
ಕೋಲ್ಕತ್ತಾ, ಮಾರ್ಚ್ 26: ಈ ಬಾರಿಯ ಐಪಿಎಲ್ನ 2ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆ್ಯಂಡ್ರೆ ರಸೆಲ್ 19 ಎಸೆಗಳಿಗೆ ಅಜೇಯ 49 ರನ್ ಸಿಡಿಸಿದ್ದರು. ಸೋಲಿನಂಚಿನಲ್ಲಿದ್ದ ಕೋಲ್ಕತ್ತಾ ರೋಚಕ ರೀತಿಯಲ್ಲಿ ಪಂದ್ಯವನ್ನು ಗೆದ್ದುಕೊಂಡಿತ್ತು. ರಸೆಲ್ ಅಂದು ಕೋಲ್ಕತ್ತಾ ಅಭಿಮಾನಿಗಳ ಪಾಲಿಗೆ ಹೀರೋ ಅನ್ನಿಸಿದ್ದರು.
ಕೋಲ್ಕತ್ತಾ ಪಾಲಿನ ಅಂದಿನ ಮೊದಲ ಪಂದ್ಯದಲ್ಲಿ ತಂಡಕ್ಕೆ 6 ವಿಕೆಟ್ ಜಯದೊಂದಿಗೆ ಶುಭಾರಂಭ ಕಾಣಲು ಕಾರಣರಾದ ರಸೆಲ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೆಕೆಆರ್ ಗೆಲ್ಲಿಸಿ ಪೆವಿಲಿಯನ್ನತ್ತ ಬರುವಾಗ ಕೋಲ್ಕತ್ತಾ ಅಭಿಮಾನಿಗಳ ಕೇಕೆ, ಹರ್ಷೋದ್ಘಾರಕ್ಕೆ ರಸೆಲ್ಗೆ ಆವತ್ತು ಅತ್ತುಬಿಡಬೇಕು ಅನ್ನಿಸಿತ್ತಂತೆ.
ರಸೆಲ್ ಭಾವುರಾಗಿದ್ದ ಬಗ್ಗೆ ಕೆಕೆಆರ್ ಸಹ ಮಾಲಕ, ಬಾಲಿವುಡ್ ನಟ ಶಾರೂಖ್ ಖಾನ್ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. 'ಪಂದ್ಯದ ಬಳಿಕ ಅಭಿಮಾನಿಗಳ ಸಂಭ್ರಮ, ಸ್ವಾಗತಕ್ಕೆ ಭಾವುಕನಾಗಿ ಅಳಬೇಕು ಅನ್ನಿಸಿತ್ತಂತೆ. ಆದರೆ ಸಾರ್ವಜನಿಕವಾಗಿ ಅಳೋದು ಸರಿಯಲ್ಲ ಅಂತ ಗಟ್ಟಿ ಮನಸ್ಸು ಮಾಡಿದೆ' ಎಂದು ರಸೆಲ್ ನನ್ನ ಬಳಿಕ ಹೇಳಿಕೊಂಡರು' ಎಂದು ಕಿಂಗ್ ಖಾನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಭಾನುವಾರ (ಮಾರ್ಚ್ 25) ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಸನ್ ರೈಸರ್ಸ್ ತಂಡ ಡೇವಿಡ್ ವಾರ್ನರ್ ಅವರ ಸ್ಫೋಟಕ ಅರ್ಧಶತಕದೊಂದಿಗೆ (85 ರನ್, 53 ಎಸೆತ) 20 ಓವರ್ಗೆ 3 ವಿಕೆಟ್ ಕಳೆದು 181 ರನ್ ಬಾರಿಸಿತ್ತು.
ಕೆಕೆಆರ್ 19.4 ಓವರ್ಗೆ 4 ವಿಕೆಟ್ ಕಳೆದು 183 ರನ್ ಪೇರಿಸುವುದರೊಂದಿಗೆ ರೋಚಕ ಗೆಲುವನ್ನಾಚರಿಸಿತ್ತು. ಅಂದ್ಹಾಗೆ ಮನೆಯಲ್ಲಿದ್ದಾಗ ಪ್ರತಿ 2 ದಿನಕ್ಕೊಮ್ಮೆ 300 ಪುಶ್ಅಪ್ಗಳನ್ನು ತೆಗೆಯುವುದಾಗಿ ಆ್ಯಂಡ್ರೆ ರಸೆಲ್ ಪಂದ್ಯದ ಬಳಿಕ ಹೇಳಿಕೊಂಡಿದ್ದರು. ರಸೆಲ್ ಸ್ಫೋಟಕ ಬ್ಯಾಟಿಂಗ್ನ ಗುಟ್ಟು ಇದೇ ಇರಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಈಗ ಮಾತನಾಡಿಕೊಳ್ಳುತ್ತಿದ್ದಾರೆ.