
ಕೊರೊನಾವೈರಸ್ನ ಎರಡನೇ ಅಲೆ ಭಾರತದಲ್ಲಿ ನಿಧಾನಕ್ಕೆ ಕಡಿಮೆಯಾಗುತ್ತಿದೆ. ಈ ಅವಧಿಯಲ್ಲಿ ಸಾಕಷ್ಟು ಜನರು ಈ ಸೋಂಕಿಗೆ ತುತ್ತಾಗಿದ್ದು ಹಲವಾರು ಜನರು ಬಲಿಯಾಗಿದ್ದಾರೆ. ಈ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗಳ ಹಾಗೂ ವೈದ್ಯರುಗಳ ಮತ್ತು ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮಹತ್ವದ್ದಾಗಿದೆ.
ಇಂಥಾ ಸಂದರ್ಭದಲ್ಲಿ ಕರ್ನಾಟಕದ ಕೋಲಾರದ ಖಾಸಗಿ ಆಸ್ಪತ್ರೆಯೊಂದರ ಕಾರ್ಯ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರಿಂದ ಮೆಚ್ಚುಗೆಗೆ ಒಳಗಾಗಿದೆ. ಕೊರೊನಾ ವೈರಸ್ನ ಈ ಕಾಲದಲ್ಲಿ ಕೋಲಾರದ ಲಕ್ಷ್ಮೀ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವ ರೀತಿಗೆ ಹಾಗೂ ಅಲ್ಲಿನ ವೈದ್ಯರುಗಳಾದ ಡಾ. ಗುಣ ಪ್ರಕಾಶ್, ಡಾ ರಾಧಾ ಹಾಗೂ ಡಾ. ಜಗಮೋಹನ್ ಕಾರ್ಯವೈಖರಿಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಡಿಸಿದ್ದಾರೆ.
"ನಾನು ಈ ಸಂದರ್ಭದಲ್ಲಿ ನಾನು ಕೋಲಾರದ ಲಕ್ಷ್ಮೀ ಆಸ್ಪತ್ರೆಯ ವೈದ್ಯರಾದ ಡಾ. ಗುಣ ಪ್ರಕಾಶ್, ಡಾ. ಜಗಮೋಹನ್ ಹಾಗೂ ಡಾ ರಾಧಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕೊರೊನಾವೈರಸ್ನ ಈ ಸಂದರ್ಭದಲ್ಲಿ ನೀವು ಶ್ರೇಷ್ಠ ಕಾರ್ಯವನ್ನು ಮಾಡಿದ್ದೀರಿ. ಕೊರೊನಾ ವೈರಸ್ಗೆ ತುತ್ತಾದ ಸಾಕಷ್ಟು ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಿದ್ದೀರಿ. ನನ್ನ ಗೆಳೆಯರು ಹಾಗೂ ಇತರ ಸಾಕಷ್ಟು ಜನರು ಈ ಬಗ್ಗೆ ನನ್ನಲ್ಲಿ ಹೇಳಿಕೊಂಡಿದ್ದಾರೆ" ಎಂದು ಪಠಾಣ್ ಈ ವಿಡಿಯೋದಲ್ಲಿ ಹೇಳಿದ್ದಾರೆ
ಮುಂದುವರಿದು ಮಾತನಾಡಿರುವ ಅವರು "ಈ ಉತ್ತಮ ಕಾರ್ಯವನ್ನು ನೀವು ಮುಂದುವರಿಸಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಹಾಯಮಾಡುವ ನಿರೀಕ್ಷೆಯನ್ನು ಹೊಂದಿದ್ದೇನೆ. ವೈದ್ಯರಿಗೂ ಕುಟುಂಬದಿಂದ ದೂವರವಿದ್ದು ರೋಗಿಗಳನ್ನು ನೋಡಿಕೊಳ್ಳುವುದು ಎಷ್ಟು ಕಷ್ಟವಿದೆ ಎಂಬ ಅರಿವು ನನಗಿದೆ. ನಿಮ್ಮ ಉತ್ತಮ ಕಾರ್ಯವನ್ನು ಮುಂದುವರಿಸಿ ಧನ್ಯವಾದಗಳು" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.