ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದ ನಂತರ ಬಿಸಿಸಿಐ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ನಂತರ, ನೂತನ ಆಯ್ಕೆ ಸಮಿತಿ ರಚನೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು.
ಅರ್ಜಿ ಸಲ್ಲಿಕೆಗೆ ನವೆಂಬರ್ 28ರಂದು ಕೊನೆಯ ದಿನವಾಗಿದೆ, ಬಿಸಿಸಿಐ ಈಗಾಗಲೇ 80ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ನೆಚ್ಚಿನ ಅಭ್ಯರ್ಥಿಗಳಲ್ಲಿ ಒಬ್ಬರಾದ ಭಾರತದ ಮಾಜಿ ಕ್ರಿಕೆಟಿಗ, ತಮಿಳುನಾಡಿನ ಲಕ್ಷ್ಮಣ್ ಶಿವರಾಮಕೃಷ್ಣನ್ ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಆಯ್ಕೆ ಸಮಿತಿಗಳಲ್ಲಿ ಒಂದೇ ವಲಯದಿಂದ ಇಬ್ಬರು ಆಯ್ಕೆಗಾರರನ್ನು ನೇಮಿಸುವ ಸಾಧ್ಯತೆ ಇಲ್ಲ. ತಮಿಳುನಾಡಿನ ಮತ್ತೊಬ್ಬ ಮಾಜಿ ಕ್ರಿಕೆಟಿಗ ಶರತ್ ಶ್ರೀಧರನ್ ಪ್ರಸ್ತುತ ಜೂನಿಯರ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಇನ್ನಾದರೂ ರಿಷಬ್ ಪಂತ್ಗೆ ವಿಶ್ರಾಂತಿ ನೀಡಿ ಎಂದು ಸಲಹೆ ನೀಡಿದ ಮಾಜಿ ಕ್ರಿಕೆಟಿಗ
ನವೆಂಬರ್ 28ರಂದು ಸಂಜೆ 6 ಗಂಟೆಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಡಿಸೆಂಬರ್ ತಿಂಗಳ ಮಧ್ಯದೊಳಗೆ ಹೊಸ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಚೇತನ್ ಶರ್ಮಾ, ಸುನಿಲ್ ಜೋಶಿ, ದೇಬಶಿಶ್ ಮೊಹಂತಿ ಮತ್ತು ಹರ್ವಿಂದರ್ ಸಿಂಗ್ ಹೊಸ ಸಮಿತಿ ಬರುವವರೆಗೆ ಆಯ್ಕೆ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊಸ ಆಯ್ಕೆ ಸಮಿತಿಯ ಮೊದಲ ಕೆಲಸವಾಗಿದೆ.
ದಕ್ಷಿಣ ವಲಯದ ಪ್ರಬಲ ಅಭ್ಯರ್ಥಿ ಲಕ್ಷ್ಮಣ್ ಶಿವರಾಮಕೃಷ್ಣನ್
ದಕ್ಷಿಣ ವಲಯದಿಂದ ಪ್ರಬಲ ಅಭ್ಯರ್ಥಿಯಾಗಿದ್ದರೂ, ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಆಯ್ಕೆಯಾಗುವ ಸಾಧ್ಯತೆ ಕಡಿಮೆ ಇದೆ. ಒಂದೇ ರಾಜ್ಯದಿಂದ ಕಿರಿಯ ಮತ್ತು ಹಿರಿಯ ಆಯ್ಕೆ ಸಮಿತಿಗಳಲ್ಲಿ ಇಬ್ಬರು ಆಯ್ಕೆಗಾರರನ್ನು ಆಯ್ಕೆ ಮಾಡಲು ಬಿಸಿಸಿಐ ಒಪ್ಪಿಗೆ ನೀಡಲ್ಲ ಎನ್ನಲಾಗಿದೆ.
ಕಳೆದ ಬಾರಿಯೇ ಶಿವರಾಮಕೃಷ್ಣನ್ ಆಯ್ಕೆಯಾಗುವ ಸಾಧ್ಯತೆ ಇತ್ತು. ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ನ ಎನ್ ಶ್ರೀನಿವಾಸನ್ ಅವರ ಬೆಂಬಲವನ್ನು ಪಡೆದಿದ್ದರು. ಆದರೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಬೆಂಬಲದೊಂದಿಗೆ ಚೇತನ್ ಶರ್ಮಾ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು. ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು, ರೋಜರ್ ಬಿನ್ನಿ ಈಗ ಅಧ್ಯಕ್ಷರಾಗಿದ್ದಾರೆ, ಅವರು ಶ್ರೀನಿವಾಸನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ನಿಯಮಗಳನ್ನು ಮೀರಿ ಆಯ್ಕೆ ಮಾಡುವ ಸಾಧ್ಯತೆಯನ್ನು ಕೂಡ ಈ ಬಾರಿ ತಳ್ಳಿಹಾಕುವಂತಿಲ್ಲ.
ಭಾರತದ ಮಾಜಿ ಬೌಲರ್ ಅಜಿತ್ ಅಗರ್ಕರ್ ಅರ್ಜಿ ಸಲ್ಲಿಸಿದರೆ ಅವರು ಆಯ್ಕೆಗಾರರ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಬಿಸಿಸಿಐ ಟಿ20 ಪಂದ್ಯಗಳಲ್ಲಿ ಆಡಿ ಅನುಭವ ಇರುವ ಅಭ್ಯರ್ಥಿಯನ್ನು ಹುಡುಕುತ್ತಿರುವುದರಿಂದ, ಅಗರ್ಕರ್ ಉತ್ತಮ ಆಯ್ಕೆಯಾಗಿದ್ದಾರೆ. ಅಗರ್ಕರ್ ಐಪಿಎಲ್ ಸೇರಿದಂತೆ 62 ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.