ಭಾರತ ತಂಡದಲ್ಲಿ ಅಜಿಂಕ್ಯಾ ರಹಾನೆ ಇನ್ನೂ ಸ್ಥಾನ ಪಡೆದುಕೊಂಡಿರುವುದು ಆತನ ಅದೃಷ್ಟ
"ಭಾರತದ ಪರ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಬೇಕು. ನಾಲ್ಕನೇ ಕ್ರಮಾಂಕದಲ್ಲಿ ಶುಭ್ ಮನ್ ಗಿಲ್ ಆಡಲಿದ್ದಾರೆ. ಹಾಗೂ ತಂಡದಲ್ಲಿ ಅಜಿಂಕ್ಯ ರಹಾನೆ ಈಗಲೂ ಸ್ಥಾನ ಪಡೆದುಕೊಂಡಿರುವುದು ಆತನ ಅದೃಷ್ಟ. ಈ ಅವಕಾಶವನ್ನು ಆತ ಸದುಪಯೋಗಪಡಿಸಿಕೊಳ್ಳಬೇಕು" ಎಂದು ಗೌತಮ್ ಗಂಭೀರ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅಜಿಂಕ್ಯಾ ರಹಾನೆ ಕಳಪೆ ಫಾರ್ಮ್ನಿಂದ ಆಚೆ ಬರುವುದಕ್ಕೆ ಇದು ಸರಿಯಾದ ಅವಕಾಶ ಎಂದು ಗೌತಮ್ ಗಂಭೀರ್ ಎಚ್ಚರಿಸಿದ್ದಾರೆ.
ಕಳಪೆ ಫಾರ್ಮ್ನಲ್ಲಿರುವ ಅಜಿಂಕ್ಯಾ ರಹಾನೆ
ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದರೂ ಸಹ ಓರ್ವ ಆಟಗಾರನಾಗಿ ಹಲವಾರು ತಿಂಗಳುಗಳಿಂದ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ. ಕಳೆದ ಬಾರಿಯ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಡಲು ಭಾರತ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ನೆಲದಲ್ಲಿಯೇ ಆಸ್ಟ್ರೇಲಿಯಕ್ಕೆ ಅಜಿಂಕ್ಯ ರಹಾನೆ ನಾಯಕತ್ವದ ಟೀಮ್ ಇಂಡಿಯಾ ಮಣ್ಣು ಮುಕ್ಕಿಸಿತ್ತು. ಈ ಸರಣಿಯಲ್ಲಿ ಅಜಿಂಕ್ಯಾ ರಹಾನೆ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಬಾರಿಸಿದ್ದರು. ಇದಾದ ನಂತರ ಕೇವಲ ಒಂದೇ ಒಂದು ಅರ್ಧಶತಕವನ್ನು ಬಾರಿಸಿರುವ ಅಜಿಂಕ್ಯ ರಹಾನೆ ಗಮನ ಸೆಳೆಯುವಂತಹ ಪ್ರದರ್ಶನ ನೀಡಲಾಗದೇ ಕಳಪೆ ಫಾರ್ಮ್ ಎದುರಿಸುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸ ವ್ತಕ್ತಪಡಿಸಿದ ರಹಾನೆ
ಇತ್ತೀಚೆಗಷ್ಟೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ವೈಟ್ ವಾಷ್ ಸಾಧನೆ ಮಾಡಿದ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಅಜಿಂಕ್ಯ ರಹಾನೆ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ವಿಜಯಕ್ಕೆ ಶುಭ ಕೋರಿದರು. ಇದರ ಜೊತೆಗೆ ಇನ್ನೂ ಗೆಲುವುಗಳು ಟೀಮ್ ಇಂಡಿಯಾಗೆ ಬರಲಿದೆ ಎಂದು ಅಜಿಂಕ್ಯಾ ರಹಾನೆ ಬರೆದುಕೊಂಡಿದ್ದರು. ಈ ಮೂಲಕ ಮುಂಬರಲಿರುವ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ತಮ್ಮ ನಾಯಕತ್ವದ ಭಾರತ ತಂಡ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಅಜಿಂಕ್ಯ ರಹಾನೆ ವ್ಯಕ್ತಪಡಿಸಿದ್ದರು.