
ತಿರವನಂತಪುರಂ, ನವೆಂಬರ್ 2: ಭಾರತದ ಏಕದಿನ ತಂಡದಲ್ಲಿ ಎಂಎಸ್ ಧೋನಿ ಅವಿಭಾಜ್ಯ ಅಂಗವಾಗಿಯೇ ಇರಲಿದ್ದಾರೆ. ಮುಂಬರುವ ಟಿ20 ಸರಣಿಗಳಲ್ಲಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡುವ ಸಲುವಾಗಿಯಷ್ಟೇ ಅವರು ಆಡುತ್ತಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಈ ಮೂಲಕ ಅವರು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲಿದ್ದಾರೆ ಎಂಬ ಊಹಾಪೋಹಗಳನ್ನು ನಿರಾಕರಿಸಿದ್ದಾರೆ.
'ಅವರು ಈ ತಂಡದ ಅವಿಭಾಜ್ಯ ಅಂಗವಾಗಿ ಈಗಲೂ ಇದ್ದಾರೆ. ಟಿ20 ಮಾದರಿಯಲ್ಲಿ ರಿಷಬ್ ಪಂತ್ ಅವರಂತಹ ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗಬೇಕು ಎನ್ನುವುದು ಅವರ ಅನಿಸಿಕೆಯಾಗಿದೆ' ಎಂದು ಕೊಹ್ಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗಳಿಂದ ಮಾಜಿ ನಾಯಕ ಧೋನಿ ಅವರನ್ನು ಕೈಬಿಡಲಾಗಿದೆ.
'ಅವರು ನಮ್ಮ ಜತೆ ಏಕದಿನ ಪಂದ್ಯಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಈ ದೃಷ್ಟಿಯಿಂದ ಅವರು ಯುವ ಆಟಗಾರರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರಷ್ಟೇ. ಬೇರೆಯವರು ಯೋಚಿಸುವಂತೆ ಏನೂ ಇಲ್ಲ. ನಾಯಕನಾಗಿ ನಾನು ಈ ಬಗ್ಗೆ ನಿಮಗೆ ಭರವಸೆ ನೀಡುತ್ತಿದ್ದೇನೆ' ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.