ರಾಜ್ಯಗಳ ಕ್ರಿಕೆಟ್ ಲೀಗ್ ಮೇಲೆ ನಿಯಂತ್ರಣ: ಬಿಸಿಸಿಐ ಹೊಸ ಮಾರ್ಗದರ್ಶಿ
ಮುಂಬೈ, ಜುಲೈ 4: ರಾಜ್ಯಗಳಿಂದ ನಡೆಸಲಾಗುವ ಟಿ 20 ಲೀಗ್ಗಳ ಮೇಲೆ ಬಿಸಿಸಿಐ ಕಠಿಣ ಮಾರ್ಗದರ್ಶಿಯನ್ನು ಸಿದ್ಧಪಡಿಸಿದೆ.
ರಾಜ್ಯಮಟ್ಟದಲ್ಲಿ ಲೀಗ್ಗಳನ್ನು ಆಯೋಜಿಸುವಲ್ಲಿ ಅನಧಿಕೃತ ವ್ಯಕ್ತಿಗಳ ಹಸ್ತಕ್ಷೇಪವನ್ನು ನಿಯಂತ್ರಿಸಲು ಮತ್ತು ಭಾರತ ಅಂತರರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ಪಂದ್ಯಗಳನ್ನು ರಕ್ಷಿಸುವ ದೃಷ್ಟಿಯಿಂದ ಬಿಸಿಸಿಐ ಈ ಕ್ರಮಕ್ಕೆ ಮುಂದಾಗಿದೆ.
ಇದರಿಂದ ಕರ್ನಾಟಕ ಪ್ರೀಮಿಯರ್ ಲೀಗ್, ತಮಿಳುನಾಡು ಪ್ರೀಮಿಯರ್ ಲೀಗ್ ಮುಂತಾದ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ನಡೆಯುವ ಕ್ರಿಕೆಟ್ ಲೀಗ್ಗಳ ಮೇಲೆ ನಿಯಂತ್ರಣ ಸಾಧಿಸುವುದು ಸಾಧ್ಯವಾಗಲಿದೆ. ರಾಜ್ಯ ಸಂಸ್ಥೆಗಳು ತಮ್ಮ ತೀರ್ಮಾನಕ್ಕೆ ಅನುಗುಣವಾಗಿ ಕ್ರಿಕೆಟ್ ಲೀಗ್ ಆಯೋಜಿಸುವ, ಬದಲಾವಣೆ ಮಾಡುವ ಅಧಿಕಾರಕ್ಕೆ ಕತ್ತರಿ ಬೀಳಲಿದೆ.
ಅಲ್ಲದೆ, ಈ ಟೂರ್ನಿಗಳಲ್ಲಿ ತಂಡಗಳ ಮಾಲೀಕರ ವರ್ತನೆ, ಮೋಸದಾಟದ ವ್ಯಕ್ತಿಗಳ ಪಾಲ್ಗೊಳ್ಳುವಿಕೆಗೆ ಕಡಿವಾಣ ಬೀಳಲಿದೆ ಎಂದು ಬಿಸಿಸಿಐ ಹೇಳಿದೆ.

ಸಿಒಎ ಅನುಮೋದನೆಗೆ
ಬಿಸಿಸಿಐನ ಕಾರ್ಯಕಾರಿ ಮತ್ತು ನಿರ್ವಹಣಾ ತಂಡವು ಈ ಮಾರ್ಗದರ್ಶಿಗಳನ್ನು ಆಡಳಿತಗಾರರ ಸಮಿತಿಗೆ (ಸಿಒಎ) ರವಾನಿಸಿದೆ. ಸಿಒಎ ಇದಕ್ಕೆ ಅನುಮೋದನೆ ನೀಡಿದರೆ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೂ ಮಾರ್ಗದರ್ಶಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ನೋಟಿಸ್ ನೀಡಲಾಗುತ್ತದೆ.
ಜಗತ್ತಿನಾದ್ಯಂತ ನಡೆಯುತ್ತಿರುವ ಟಿ20 ಲೀಗ್ಗಳ ಮೇಲೆ ನಿಯಂತ್ರಣ ಹೇರಲು ಇತ್ತೀಚೆಗೆ ಐಸಿಸಿ ಮುಂದಾದ ಬೆನ್ನಲ್ಲೇ ಬಿಸಿಸಿಐ ಕೂಡ ಮಾರ್ಗದರ್ಶಿಯನ್ನು ರೂಪಿಸಿದೆ.

