

ಕೊಲಂಬೋ, ಜುಲೈ 30: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಯುವ ತಂಡ ಕೊಲಂಬೋದಲ್ಲಿ ಸೋಮವಾರ (ಜು.30) ನಡೆದ ಅಂಡರ್ -19 ಯೂತ್ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ಯುವಕರು ನೀಡಿದ್ದ 144 ರನ್ ಸುಲಭ ಗುರಿಯನ್ನು ಭಾರತ 37.1 ಓವರ್ ನಲ್ಲೇ ತಲುಪಿ ವಿಜಯವನ್ನಾಚರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ 38.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 143 ರನ್ ಪೇರಿಸಿ ಭಾರತಕ್ಕೆ 144 ರನ್ ಗುರಿ ನೀಡಿತ್ತು. ಶ್ರೀಲಂಕಾ ಪರ ನಾಯಕ ನಿಪುಣ್ ದಂಜಂಜಯ 33 (45), ನಿಪುಣ್ ಮಾಲಿಂಗ 38 (39) ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾರೂ 15ಕ್ಕಿಂತ ಹೆಚ್ಚಿನ ರನ್ ಸೇರಿಸಲಿಲ್ಲ.
ಪಂದ್ಯ ಗೆಲ್ಲುವ ವಿಶ್ವಾಸದಿಂದಲೇ ಚೇಸಿಂಗ್ ಗೆ ಇಳಿದ ಭಾರತದ ಯುವಕರು, 37.1 ಓವರ್ ಮುಕ್ತಾಯಕ್ಕೆ ನಾಲ್ಕು ವಿಕೆಟ್ ಕಳೆದು 144 ರನ್ ಪೇರಿಸಿದರು. ಅಂಜು ರಾವತ್ 50 (85), ಸಮೀರ್ ಚೌದರಿ ಅಜೇಯ 31 (35) ರನ್ ಮೂಲಕ ತಂಡದ ಗೆಲುವಿಗೆ ಕಾರಣರಾದರು.
ಶ್ರೀಲಂಕಾ ಇನ್ನಿಂಗ್ಸ್ ವೇಳೆ ಭಾರತದ ಅಜಯ್ ದೇವ್ ಗೌಡ 3 (18 ರನ್), ಮೋಹಿತ್ ಜಾಂಗ್ರ 2 (14 ರನ್), ಯತಿನ್ ಮಾಂಗ್ವಾನಿ 2 (35 ರನ್), ಆಯುಷ್ ಬಾಡೋಣಿ 2 (37 ರನ್) ವಿಕೆಟ್ ಉರುಳಿಸಿ ಕಾಡಿದರು. ಟೆಸ್ಟ್ ನಲ್ಲೂ ಶ್ರೀಲಂಕಾ ಎದುರು ಭಾರತದ ಇದೇ ತಂಡ 147 ರನ್ ಭರ್ಜರಿ ಗೆಲುವು ದಾಖಲಿಸಿತ್ತು.