ, ಕೇಂದ್ರ ಕ್ರೀಡಾ ಇಲಾಖೆಯೂ ತನ್ನ ಅಮಾನತು ಶಿಕ್ಷೆಯನ್ನು ವಾಪಸ್ ಪಡೆದಿದೆ.
ಕಳೆದ ತಿಂಗಳ ಕೊನೆಯ ವಾರದಲ್ಲಿ ಚೆನ್ನೈನಲ್ಲಿ ನಡೆದಿದ್ದ ಐಒಎ ವಾರ್ಷಿಕ ಸಮ್ಮೇಳನದಲ್ಲಿ, ಐಒಎ ಮಾಜಿ ಅಧ್ಯಕ್ಷರಾದ ಸುರೇಶ್ ಕಲ್ಮಾಡಿ, ಅಭಯ್ ಸಿಂಗ್ ಚೌಟಾಲಾ ಅವರನ್ನು ಆಜೀವ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ಆದರೆ, ಸಂಸ್ಥೆಯ ಆ ನಿರ್ಧಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತಲ್ಲದೆ, ಕ್ರೀಡಾ ವಲಯದಲ್ಲಿ ಭಾರೀ ವಿವಾದ ಎಬ್ಬಿಸಿತ್ತು.
ಈ ಬಗ್ಗೆ ಸಾಕಷ್ಟು ಕ್ರೀಡಾ ತಾರೆಗಳು, ರಾಜಕೀಯ ನೇತಾರರು ವಿರೋಧ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರ ಆರೋಪವನ್ನೆದುರಿಸುತ್ತಿದ್ದ ಈ ಇಬ್ಬರನ್ನೂ ಆಜೀವ ಅಧ್ಯಕ್ಷರೆಂಬ ಗೌರವ ಹುದ್ದೆಯಿಂದ ಕೈಬಿಡಬೇಕೆಂದು ಆಗ್ರಹಿಸಿದ್ದರು. ಆದರೆ, ಐಒಎ ಇದಕ್ಕೆ ಆರಂಭದಲ್ಲಿ ಒಪ್ಪಲಿಲ್ಲ.
ಆದರೆ, ವಿವಾದದ ಬಿಸಿ ಏರುತ್ತಿದ್ದಂತೆ, ಜಾಗೃತರಾದ ಸುರೇಶ್ ಕಲ್ಮಾಡಿ, ಆಜೀವ ಅಧ್ಯಕ್ಷ ಗಿರಿಯಿಂದ ಹಿಂದೆ ಸರಿದರು. ಆದರೆ, ಅಭಯ್ ಸಿಂಗ್ ಚೌಟಾಲಾ ಮಾತ್ರ ಹಿಂದೆ ಸರಿದಿರಲಿಲ್ಲ. ಏತನ್ಮಧ್ಯೆ, ಐಒಎನ ಈ ನಡೆಯನ್ನು ವಿರೋಧಿಸಿ ಕಳಂಕಿತರನ್ನು ಆಜೀವ ಅಧ್ಯಕ್ಷ ಸ್ಥಾನಕ್ಕೆ ಆರಿಸಿದ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಕ್ರೀಡಾ ಸಚಿವಾಲಯ, ಐಒಎ ಶೋಕಾಸ್ ನೋಟಿಸ್ ನೀಡಿತ್ತು.
ಆದರೆ, ಆ ಶೋಕಾಸ್ ನೋಟಿಸ್ ಗೆ ಐಒಎ, ನಿಗದಿತ ಸಮಯದೊಳಗೆ ಉತ್ತರಿಸಿರಲಿಲ್ಲ. ಹಾಗಾಗಿ, ಕೇಂದ್ರ ಕ್ರೀಡಾ ಸಚಿವಾಲಯಕ ಐಒಎ ಮೇಲೆ ಅಮಾನತು ಶಿಕ್ಷೆ ಹೇರಿತ್ತು.