ಸ್ಥಳೀಯರಿಗೆ ಮಾತ್ರ ಅವಕಾಶ
ರಾಜ್ಯ ಸಂಸ್ಥೆಗಳ ಮಟ್ಟದಲ್ಲಿ ಆಡಲಾಗುವ ಎಲ್ಲ ಲೀಗ್ಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕ್ರಮಗಳು, ಲೀಗ್ಗಳ ಕಾರ್ಯಾಚರಣೆ ಪ್ರಕ್ರಿಯೆಗಳ ಕುರಿತು ವಿವರಿಸಲಾಗಿದೆ. ಅಲ್ಲದೆ, ಸ್ಥಳೀಯ ಲೀಗ್ಗಳಲ್ಲಿ ಹೊರಭಾಗದ ಆಟಗಾರರಿಗೆ ಅವಕಾಶ ನೀಡದೆ ಇರುವ ಕುರಿತೂ ಸ್ಪಷ್ಟವಾಗಿ ಹೇಳಲಾಗಿದೆ.
ಅಲ್ಲದೆ ಈ ಲೀಗ್ಗಳಲ್ಲಿ ಆಡುವ ತಂಡಗಳ ಕೋಚ್ಗಳು, ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗಳು ಕೂಡ ಅದೇ ರಾಜ್ಯದವರಾಗಿರಬೇಕು ಎಂದು ಮಾರ್ಗದರ್ಶಿಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ತರಬೇತಿಗೆ ಹೊರ ರಾಜ್ಯಗಳಿಂದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತು. ಬಿಸಿಸಿಐನ ಹೊಸ ಮಾರ್ಗದರ್ಶಿ ಇದಕ್ಕೆ ಅವಕಾಶ ನೀಡುವುದಿಲ್ಲ.

ನಿರ್ದಿಷ್ಟ ಅವಧಿಯಲ್ಲೇ ನಡೆಸಬೇಕು
ರಾಜ್ಯ ಲೀಗ್ಗಳು ನಿರ್ದಿಷ್ಟ ಕಾಲಾವಧಿಯಲ್ಲಿ ನಡೆಯಬೇಕಾಗುತ್ತದೆ. ಸೆಪ್ಟೆಂಬರ್ 15ರಿಂದ ಫೆಬ್ರುವರಿ ಕೊನೆಯವರೆಗೂ ಲೀಗ್ಗಳನ್ನು ಆಯೋಜಿಸುವಂತಿಲ್ಲ. ಹಾಗೆಯೇ ಐಪಿಎಲ್ ಆರಂಭದ ಮತ್ತು ಮುಕ್ತಾಯದ ನಂತರದ 15 ದಿನಗಳಲ್ಲಿಯೂ ಟೂರ್ನಿ ನಡೆಸುವಂತಿಲ್ಲ.
ಸಾಮಾನ್ಯವಾಗಿ ಐಪಿಎಲ್ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಡೆಯುವುದರಿಂದ ರಾಜ್ಯ ಮಟ್ಟದ ಲೀಗ್ ಪಂದ್ಯಗಳು ಮಾರ್ಚ್ ಮೊದಲ ಎರಡು ಅಥವಾ ಮೂರು ವಾರಗಳಲ್ಲಿ ನಡೆಯಬೇಕಾಗುತ್ತದೆ. ಇಲ್ಲವೇ ಜೂನ್ ಮಧ್ಯಭಾಗದಿಂದ ಸೆಪ್ಪೆಂಬರ್ 14ರವರೆಗೆ ಆಯೋಜಿಸಬೇಕು.

ಭ್ರಷ್ಟಾಚಾರ ನಿಯಂತ್ರಣಕ್ಕೆ ನಿಯಮ
ಯಾವುದೇ ಟೂರ್ನಮೆಂಟ್ಗೆ ಅನುಮೋದನೆ ದೊರಕಿದ ಬಳಿಕ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಅದರ ಮೇಲೆ ನಿಗಾ ಇರಿಸಲಿದೆ.
ಪ್ರತಿ ಟೂರ್ನಿಗೂ ಇಬ್ಬರು ಭ್ರಷ್ಟಾಚಾರ ನಿಯಂತ್ರಣ ಅಧಿಕಾರಿಗಳನ್ನು ಎಸಿಯು ನಾಮನಿರ್ದೇಶನ ಮಾಡಲಿದೆ. ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿಯನ್ನೂ ನೇಮಕ ಮಾಡಲು ಅದಕ್ಕೆ ಅವಕಾಶವಿದೆ.
ಎಸಿಒಗಳು ನೇರವಾಗಿ ಎಸಿಯುಗೆ ವರದಿ ನೀಡಲಿದ್ದಾರೆ. ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಸಂಹಿತೆ ಅಡಿಯಲ್ಲಿ ತಂಡದ ಅಧಿಕಾರಿಗಳು, ಆಟಗಾರರು, ತಂಡದ ಸಿಬ್ಬಂದಿ ಮತ್ತು ಪಂದ್ಯದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸುವ ಅಧಿಕಾರ ಪಡೆದುಕೊಳ್ಳಲಿದ್ದಾರೆ.

ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು (ಪಿಎಂಒಎ) ಒಳಬರುವ ಹಾಗೂ ಹೊರಹೋಗುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಭ್ರಷ್ಟಾಚಾರ ನಿಯಂತ್ರಣದ ಕ್ರಮದಡಿ ಕಡ್ಡಾಯವಾಗಿದೆ. ಈ ಕ್ಯಾಮೆರಾಗಳು ಆಟಗಾರರು ಮತ್ತು ಸಿಬ್ಬಂದಿಯು ಕ್ರೀಡಾಂಗಣಕ್ಕೆ ಆಗಮಿಸುವ ಸಮಯದಿಂದ ಪಂದ್ಯ ಮುಕ್ತಾಯವಾಗುವ ಸಮಯದವರೆಗೆ ಮುದ್ರಿಸಿಕೊಳ್ಳಲಿವೆ. ಪಂದ್ಯ ಮುಗಿಯುತ್ತಿದ್ದಂತೆಯೇ ವಿಡಿಯೋಗಳನ್ನು ಎಸಿಯು ಅಧಿಕಾರಿಗಳು ಒಪ್ಪಿಸಬೇಕಾಗುತ್ತದೆ.
ಇದಲ್ಲದೆ, ಯಾವುದೇ ತಂಡಗಳ ಮಾಲೀಕರು ಅಥವಾ ಅವರ ಸಂಬಂಧಿಕರಿಗೆ 'ಮೆಂಟರ್', 'ಸೆಲೆಕ್ಟರ್' ಮುಂತಾದ ಹೆಸರಿನೊಂದಿಗೆ ಪಿಎಂಒಎ ಮಾನ್ಯತೆ ನೀಡಲು ಅವಕಾಶವಿಲ್ಲ. ವೃತ್ತಿಪರ ಸಿಬ್ಬಂದಿಗೆ ಮಾತ್ರ ಪ್ರವೇಶ ನೀಡಬೇಕಾಗುತ್ತದೆ.
30 ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಯಾವುದೇ ಉಡುಗೊರೆಗಳನ್ನು ಪಡೆದುಕೊಂಡಿದ್ದರೆ ಆಟಗಾರರು ಮತ್ತು ಅಧಿಕಾರಿಗಳು ಅದರ ಮಾಹಿತಿಯನ್ನು ನೀಡುವುದು ಕಡ್ಡಾಯ.

ಮೊದಲೇ ಅನುಮತಿ ಕಡ್ಡಾಯ
ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕಟ್ಟುನಿಟ್ಟಾದ ಪ್ರಕ್ರಿಯೆಗಳನ್ನು ಅನುಸರಿಸಬೇಕು. ಟೂರ್ನಮೆಂಟ್ ಆರಂಭಕ್ಕೂ ಕನಿಷ್ಠ 45 ದಿನಗಳ ಮೊದಲು ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು. ಈ ನಿಯಮ ಈಗಾಗಲೇ ವಿವಿಧ ಟೂರ್ನಮೆಂಟ್ಗಳನ್ನು ನಡೆಸುತ್ತಿರುವ ಸಂಸ್ಥೆಗಳನ್ನೂ ಒಳಗೊಂಡಂತೆ ಎಲ್ಲರಿಗೂ ಅನ್ವಯಿಸುತ್ತದೆ.
ಅರ್ಜಿಯನ್ನು ಕಾಗದ ಹಾಗೂ ಇಮೇಲ್ ರೂಪದಲ್ಲಿ ಬಿಸಿಸಿಐ ಕಾರ್ಯದರ್ಶಿಗೆ ಕಳುಹಿಸಬೇಕು. ಇದರಲ್ಲಿ ಟೂರ್ನಿ ಆಯೋಜಿಸುತ್ತಿರುವ ಸಮಿತಿಗಳ ಮಾಹಿತಿ, ತಂಡಗಳ ತರಬೇತಿಯಿಂದ ವಸತಿ ವ್ಯವಸ್ಥೆವರೆಗಿನ ವಿವರಗಳು, ಆಟಗಾರರು, ಸಿಬ್ಬಂದಿ, ಐಕಾನ್ಗಳು, ತಂಡಗಳ ಮಾಲೀಕರು ಮತ್ತು ಅಧಿಕಾರಿಗಳು ಹಾಗೂ ಪ್ರಾಯೋಜಕರ ಕುರಿತ ಸಂಪೂರ್ಣ ಪಟ್ಟಿಯನ್ನು ಒದಗಿಸಬೇಕು.
ಬಿಸಿಸಿಐ ನಿಷೇಧ ಹೇರಿರುವ ಯಾವುದೇ ಆಟಗಾರನೊಂದಿಗೆ ರಾಜ್ಯ ಸಂಸ್ಥೆಗಳು ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳುವಂತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications